ದಲಿತ ಅಭ್ಯರ್ಥಿ ನಿಲ್ಲಿಸಿ ವಿಪಕ್ಷಗಳ ಬಾಯಿಗೆ ಬೀಗ ಜಡಿದ ಮೋದಿ-ಶಾ
ನವದೆಹಲಿ, ಜೂನ್ 22: ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ರಾಷ್ಟ್ರಪತಿ ಚುನಾವಣೆಯಲ್ಲಿ ತಾವು ಎನ್ಡಿಎ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಬುಧವಾರ ಸ್ಪಷ್ಟಪಡಿಸಿದ್ದಾರೆ. ವಿಪಕ್ಷಗಳ ಗ್ರಾಂಡ್ ಅಲಯನ್ಸ್ ಹಿಂದಿದ್ದ ವ್ಯಕ್ತಿಯ ಈ ಹೇಳಿಕೆಯನ್ನು ಇದೀಗ ವಿಪಕ್ಷಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.
ಮಾತ್ರವಲ್ಲ ಇಂದು ಸಂಜೆ ನಡೆಯಲಿರುವ ವಿಪಕ್ಷಗಳ ಸಭೆಯಲ್ಲೂ ತಾವು ಭಾಗವಹಿಸುತ್ತಿಲ್ಲ ಎಂದಿರುವ ನಿತೀಶ್ ಕುಮಾರ್ ಎನ್ಡಿಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಬೆಂಬಲಿಸುವುದನ್ನು ಖಂಡಾತುಂಡವಾಗಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಬಿಹಾರ ರಾಜ್ಯಪಾಲರಾಗಿದ್ದ ಕೋವಿಂದ್ ಜತೆ ತಾವು ಉತ್ತಮ ಸಂಬಂಧ ಹೊಂದಿದ್ದಾಗಿ ಹೇಳಿರುವ ನಿತೀಶ್ ಕುಮಾರ್ ಅವರು ರಾಷ್ಟ್ರಪತಿಯಾಗದಂತೆ ತಾವು ತಡೆಯಲು ಸಿದ್ಧವಿಲ್ಲ ಎಂದು ಹೇಳಿದ್ದಾರೆ.
ನಿತೀಶ್ ನಿರ್ಧಾರದೊಂದಿಗೆ ಮುಲಾಯಂ ಸಿಂಗ್ ಯಾದವ್ ಹಾಗೂ ಶರದ್ ಪವಾರ್ ಕೂಡಾ ಕೋವಿಂದ್ ರನ್ನು ಬೆಂಬಲಿಸುವ ಸಾಧ್ಯತೆ ಇದೆ. ಉಳಿದವರ ನಿರ್ಧಾರ ನೋಡಿಕೊಂಡು ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಯಾದವ್ ಹೇಳಿದ್ದರೂ ಅವರು ಕೋವಿಂದ್ ಬೆಂಬಲಿಸುವ ಸಾಧ್ಯತೆಗಳೇ ಹೆಚ್ಚಾಗಿವೆ.
ಅಪನಗದೀಕರಣವನ್ನೂ ಬೆಂಬಲಿಸಿದ್ದ ನಿತೀಶ್
ಮೋದಿಯ ಜನಪ್ರಿಯತೆಯನ್ನು ಮನಗಂಡಿರುವ ನಿತೀಶ್ ಜಾತಿ ಸಮೀಕರಣಗಳಾಚೆಗೆ ಕೋವಿಂದ್ ಬೆಂಬಲಿಸಲು ನಿರ್ಧರಿಸಿರುವ ಸಾಧ್ಯತೆ ಇದೆ. ಈ ಹಿಂದೆ ಅಪನಗದೀಕರಣದ ಸಂದರ್ಭದಲ್ಲೂ ನಿತೀಶ್ ಮೋದಿಯನ್ನು ಬೆಂಬಲಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಹಾರದಲ್ಲಿ ಮದ್ಯ ನಿಷೇಧ ಮಾಡಿದ್ದ ನಿತೀಶ್ ಕುಮಾರ್ ರನ್ನು ಮೋದಿ ಪ್ರಶಂಸಿದ್ದರು.
ವಿಪಕ್ಷಗಳಲ್ಲಿ ಒಡಕು
ಇತ್ತೀಚೆಗೆ ಕರುಣಾನಿಧಿ ಹುಟ್ಟುಹಬ್ಬದ ನೆಪದಲ್ಲಿ ಒಂದೆಡೆ ಸೇರಿದ್ದ ವಿಪಕ್ಷಗಳು ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದವು. ಆದರೆ ಸದ್ಯಕ್ಕೆ ವಿಪಕ್ಷಗಳಲ್ಲೇ ಒಡಕು ಮೂಡಿದ್ದು ಒಬ್ಬೊಬ್ಬರು ಒಂದೊಂದು ದಾರಿ ಹಿಡಿದಿದ್ದಾರೆ. ಇದಕ್ಕೆ ರಾಜಕೀಯ ತಜ್ಞರು ಹೇಳುವ ಕಾರಣ ಮೋದಿ ಶಾ ಜೋಡಿಯ ಕೋವಿಂದ್ ಮಾಸ್ಟರ್ ಸ್ಟ್ರೋಕ್.
ಒಂದೇ ಕಲ್ಲಿಗೆ ಎರಡು ಹಕ್ಕಿ
ಮೋದಿ ಮತ್ತು ಶಾ ಸೇರಿಕೊಂಡು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ. ವಿಪಕ್ಷಗಳ ಒಗ್ಗಟ್ಟು ಮುರಿಯುವಲ್ಲಿ ಮಾತ್ರವಲ್ಲ ಈ ತಂತ್ರಗಾರಿಗೆ ದಲಿತರತ್ತ ಬಿಜೆಪಿಯನ್ನು ಕೊಂಡೊಯ್ಯುವಲ್ಲೂ ಸಹಾಯಕವಾಗಿದೆ.
ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿಯಿಂದ ಸ್ಪರ್ಧೆಗೆ ಒತ್ತಡ
ಹಲವು ವಿಪಕ್ಷಗಳು ಕೋವಿಂದ್ ರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದು ಕೂತಿವೆ. ಆದರೆ ಕಾಂಗ್ರೆಸ್, ಎಡಪಕ್ಷಗಳು ಮತ್ತು ಟಿಎಂಸಿ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವ ಮಾತುಗಳನ್ನಾಡುತ್ತಿವೆ.
ಇಂದಿನ ಸಭೆಯ ಮೇಲೆ ಎಲ್ಲರ ಚಿತ್ತ
ಹೀಗಾಗಿ ಇವತ್ತಿನ ಸಭೆಯ ನಂತರ ತಮ್ಮ ಅಭ್ಯರ್ಥಿಯನ್ನು ವಿಪಕ್ಷಗಳು ಘೋಷಿಸುತ್ತವೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ. ರಾಷ್ಟ್ರಪತಿ ಚುನಾವಣೆ ಜುಲೈ 17 ರಂದು ನಡೆಯಲಿದ್ದು, ಜುಲೈ 20 ರಂದು ಫಲಿತಾಂಶ ಹೊರಬೀಳಲಿದೆ.