ಮತ್ತೊಮ್ಮೆ ವಿಪಕ್ಷಗಳ ವಿರುದ್ದ ಸ್ಮೃತಿ ಇರಾನಿ 'ರಣಭೀಷಣ' ಭಾಷಣ
ಸತ್ತಮೇಲೆ ಗಂಗೆಯಲ್ಲಿ ತೇಲಿಬರುವ ನಮ್ಮ ದೇಹದ ಮೂಳೆಗಳನ್ನು ತೆಗೆದು ನಿಮ್ಮ ಕಿವಿಯ ಹತ್ತಿರ ಹಿಡಿಯಿರಿ, ಆಗಲೂ ಕೇಳುವ ಘೋಷಣೆ 'ಭಾರತ್ ಮಾತಾಕೀ ಜೈ', ಇದು ಕೇಂದ್ರ ಮಾನವ ಸಂಪನ್ಮೂಲ ಖಾತೆಯ ಸಚಿವೆ ಗುರುವಾರ (ಫೆ 25) ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಮುಖಂಡರ ವಿರುದ್ದ ವಾಗ್ದಾಳಿ ನಡೆಸಿದ ರೀತಿ.
ರೋಹಿತ್ ವೇಮುಲ, JNU ವಿಚಾರದಲ್ಲಿ ರಾಹುಲ್ ಗಾಂಧಿ ಮತ್ತು ವಿಪಕ್ಷಗಳ ವಿರುದ್ದ ಲೋಕಸಭೆಯಲ್ಲಿ ಬುಧವಾರ ವಾಕ್ ಪ್ರಹಾರ ನಡೆಸಿದ ನಂತರ, ಸ್ಮೃತಿ ಝುಬೆನ್ ಇರಾನಿ ರಾಜ್ಯಸಭೆಯಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ, ಗುಲಾಂನಬಿ ಆಜಾದ್ ಮತ್ತು ಎಡಪಕ್ಷಗಳ ವಿರುದ್ದ ಗುರುವಾರ ಹರಿಹಾಯ್ದರು. (ಸಂಸತ್ತಿನಲ್ಲಿ ಸ್ಮೃತಿ ವಾಗ್ದಾಳಿ)
ಪ್ರಖರ ಮಾತು, ನಿಖರ ದಾಖಲೆಗಳ ಮೂಲಕ ಮತ್ತೊಮ್ಮೆ ವಿರೋಧ ಪಕ್ಷಗಳ ಮುಖಂಡರ ಹೇಳಿಕೆಗೆ ತಿರುಗೇಟು ನೀಡಿದ ಸ್ಮೃತಿ, ನಾನು ರೋಹಿತ್ ವೇಮುಲ ತಾಯಿಯ ಜೊತೆ ಮಾತನಾಡಿದ್ದೆ, ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಈ ಮಾತನ್ನು ಹೇಳುತ್ತಿದ್ದೇನೆಂದು ಬಹಿರಂಗ ಪಡಿಸಿದ್ದಾರೆ.
ದುರ್ಗಾಮಾತೆ ಮತ್ತು ಮಹಿಷಾಸುರನ ಪುರಾಣದ ಕಥೆಯನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಸ್ಮೃತಿ, ನಿಮ್ಮೆಲ್ಲಾ ಪ್ರಶ್ನೆಗಳಿಗೂ ನಾನು ಉತ್ತರಿಸುತ್ತೇನೆ, ನಾನೇನೂ ಓಡಿ ಹೋಗುವುದಿಲ್ಲ, ಆದರೆ ನಾನಾಡುವ ಮಾತನ್ನು ನೀವು ಕೇಳಬೇಕು ಎಂದು ವಿರೋಧ ಪಕ್ಷದವರಿಗೆ ತಾಕೀತು ಮಾಡಿದರು. (ರಾಡಿ ಎಬ್ಬಿಸಿದ JNUನಲ್ಲಿನ ಕಾಂಡೋಮ್ ಹೇಳಿಕೆ)
ಸದನದಲ್ಲಿ ಮುಂದುವರಿದ ಸಚಿವೆ ಇರಾನಿ ಡೆಡ್ಲಿ ಸ್ಪೀಚ್, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಪಲಾಯನವಾದ ಮಾಡಬೇಡಿ
ನಾನು ಅಮೇಠಿಯಲ್ಲಿ ರಾಹುಲ್ ಗಾಂಧಿ ವಿರುದ್ದ ಸ್ಪರ್ಧಿಸಿದ್ದೆ ಎನ್ನುವ ಕಾರಣಕ್ಕಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಲಾಗುತ್ತಿದೆ. ನಿಮ್ಮೆಲ್ಲಾ ಆರೋಪಕ್ಕೆ ನಾನು ಉತ್ತರಿಸುತ್ತೇನೆ, ಆದರೆ ನಾನು ಉತ್ತರಿಸುವಾಗ ಸಭಾತ್ಯಾಗ ಮಾಡಿ ಪಲಾಯನವಾದ ಮಾಡಬೇಡಿ ಎಂದು ಸ್ಮೃತಿ ಇರಾನಿ ಲೇವಡಿ ಮಾಡಿದ್ದಾರೆ.(ಚಿತ್ರ: ಪಿಟಿಐ)
ರಾಜೀವ್ ಗಾಂಧಿ
ರಾಜೀವ್ ಗಾಂಧಿ ಅವರು ಅಧಿಕಾರ ಕಳೆದುಕೊಂಡಾಗ ವಿರೋಧ ಪಕ್ಷಗಳ ವಿರುದ್ಧ ಸೇಡಿನ ಭಾವನೆ ಹೊಂದಿರಲಿಲ್ಲ. ಆದರೆ ನೀವು (ರಾಹುಲ್) ಸೇಡಿನ ರಾಜಕೀಯ ಮಾಡುತ್ತಿದ್ದೀರಿ. ನಾವು ಕೊಡುವ ಉತ್ತರ ಕೇಳುವ ಧೈರ್ಯ ನಿಮಗಿಲ್ಲವೇ ಎಂದು ಸ್ಮೃತಿ ಪ್ರಶ್ನಿಸಿದ್ದಾರೆ.(ಚಿತ್ರ: ಪಿಟಿಐ)
ದುರ್ಗಾಮಾತೆ
JNU ಆವರಣದಲ್ಲಿ ಕೆಲವೊಂದು ವಿದ್ಯಾರ್ಥಿಗಳು ಬಿಡುಗಡೆ ಮಾಡಿದ್ದ ದುರ್ಗಾಮಾತೆಯನ್ನು ಕೀಳುಮಟ್ಟದಲ್ಲಿ ಬಿಂಬಿಸುವ ದಾಖಲೆಗಳನ್ನು ರಾಜ್ಯಸಭೆಯಲ್ಲಿ ಸ್ಮೃತಿ ಓದಲು ಆರಂಭಿಸಿದಾಗ, ಆನಂದ್ ಶರ್ಮಾ, ಗುಲಾಂನಬಿ ಆಜಾದ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಸದನದ ಬಾವಿಗಿಳಿದು ಧರಣಿ ನಡೆಸಲಾರಂಭಿಸಿದರು. ಈ ದಾಖಲೆಗಳಲ್ಲಿ ದುರ್ಗೆ, ದುರ್ಗಾಪೂಜೆಯನ್ನು ಕೆಟ್ಟರೀತಿಯಲ್ಲಿ ಬಿಂಬಿಸಲಾಗಿತ್ತು.(ಚಿತ್ರ: ಪಿಟಿಐ)
ಸತ್ಯಮೇವ ಜಯತೆ
ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಸ್ಮೃತಿ ಇರಾನಿ ನೀಡಿದ ಭಾಷಣಕ್ಕೆ ಪಕ್ಷದ ಹಿರಿಯ ಸಚಿವಾರದ ಅರುಣ್ ಜೇಟ್ಲಿ ಮತ್ತು ವೆಂಕಯ್ಯನಾಯ್ಡು ಅವರಿಂದ ಶಹಬ್ಬಾಸ್ ಗಿರಿ ಸಿಕ್ಕಿದೆ. ಲೋಕಸಭೆಯಲ್ಲಿ ನೀಡಿದ ಭಾಷಣದ ತುಣುಕನ್ನು 'ಸತ್ಯಮೇವ ಜಯತೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು.(ಚಿತ್ರ: ಪಿಟಿಐ)
ರೋಹಿತ್ ವೇಮುಲ
ರೋಹಿತ್ ವೇಮುಲ ದೇಹವನ್ನು ಪರಿಶೀಲಿಸಲು ಮತ್ತು ಆಸ್ಪತ್ರೆಗೆ ಕೊಂಡೊಯ್ಯಲು ಯಾವ ವೈದ್ಯರಿಗೂ ಅವಕಾಶ ನೀಡಿರಲಿಲ್ಲ ಎನ್ನುವ ಸ್ಮೃತಿ ಇರಾನಿ ಹೇಳಿಕೆಗೆ, ಅವರ ದೇಹವನ್ನು ಪರಿಶೀಲಿಸಿ, ಮೃತಪಟ್ಟಿರುವುದಾಗಿ ಘೋಷಿಸಿದ್ದಾಗಿ ವಿವಿಯ ಆರೋಗ್ಯ ಕೇಂದ್ರದ ವೈದ್ಯೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.