ಮೊಳದುದ್ದವೂ ಇಲ್ಲದ ಮಗುವಿನ ಬದುಕೇ ಮುಗಿದುಹೋಯಿತು...
ಅದೆಂಥ ಕಲ್ಲು ಹೃದಯವೂ ಕರಗುವ ದೃಶ್ಯ. ಪುಟ್ಟ ಮಗುವಿನ ಶವ ಹಿಡಿದು ತೋರುತ್ತಿರುವ ಆಫ್ಘನ್ ನ ಆ ವ್ಯಕ್ತಿ ಮುಖದಲ್ಲಿ ಯಾವ ಭಾವನೆಯೂ ಕಾಣುತ್ತಿಲ್ಲ. ಇಂಥ ಎಷ್ಟೋ ಸಾವು ಕಂಡ ನಂತರ ಹೀಗಾಗಿರಬಹುದೇನೋ? ಅಲ್ಲಿ ಸಾವು ದಿನದ ವರ್ತನೆ ಲೆಕ್ಕದಲ್ಲಿ ಕಾಣುತ್ತದೆ. ಒಬ್ಬ ಸರಕಾರಿ ಸೈನಿಕ ಮತ್ತೊಬ್ಬ ತಾಲಿಬಾನಿ ಸೈನಿಕ. ಬಂದೂಕು-ಗುಂಡು, ಬಾಂಬುಗಳಿಗೆ ಸಾಯುವವರ ಚಹರೆ ಹೇಗೆ ಸಿಗಬೇಕು?
ಇಲ್ಲಿ ಕೆಲವು ದುಃಖದ ಸಂಗತಿಗಳಿವೆ ನಿವೃತ್ತ ಸೈನಿಕನ ಮನೆಯಲ್ಲಿ ಸಾವಿನ ಮೌನ. ಜಮ್ಮು-ಕಾಶ್ಮೀರದಲ್ಲಿ ಪಾಕ್ ಪಡೆಯ ಗುಂಡಿನ ಏಟು ಬಿದ್ದು, ಗಾಯವಾಗಿ ಮಂಚದ ಮೇಲೆ ತಲೆ ಒರಗಿರುವ ಪುಟ್ಟ ಕಂದ. ಮಗುವಿಗೆ ಆಗುವ ತರಚು ಗಾಯದ ನೋವೇ ಹೃದಯಕ್ಕೆ ಇರಿದಂತಾಗುತ್ತದೆ. ಇನ್ನು ಈ ಗುಂಡೇಟಿನ ನೋವು, ಅಬ್ಬಾ ಭಗವಂತಾ!
ಅತ್ಯುತ್ತಮ ನಟಿ ಅನಿಸಿಕೊಂಡವಳ ಕೆನ್ನೆ ತುಂಬ ಸಂಭ್ರಮವೊಂದು ಮಾತ್ರ ಕಾಣುತ್ತಿದೆ. ಒಂದು ದಿನ ಹೀಗೇ ಕಳೆಯುತ್ತದೆ. ಸಾಲು-ಸಾಲು ಜನರ ನೋವಿನ ಕಣ್ಣೀರು, ಬಿಕ್ಕುತ್ತಿರುವವರ ಮಧ್ಯೆ ಬೆಳ್ಳಿ ಮಿಂಚಿನಂಥದ್ದೊಂದು ಹಾದು ಹೋಗುತ್ತದೆ. ಇಂದಿನ ಸಂಭಾಷಣೆಯಲ್ಲಿ ಬಿಕ್ಕುವ ಧ್ವನಿಯೇ ಕೇಳುತ್ತಿದೆ.
ಆ ಮಗು ತಾಲಿಬಾನೋ, ಆಫ್ಘನ್ ಸೈನಿಕನೋ
ಆಫ್ಘನ್ ವ್ಯಕ್ತಿಯೊಬ್ಬರು ಎತ್ತಿ ಹಿಡಿದಿರುವುದು ಮಗುವೊಂದರ ಶವ. ಕಾಬೂಲಿನ ಕುಂದುಜ್ ಉತ್ತರ ಪ್ರಾಂತ್ಯದಲ್ಲಿ ತಾಲಿಬಾನ್ ಹಾಗೂ ಆಫ್ಘನ್ ಪಡೆ ಮಧ್ಯೆ ನಡೆದ ಕಾಳಗದಲ್ಲಿ ಈ ಮಗು ಸಾವನ್ನಪ್ಪಿದೆ. ಅಮೆರಿಕಾ ಹಾಗೂ ಆಫ್ಘನ್ ಪಡೆಗಳು ಜಂಟಿಯಾಗಿ ಕೈಗೊಂಡ ಕಾರ್ಯಾಚರಣೆಯಲ್ಲಿ ಇಪ್ಪತ್ತಾರು ನಾಗರಿಕರು ಕೂಡ ಉಸಿರು ಚೆಲ್ಲಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ವೈಮಾನಿಕ ದಾಳಿ ಇನ್ನೂ ಮುಂದುವರಿದಿದ್ದು, ಗಾಯಾಳುಗಳ ಸಂಖ್ಯೆ ಹೆಚ್ಚುತ್ತಲೇ ಇದೆಯಂತೆ.
ಸೂತಕದ ಮನೆಯ ಶೋಕ ಕೇಳುತ್ತಾ
ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಸೈನಿಕ ರಾಮ್ ಕಿಶನ್ ಗ್ರೇವಾಲ್ ಸ್ವಗ್ರಾಮ ಭಿವಾನಿಯ ಬಾಮ್ಲಾದಲ್ಲಿ ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆ ನಡೆದಿತ್ತು. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಚಕ್ಕಳಮಕ್ಕಳ ಹಾಕಿ ಕೂತು, ಮೃತರ ಕುಟುಂಬದ ನೋವು ಕೇಳುತ್ತಿದ್ದ ದೃಶ್ಯವಿದು. ಏಕ ಶ್ರೇಣಿ-ಏಕ ಪಿಂಚಣಿ ಜಾರಿ ವಿಚಾರದಲ್ಲಿ ನಿರಾಸೆಗೊಂಡ ರಾಮ್ ಕಿಶನ್ ತಮ್ಮ ಪ್ರಾಣವನ್ನೇ ತೆಗೆದುಕೊಂಡರು.
ಎಲ್ಲರೂ ಒಂದೇ, ವೇದಿಕೆಯಲ್ಲಿ
ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ನಾಲ್ಕು ದಿನಗಳ ಪ್ರಶಿಕ್ಷಣ ಶಿಬಿರದ ಉದ್ಘಾಟನೆ ವೇಳೆ ಕೇಂದ್ರ ಸಚಿವ ಅನಂತ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್.ಅಶೋಕ್ ಎಲ್ಲರೂ ಒಂದೇ ವೇದಿಕೆಯಲ್ಲಿ ಕಂಡಿದ್ದು ಹೀಗೆ.
ಗುಂಡಿಗೆ ಗೊತ್ತೆ ಕಂದಮ್ಮ ಯಾರು
ಜಮ್ಮು-ಕಾಶ್ಮೀರದ ಆಸ್ಪತ್ರೆಯಲ್ಲಿ ಆ ಪುಟ್ಟ ಕಂದಮ್ಮನ ಹಣೆ ಮೇಲೊಂದು ಬ್ಯಾಂಡೇಜ್. ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ಮುದ್ದು ಕಂದಮ್ಮನ ಗಾಯಗೊಂಡಿದೆ. ಅದರ ಕ್ಷೇಮ ವಿಚಾರಿಸಲು ಮುಖ್ಯಮಂತ್ರಿ ಮುಫ್ತಿ ಮೆಹಬೂಬಾ ಹೋಗಿದ್ದಾರೆ. ಕಣಿವೆ ರಾಜ್ಯದಲ್ಲಿ ನೆಮ್ಮದಿ ಮರುಕಳಿಸುವುದಾದರೂ ಎಂದೋ?
ಯಾರಿಗೆ ಹೇಳಿದರೆ ದುಃಖ ಕರಗೀತು?
ಆ ಹೆಣ್ಣುಮಗಳು ಹಾಗೂ ಆಕೆಯ ಪತಿಗೆ ಹೇಳಿಕೊಳ್ಳುವುದಕ್ಕೆ ಎಷ್ಟೋ ದುಃಖವಿರುವಾಗಲೂ ಪೊಲೀಸರ ಪ್ರಶ್ನೆಗೆ ಜರ್ಝರಿತರಾಗಿ ಮಾಧ್ಯಮದ ಮುಂದೆ ಬಂದವರು ಇವರು. ಕೇರಳದವರು. ಆಕೆ ಅತ್ಯಾಚಾರ ಸಂತ್ರಸ್ತೆ. ಅತ್ಯಾಚಾರ ಆರೋಪ ಮಾಡಿರುವುದು ಪತಿಯ ಸ್ನೇಹಿತರ ಮೇಲೆ.
ಕೆನ್ನೆ ತುಂಬ ಸಂಭ್ರಮ
ಈಕೆ ಸ್ವೀಡನ್ ನ ನಟಿ ಸೆಸಿಲಿಯಾ ಸ್ಪ್ಯಾರೊಕ್. ಜಪಾನಿನ ಟೋಕಿಯೋ ಅಂತರರಾಷ್ಟ್ರೀಯ ಸಿನಿಮಾ ಫೆಸ್ಟಿವಲ್ ನಲ್ಲಿ ತನ್ನ ಸಿನಿಮಾ 'ಸ್ಯಾಮಿ ಬ್ಲಡ್' ನ ನಟನೆಗೆ ಅತ್ಯುತ್ತಮ ನಟಿ ಎನಿಸಿಕೊಂಡು ಪ್ರಶಸ್ತಿ ಪಡೆದ ನಂತರ ಕ್ಯಾಮೆರಾದ ಎದುರು ಕಂಡಿದ್ದು ಹೀಗೆ