ಪಾಕಿಸ್ತಾನದಿಂದ ಭಾರತಕ್ಕೆ ಉಜ್ಮಾಳನ್ನು ಕರೆತಂದ ರೋಚಕ ಕತೆ
ನವದೆಹಲಿ, ಮೇ 29: ಉಜ್ಮಾ ಅಹ್ಮದ್ ರನ್ನು ಪಾಕಿಸ್ತಾನದಿಂದ ಯಶಸ್ವೀಯಾಗಿ ಕರೆ ತಂದು ಭಾರತ ಭರ್ಜರಿ ಯಶಸ್ಸು ಸಾಧಿಸಿದೆ. ಆಕೆಯನ್ನು ಪಾಕಿಸ್ತಾನದಿಂದ ಕರೆತಂದಿದ್ದೇ ಒಂದು ರೋಮಾಂಚಕಾರಿ ಕಥೆ.
ಪಾಕಿಸ್ತಾನಕ್ಕೆ ಹೋದ ಉಜ್ಮಾಗೆ ತಾಹಿರ್ ಅಲಿ ಜತೆ ಒತ್ತಾಯಪೂರ್ವಕವಾಗಿ ಮದುವೆ ಮಾಡಲಾಗಿತ್ತು. ಆಕೆಗೆ ಪಾಕಿಸ್ತಾನಕ್ಕೆ ಹೋದ ನಂತರ ತಾಹಿರ್ ಗೆ ಬೇರೊಂದು ಮದುವೆಯಾಗಿ ನಾಲ್ಕು ಮಕ್ಕಳಿದ್ದಾರೆ ಎಂಬ ವಿಚಾರ ಗೊತ್ತಾಗಿತ್ತು. ಕೊನೆಗೆ ತಾಹಿರ್ ನನ್ನು ಬಿಟ್ಟು ಭಾರತಕ್ಕೆ ಬರಲು ಉಜ್ಮಾ ನಿರ್ಧರಿಸಿದರು. ಆದರೆ ಈ ಬಂಧನದಿಂದ ಬಿಡಿಸಿಕೊಂಡು ಬರುವುದು ಆಕೆಗೆ ಅಷ್ಟು ಸುಲಭವಿರಲಿಲ್ಲ. ಅದಕ್ಕೊಂದು ಉಪಾಯ ಹೂಡಿದರು ಉಜ್ಮಾ. ಆ ಉಪಾಯ ಅವರನ್ನು ವಾಪಸ್ಸು ಕರೆತರುವಲ್ಲಿ ನೆರವಾಯಿತು..
ಒಂದು ದಿನ ಉಜ್ಮಾ ತನ್ನ ಗಂಡ ತಾಹಿರ್ ಅಲಿ ಬಳಿ ತಾನು ಭಾರತೀಯ ರಾಯಭಾರ ಕಚೇರಿಗೆ ಹೋಗಬೇಕು. ಅಲ್ಲಿ ರೂಪಾಯಿ 1.5 ಲಕ್ಷ ಪಡೆದುಕೊಳ್ಳುವುದಿದೆ ಎಂದು ಹೇಳಿದರು. ಇದು ನನಗೆ ನನ್ನ ಕುಟುಂಬದವರು ಕಳುಹಿಸಿದ ಹಣ ಎಂದು ಸುಳ್ಳು ಹೇಳಿದರು. ನನ್ನ ಕುಟುಂಬದಲ್ಲಿ ಈ ರೀತಿ ಮದುವೆಯಾದವರಿಗೆ ಹಣ ಕೊಡುವ ಸಂಪ್ರದಾಯವಿದೆ. ನನ್ನ ಸಹೋದರ ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಆತ ಹಣ ಕಳುಹಿಸಿದ್ದಾನೆ. ನಾನು ಹೋಗಿ ಆ ಹಣವನ್ನು ಪಡೆದುಕೊಳ್ಳಬೇಕು ಎಂದು ಹೇಳಿ ನಂಬಿಸಿದರು.
ಹಣದ ಆಸೆಗೆ ಬಿದ್ದ ಅಲಿ ಆಕೆಯನ್ನು ಭಾರತೀಯ ಧೂತವಾಸ ಕಚೇರಿಗೆ ಕರೆತಂದ. ಅಲ್ಲಿ ಉಜ್ಮಾ ತನ್ನ ಪ್ರವರಗಳನ್ನು ಉಪ ರಾಯಭಾರಿ ಜೆ.ಪಿ ಸಿಂಗ್ ಮುಂದೆ ಹೇಳಿಕೊಂಡರು. ಮನೆಯಲ್ಲಿ ನೀಡುತ್ತಿರುವ ಹಿಂಸೆಯಿಂದ ಹಿಡಿದು ಯಾವುದನ್ನೂ ಉಜ್ಮಾ ಬಿಡದೆ ಅಧಿಕಾರಿಯ ಮುಂದೆ ತೆರೆದಿಟ್ಟರು.
ಒಂದೊಮ್ಮೆ ನನಗೆ ಆಶ್ರಯ ನೀಡದಿದ್ದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಎಲ್ಲಿಯಾದರೂ ತಾಹಿರ್ ಜತೆ ಮತ್ತೆ ಕಳುಹಿಸಿದರೆ ನಾನು ಬದುಕಿ ಇರುವುದಿಲ್ಲ ಎಂದು ಉಜ್ಮಾ ಗೋಗರೆದಿದ್ದರು.
ಆದರೆ ಉಜ್ಮಾಗೆ ಸಹಾಯ ನೀಡುವ ಮೊದಲು ಆಕೆ ಭಾರತೀಯಳು ಹೌದೇ ಎಂಬುದನ್ನು ರಾಯಭಾರ ಕಚೇರಿ ಖಚಿತಪಡಿಸಿಕೊಳ್ಳಬೇಕಾಗಿತ್ತು. ಆಕೆಯ ಪಾಸ್ಪೋರ್ಟಿನ ವಿವರಗಳನ್ನು ನೋಡಿ ಆಕೆ ಭಾರತೀಯಳು ಹೌದು ಎಂಬುದು ಖಚಿತವಾಗಿತ್ತು.
ನಂತರ ಆಕೆಯನ್ನು ಭಾರತಕ್ಕೆ ಕರೆತರುವ ಯೋಜನೆ ರೂಪಿಸಲಾಯಿತು. ಇಬ್ಬರು ದಂಪತಿಗಳು ಉಜ್ಮಾ ಸಹೋದರ ಮತ್ತು ಆತನ ಪತ್ನಿಯಂತೆ ನಟಿಸಲು ಮುಂದೆ ಬಂದರು. ಅವರು ಹೋಗಿ ಅಲಿಯನ್ನು ಭೇಟಿಯಾಗಿ ಉಜ್ಮಾ ನಮ್ಮ ಜತೆಗೆ ಇರುತ್ತಾಳೆ ಎಂದು ಹೇಳಿದರು.
ನಂತರ ಇಸ್ಲಮಾಬಾದ್ ನ್ಯಾಯಾಲಯದಲ್ಲಿ ದಾವೆ ಹೂಡುವ ಕೆಲಸ ಆರಂಭವಾಯಿತು. ಈ ಸಂದರ್ಭದಲ್ಲಿ ದಿನಕ್ಕೆ ಮೂರು ಮೂರು ಬಾ ರಿ ಸುಷ್ಮಾ ಸ್ವರಾಜ್ ಕರೆ ಮಾಡಿ ಪಾಕಿಸ್ತಾನ ರಾಯಭಾರಿ ಹಾಗೂ ಉಜ್ಮಾ ಜತೆ ಕಾರ್ಯಾಚರಣೆಯ ವಿವರಗಳನ್ನು ತಿಳಿದುಕೊಳ್ಳುತ್ತಿದ್ದರು.
ಹೀಗೆ ಯೋಜನೆಯೆಲ್ಲಾ ಯಶಸ್ವಿಯಾಗಿ ಕೊನೆಗೂ ಉಜ್ಮಾ ಭಾರತಕ್ಕೆ ವಾಪಾಸಾಗಿದ್ದರು.