ಕೇರಳದಲ್ಲಿ ಇದುವರೆಗೂ ನಡೆದ ರಾಜಕೀಯ ಹತ್ಯೆಗಳೆಷ್ಟು?
ತಿರುವನಂತಪುರಂ, ಆ.06 : ದೇವರನಾಡು ಕೇರಳದಲ್ಲಿ 'ರಾಜಕೀಯ ಹತ್ಯೆ'ಗಳ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. 2000ದಿಂದ 2016ರ ತನಕ ಕಣ್ಣೂರು ಜಿಲ್ಲೆಯೊಂದರಲ್ಲಿಯೇ 69 ರಾಜಕೀಯ ಹತ್ಯೆಗಳು ನಡೆದಿವೆ.
ಕೇರಳದಲ್ಲಿ ಎಷ್ಟು ಮಂದಿ ಆರ್ಎಸ್ಎಸ್ ಕಾರ್ಯಕರ್ತರ ಹತ್ಯೆ ನಡೆದಿದೆ?. ರಾಜಕೀಯ ದ್ವೇಷ ಎಂಬುದು ಕೇರಳದಲ್ಲಿ ನಡೆಯುತ್ತಲೇ ಇದೆ. ಭಾನುವಾರ ಹತ್ಯೆಯಾದ ಆರ್ಎಸ್ಎಸ್ ಕಾರ್ಯಕತ್ರ ಇ.ರಾಜೇಶ್ ಮನೆಗೆ ಭೇಟಿ ನೀಡಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
'ಇದೊಂದು ಕ್ರೂರ ಹತ್ಯೆ, ಶತ್ರು ದೇಶದವರು ಇಷ್ಟೊಂದು ಹಿಂಸೆಯನ್ನು ಮಾಡುವುದಿಲ್ಲ' ಎಂದು ಅರುಣ್ ಜೇಟ್ಲಿ ಹೇಳಿದರು. ರಾಜಕೀಯ ಹತ್ಯೆಗಳು ಕೇರಳದಲ್ಲಿ ನಿಲ್ಲುತ್ತಿಲ್ಲ. ಈ ಹತ್ಯೆಗಳ ಬಗ್ಗೆ ಮಾತನಾಡುವಾಗ ಎಷ್ಟು ಆರ್ಎಸ್ಎಸ್, ಸಿಪಿಎಂ ಮತ್ತು ಕಾಂಗ್ರೆಸ್ ಕಾರ್ಯರ್ತರ ಹತ್ಯೆಗಳಾಗಿವೆ ಎಂಬ ಅಂಕಿ-ಅಂಶಗಳತ್ತ ಗಮನ ಹರಿಸಬೇಕು.
ಹತ್ಯೆಯಾದ ಆರ್ಎಸ್ಎಸ್ ಕಾರ್ಯಕರ್ತರೆಷ್ಟು? : 2000ದಿಂದ 2016ರ ತನಕ ಕಣ್ಣೂರು ಜಿಲ್ಲೆಯಲ್ಲಿಯೇ 69 ರಾಜಕೀಯ ಹತ್ಯೆಗಳು ನಡೆದಿವೆ. 2016ರಲ್ಲಿಯೇ 7 ಇಂತಹ ಹತ್ಯೆಗಳು ನಡೆದ ಬಗ್ಗೆ ವರದಿಯಾಗಿದೆ. 2017ರಲ್ಲಿ ಇದುವರೆಗೂ ಇಂತಹ ನಾಲ್ಕು ಘಟನೆಗಳು ನಡೆದಿವೆ.
ಕಳೆದ ಹದಿನೇಳು ವರ್ಷಗಳ ಮಾಹಿತಿಯಂತೆ 160 ರಾಜಕೀಯ ಹತ್ಯೆಗಳು ಕೇರಳದಲ್ಲಿ ನಡೆದಿವೆ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳು 2000ದಿಂದ 2017ರ ಅವಧಿಯಲ್ಲಿ ನಡೆದಿವೆ. ಈ ಅವಧಿಯಲ್ಲಿ 65 ಆರ್ಎಸ್ಎಸ್ ಅಥವ ಬಿಜೆಪಿ, 85 ಸಿಪಿಎಂ ಮತ್ತು 11 ಕಾಂಗ್ರೆಸ್-ಐಯುಎಂಎಲ್ ಕಾರ್ಯಕರ್ತರ ಹತ್ಯೆಗಳಾಗಿವೆ.
2017ರಲ್ಲಿ ನಡೆದ ರಾಜಕೀಯ ಹತ್ಯೆಗಳು : 2017ರ ಜನವರಿ 18ರಂದು ಬಿಜೆಪಿ ಕಾರ್ಯಕರ್ತ ಸಂತೋಷ್ (52) ಹತ್ಯೆಯಾಯಿತು. ಸಿಪಿಎಂ ಕಾರ್ಯಕರ್ತರಿಂದ ಮೇ 12, 2017ರಂದು ಆರ್ಎಸ್ಎಸ್ ಕಾರ್ಯರರ್ತ ಬಿಜು ಹತ್ಯೆ ನಡೆಯಿತು.
2017ರ ಏಪ್ರಿಲ್ ನಲ್ಲಿ ಅಪ್ರಾಪ್ತನಾದ ಅನಂತು ಅಶೋಕನ್ ಹತ್ಯೆ ನಡೆಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರ್ಎಸ್ಎಸ್ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಆದರೆ, ಇದು ರಾಜಕೀಯ ಹತ್ಯೆ ಎಂಬುದು ಇನ್ನೂ ದೃಢ ಪಟ್ಟಿಲ್ಲ. ಆರ್ಎಸ್ಎಸ್ ಕಾರ್ಯಕರ್ತ ರಾಜೇಶ್ ನನ್ನು 2017ರ ಜುಲೈ 29ರಂದು ಹತ್ಯೆ ಮಾಡಲಾಗಿದೆ.