ಸುನಂದಾ ಪುಷ್ಕರ್ ಸಾವು: ದೆಹಲಿ ಪೊಲೀಸರಿಗೆ ಕೋರ್ಟ್ ತರಾಟೆ
2014ರಲ್ಲಿ ಸುನಂದಾ ಪುಷ್ಕರ್ ಅವರು ಇಲ್ಲಿನ ಹೋಟೆಲೊಂದರಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಆಗಿನಿಂದಲೂ ಆ ಪ್ರಕರಣದ ತನಿಖೆ ನಡೆಯುತ್ತಲೇ ಇದೆ.
ನವದೆಹಲಿ, ಮೇ 17: ಕಾಂಗ್ರೆಸ್ ನಾಯಕ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಸಾವಿಗೀಡಾಗಿದ್ದ ದೆಹಲಿಯ ಪ್ರತಿಷ್ಠಿತ ಹೋಟೆಲೊಂದರ ಕೊಠಡಿಯನ್ನು ಸುನಂದಾ ಅಸುನೀಗಿ ಮೂರು ವರ್ಷಗಳ ನಂತರವೂ ಹೋಟೆಲ್ ಮಾಲೀಕರಿಗೆ ಹಸ್ತಾಂತರಿಸದಿರುವ ದೆಹಲಿ ಪೊಲೀಸರನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
2014ರಲ್ಲಿ ಸುನಂದಾ ಪುಷ್ಕರ್ ಅವರು ಇಲ್ಲಿನ ಹೋಟೆಲೊಂದರಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಆಗಿನಿಂದಲೂ ಆ ಪ್ರಕರಣದ ತನಿಖೆ ನಡೆಯುತ್ತಲೇ ಇದೆ. ತನಿಖೆಯ ಅಂಗವಾಗಿ ಸುನಂದ್ ಪುಷ್ಕರ್ ಇದ್ದ ಹೋಟೆಲ್ ಸೂಟ್ (ಕೊಠಡಿ) ಅನ್ನು ಯಾರೂ ಪ್ರವೇಶಿಸದಂತೆ ಸೀಲ್ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬುಧವಾರ ನ್ಯಾಯಾಲಯವು ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು. ಆದರೆ, ವರ್ಷಗಳೇ ಉರುಳಿದ್ದರೂ ಪ್ರಕರಣದ ತನಿಖೆಯೂ ಮುಗಿದಿಲ್ಲ. ಆ ಕೊಠಡಿಯು ಹೋಟೆಲ್ ಮಾಲೀಕರಿಗೆ ಹಸ್ತಾಂತರವಾಗಿಲ್ಲ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ, ಪ್ರಕರಣದ ತನಿಖೆ ಮುಗಿಸಲು ಹಾಗೂ ಕೊಠಡಿಯನ್ನು ಹಿಂದಿರುಗಿಸಲು ಇನ್ನೆಷ್ಟು ದಿನ ಬೇಕು? ಕೊಠಡಿಗೆ ಇನ್ನೆಷ್ಟು ದಿನ ಭೇಟಿ ನೀಡಿದ ಮೇಲೆ ನಿಮ್ಮ ತನಿಖೆ ಪೂರ್ಣವಾಗುತ್ತದೆ ಎಂದು ಈಗಲೇ ಹೇಳಿಬಿಡಿ ಎಂದು ತರಾಟೆಗೆ ತೆಗೆದುಕೊಂಡಿತು.
ನ್ಯಾಯಾಲಯ ಹೀಗೆ ಪೊಲೀಸರನ್ನು ತರಾಟೆಗೆ ತೆಗೆದುಕೊಳ್ಳಲು ಕಾರಣ ಹೋಟೆಲ್ ಮಾಲೀಕರು ನೀಡಿರುವ ದೂರು. ಕಳೆದ ವರ್ಷವೇ ನ್ಯಾಯಾಲಯಕ್ಕೆ ದೂರು ನೀಡಿದ್ದ ಮಾಲೀಕರು, ಸುಮಾರು 12 ತಿಂಗಳಿನಿಂದ ಪೊಲೀಸರು ಕೊಠಡಿಯತ್ತ ಬಂದಿಲ್ಲ. ಆದರೆ, ಪುಷ್ಕರ್ ಇರುವ ಕೊಠಡಿ ಸುಮ್ಮನೇ ಹಾಗೇ ಇದೆ. ತನಿಖೆಯಾದರೂ ಮಾಡಲಿ, ತನಿಖೆ ಪೂರ್ಣಗೊಂಡಿದ್ದರೆ ನಮಗೆ (ಮಾಲೀಕರಿಗೆ) ಹಸ್ತಾಂತರಿಸಲಿ. ಈ ಬಗ್ಗೆ ನ್ಯಾಯಾಲಯ ಪೊಲೀಸರಿಗೆ ಸಲಹೆ ನೀಡಬೇಕೆಂದು ಕೋರ್ಟ್ ನಲ್ಲಿ ಮನವಿ ಮಾಡಿದ್ದರು.