'ಹೆಚ್ಡಿಕೆ ಹೇಳುತ್ತಿರೋ ಆ ವೆಂಕಟೇಶ್ ಗೌಡ ನಾನಲ್ಲ'
ಐಟಿ ಇಲಾಖೆಗೆ ಕುಮಾರ ಸ್ವಾಮಿ ವಿರುದ್ಧ ದೂರು ನೀಡಿದ್ದು ನಾನಲ್ಲ ಎಂದು ಹೇಳಿದ ಕಾಂಗ್ರೆಸ್ ನ ಮಾಜಿ ಸದಸ್ಯ ವೆಂಕಟೇಶ್ ಗೌಡ. ಕುಮಾರ ಸ್ವಾಮಿ ಆರೋಪಕ್ಕೆ ತಿರುಗೇಟು.
ಬೆಂಗಳೂರು, ಮೇ 24: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ಮಾಜಿರುವ ಆರೋಪಗಳಲ್ಲಿ ಹೆಸರಿಸಲಾಗಿರುವ ವೆಂಕಟೇಶ್ ಗೌಡ ನಾನಲ್ಲ ಎಂದು ಕೆಜೆಪಿ ಪಕ್ಷದ ಮಾಜಿ ನಾಯಕ ವೆಂಕಟೇಶ್ ಗೌಡ ತಿಳಿಸಿದ್ದಾರೆ.
ಬುಧವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ, ''ನನ್ನ ವಿರುದ್ಧ ಆದಾಯ ತೆರಿಗೆ ಇಲಾಖೆಯಲ್ಲಿ ದೂರು ದಾಖಲಾಗಿದೆ. ಆದರೆ, ಈ ದೂರನ್ನು ಬಿಎಸ್ ವೈ ಮನೆಯಲ್ಲೇ ಸಿದ್ಧಪಡಿಸಲಾಗಿದೆ. ಈ ದೂರನ್ನು ವೆಂಕಟೇಶ್ ಗೌಡ ಎಂಬುವರು ಕೊಟ್ಟಿದ್ದಾರೆಂಬುದು ನನಗೆ ಸ್ಪಷ್ಟವಾಗಿದೆ. ನಮ್ಮ ಕುಟುಂಬವನ್ನು ಮುಗಿಸಲು ಹೂಡಲಾಗಿರುವ ಷಡ್ಯಂತ್ರವಿದು'' ಎಂದು ಆರೋಪಿಸಿದ್ದರು.
ಆದರೆ, ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ವೆಂಕಟೇಶ್ ಗೌಡ, ಕುಮಾರ ಸ್ವಾಮಿ ವಿರುದ್ಧ ಕೊಂಚ ಗರಂ ಆದರು. ''ಯಾರ ಮೇಲಾದರೂ ಆಪಾದನೆ ಮಾಡುವ ಹಾಗಿದ್ದರೆ ಕೊಂಚ ಯೋಚಿಸಿ ಆಪಾದನೆ ಮಾಡಲಿ. ನಾನು ಕಾಂಗ್ರೆಸ್ ನಲ್ಲಿ ಇದ್ದಿದ್ದು ನಿಜ. ಆನಂತರ, ಕೆಜಿಪಿಯಿಂದ ಸ್ಪರ್ಧಿಸಿದ್ದೆ. ಆದರೆ, ದೂರು ನೀಡಿದ್ದು ನಾನಲ್ಲ. ಇದನ್ನು ಪರಾಮರ್ಶಿಸಿದ ನಂತರ, ಕುಮಾರ ಸ್ವಾಮಿ ಆರೋಪ ಮಾಡಲಿ'' ಎಂದರು.