ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಐಎಸ್ ಹಿಡಿತ ಹೆಚ್ಚುತ್ತಿರುವುದು ಹೇಗೆ ಗೊತ್ತೇ?

By Vicky Nanjappa
|
Google Oneindia Kannada News

ಕಲಾ ತಲಾವ್, ಗಣೇಶ ಘಾಟ್ ಹಾಗೂ ಬಿರ್ಲಾ ಮಂದಿರಕ್ಕೆ ಹೆಸರಾಗಿದ್ದ ಕಲ್ಯಾಣ ಎಂಬ ಚಿಕ್ಕ ಪಟ್ಟಣದಲ್ಲೀಗ ಐಎಸ್ ಉಗ್ರರ ಭೀತಿ ಹುಟ್ಟಿದೆ. ಆರೀಫ್ ಅಲಿಯಾಸ್ ಅರೀಬ್ ಮಜಿದ್ ಸೇರಿದಂತೆ ಇದೇ ಪಟ್ಟಣದ ನಾಲ್ವರು ಇರಾಕ್‌ಗೆ ತೆರಳಿ ಐಎಸ್ ಸೇರಿದ್ದು ದೇಶದ ಗಮನ ಸೆಳೆದಿದೆ.

ಮಜೀದ್ ಭಾರತಕ್ಕೆ ವಾಪಸ್ ಬಂದಿರುವುದರಿಂದ ಐಎಸ್ಐಎಸ್ ಸಂಘಟನೆಯ ಉದ್ದೇಶ ಹಾಗೂ ಬೋಧನೆಗಳ ಕುರಿತು ತಿಳಿಯಲು ಸಾಧ್ಯವಾಗಿದೆ. ಅಲ್ಲದೆ, ಪರಿಸ್ಥಿತಿಯ ಗಾಂಭೀರ್ಯತೆಯೂ ಅರಿವಿಗೆ ಬಂದಿದೆ.

"ನಾನು ಸ್ವರ್ಗವನ್ನು ಹುಡುಕುತ್ತ ನರಕಕ್ಕೆ ಹೋದೆ. ಅವರ ಪ್ರಕಾರ ಭಾರತೀಯ ಮುಸ್ಲಿಮರು ಬಂದೂಕು ಹಿಡಿಯಲು ಹಾಗೂ ಹೋರಾಡಲು ಅರ್ಹರಲ್ಲ" ಎಂದು ಮಜೀದ್ ಹೇಳಿರುವುದು ಮಾಧ್ಯಮಗಳಲ್ಲಿಂದು ಭಾರೀ ಪ್ರಚಾರ ಪಡೆಯುತ್ತಿದೆ. [ಐಎಸ್ ಸೇರಿದವರಿಗೆ ದೇಶಕ್ಕೆ ಮರಳೋ ಆಸೆ]

kalyan

ಭಿವಂದಿ ಸಂಪರ್ಕ
ಐಎಸ್ಐಎಸ್ ಸಂಘಟನೆಯು ಜನರನ್ನು ಸೇರಿಸಿಕೊಳ್ಳುವ ರೀತಿ ಕುರಿತು ಭಾರತೀಯ ಗೂಢಚಾರ ಸಂಸ್ಥೆ ಎನ್ಐಎ ಮಾಹಿತಿ ಕಲೆಹಾಕುತ್ತಿದೆ. ಮಜೀದ್ ಹೇಳುವಂತೆ ಆತ ಐಎಸ್ಐಎಸ್ ಸೇರುವ ಮೊದಲು ಸುಮಾರು 20 ಸಾವಿರ ವೆಬ್ ಸೈಟ್‌ಗಳನ್ನು ಜಾಲಾಡಿದ್ದ. ಇವು ಐಎಸ್ಐಎಸ್‌ಗೆ ಸೇರಿದ್ದು, ಉಗ್ರವಾದವನ್ನು ಪ್ರೇರೇಪಿಸುತ್ತದೆ. ಇಲ್ಲಿ ಜನರನ್ನು ಸೇರಿಸಿಕೊಳ್ಳುವ ಬಗೆಯೂ ತಿಳಿಯುತ್ತದೆ ಎಂದು ಎನ್ಐಎ ತಿಳಿಸಿದೆ.

ಮಜೀದ್ ಸಂಪರ್ಕದಲ್ಲಿದ್ದ ಇತರ ಮೂವರು ಮಹಾರಾಷ್ಟ್ರದ ಭಿವಂದಿ ಮೂಲದವರು. ಮಜೀದ್‌ನಿಂದ ಮಾಹಿತಿ ಹಾಗೂ ಸಹಾಯ ಪಡೆದು ಇರಾಕ್ ದೇಶದ ಕರಬಳಾ ಪ್ರದೇಶಕ್ಕೆ ತೆರಳಿದ್ದರು. ಆದರೆ, ಅಲ್ಲಿಂದ ಅವರನ್ನು ಮೊಸುಲ್ ಸಮೀಪದ ಹಿಂದ್ ಶಿಬಿರಕ್ಕೆ ವರ್ಗಾಯಿಸಲಾಗಿತ್ತು.

ಈ ಮೂವರೂ ಐಎಸ್ಐಎಸ್ ಜೊತೆ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಇವರ ಮೂಲಕ ಸಂಘಟನೆಗೆ ಇತರರ ನೇಮಕವೂ ಸುಲಭವಾಗುತ್ತಿದೆ. [ಐಎಸ್ ಪಕ್ಕಾ ದುಷ್ಟ ಸಂಘಟನೆ]

ಅನ್ಸರ್-ಉಲ್-ತವಹಿದ್
ಐಎಸ್ಐಎಸ್ ಸಂಘಟನೆಯು ಅನ್ಸರ್-ಉಲ್-ತವಹಿದ್ ಹೆಸರಿನಲ್ಲಿ ಭಾರತೀಯ ಘಟಕವನ್ನೂ ಹೊಂದಿದೆ. ಇಂಡಿಯನ್ ಮುಜಾಹಿದೀನ್ ಸಂಘಟನೆಯ ಮಾಜಿ ಮುಖಂಡ ಸುಲ್ತಾನ್ ಅಹ್ಮದ್ ಅರ್ಮರ್ ಇದರ ನೇತೃತ್ವ ವಹಿಸಿದ್ದಾನೆ. ಈತ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದವನು. ಪ್ರಸ್ತುತ ಸೌದಿ ಅರೇಬಿಯಾದಲ್ಲಿದ್ದು, ಭಾರತೀಯರಿಗಾಗಿ ಹಲವು ವೆಬ್ ಸೈಟ್ ರಚಿಸಿದ್ದಾನೆ ಎನ್ನಲಾಗಿದೆ.

ಅನ್ಸರ್-ಉಲ್-ತವಹಿದ್ ಸಂಘಟನೆಯನ್ನು ಬೆಳೆಸಲು ಈತ ಐಎಸ್ಐಎಸ್ ಹಾಗೂ ತೆಹ್ರೀಕ್-ಇ-ತಾಲಿಬಾನ್ ಸಂಘ ಮಾಡಿದ್ದ. ಅಲ್ ಖೈದಾ ಸಂಘಟನೆಯ ಭಾರತೀಯ ಘಟಕವಾದ ಸಿಮಿ ಹಾಗೂ ಬಾಂಗ್ಲಾದೇಶದ ಜಮಾತ್-ಉಲ್-ಮುಜಾಹಿದೀನ್‌ಗೆ ಪರ್ಯಾಯವಾಗಿ ತವಹಿದ್ ಬೆಳೆಯುತ್ತಿದೆ.

ಗುಪ್ತಚರ ಸಂಘಟನೆಗಳ ಪ್ರಕಾರ ಅನ್ಸರ್ ಈಗ ಸಂಘಟನೆಗೆ ಜನರ ನೇಮಕಾತಿಯತ್ತ ಮಾತ್ರ ಲಕ್ಷ್ಯ ವಹಿಸಿದ್ದಾನೆ. ಜಾಗತಿಕ ಇಸ್ಲಾಮ್ ಸಮಿತಿ ರಚಿಸುವುದು ಅವರ ಉದ್ದೇಶವಾಗಿದ್ದು, ಇದರಲ್ಲಿ ಭಾರತವೂ ಒಳಗೊಂಡಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಅಪ್ಘಾನಿಸ್ತಾನದಿಂದ ಹೊರಬಂದು ಪಾಕಿಸ್ತಾನದಲ್ಲಿರುವ ಅಲ್ ಖೈದಾ ಹಾಗೂ ತಾಲಿಬಾನ್ ವಿರುದ್ಧ ಹೋರಾಟ ಆರಂಭಿಸಿದ ಮೇಲೆ ಅನ್ಸರ್‌ನ ನಿಜವಾದ ಯುದ್ಧ ಆರಂಭವಾಗಲಿದೆ. [ಭಟ್ಕಳ ಮೂಲದ ಉಗ್ರ ಈಗ ಯಾರಿಗೂ ಬೇಡ]

isis

ವೀಸಾ ವಿವಾದ
ಆರೀಫ್ ಮಜೀದ್ ಇರಾಕ್‌‍‌ಗೆ ತೆರಳಲು ಧಾರ್ಮಿಕ ಪ್ರವಾಸದ ವೀಸಾ ಪಡೆದಿದ್ದ. ಇರಾಕ್‌ಗೆ ಬರುತ್ತಿರುವ ಬಹುತೇಕರು ಧಾರ್ಮಿಕ ಪ್ರವಾಸದ ನೆಪ ಹೇಳುತ್ತಿದ್ದಾರೆ. ಐಎಸ್ಐಎಸ್‌ ಇದರ ಸಂಪೂರ್ಣ ಪ್ರಯೋಜನ ಪಡೆಯುತ್ತಿದೆ.

ತಮಿಳುನಾಡು ಮೂಲದ ಹಜಾ ಫಕ್ರುದ್ದೀನ್ ಎಂಬಾತನೂ ಐಸ್ಐಎಸ್ ಸೇರಿದ್ದಾನೆ. ಆತನಿಗೆ ಉದ್ಯೋಗ ವೀಸಾ ನೀಡಲಾಗಿತ್ತು. ಈತ ಕೂಡ ವೆಬ್ ಮೂಲಕ ಉಪದೇಶ ಪಡೆದಿದ್ದ. ಈತನಿಗೆ ಸಿಂಗಪುರದಲ್ಲಿ ಓರ್ವ ಉದ್ಯೋಗ ವೀಸಾ ಕೊಡಿಸಲು ಸಹಕರಿಸಿದ್ದ. ಆತ ಸಿರಿಯಾದಲ್ಲಿರುವ ಐಎಸ್ಐಎಸ್ ಶಿಬಿರಕ್ಕೆ ತೆರಳುವ 15 ದಿನ ಮೊದಲು ಸಿಂಗಪುರಕ್ಕೆ ಹೋಗಿದ್ದ.

ಅಂತರ್ಜಾಲದಲ್ಲಿ ಉಪದೇಶ
ಅಂತರ್ಜಾಲದಲ್ಲಿ ನಡೆಯುತ್ತಿರುವ ನೇಮಕಾತಿಯನ್ನು ತಡೆಯುವುದು ಬಹುದೊಡ್ಡ ಸವಾಲಾಗಿದೆ. ಪ್ರತಿ 10 ದಿನಗಳಿಗೆ ಸುಮಾರು 3000 ವೆಬ್ ಸೈಟ್‌ಗಳನ್ನು ಆರಂಭಿಸಿ, ಮುಚ್ಚಲಾಗುತ್ತಿದೆ. ಗುಪ್ತಚರ ಸಂಘಟನೆ ಈ ಕುರಿತು ಪಟ್ಟಿ ತಯಾರಿಸಿದ ತಕ್ಷಣ ವೆಬ್ ಸೈಟ್‌ಗಳನ್ನು ಮುಚ್ಚಲಾಗುತ್ತಿವೆ. ಕೆಲವು ದಿನಗಳವರೆಗೆ ಕಾದು ಮತ್ತೆ ಅದೇ ವಿಷಯಗಳನ್ನು ಮತ್ತೊಂದು ವೆಬ್ ಸೈಟ್‌ನಲ್ಲಿ ಹಾಕುತ್ತಾರೆ. ಐಬಿ (ಇಂಟೆಲಿಜೆನ್ಸ್ ಬ್ಯೂರೋ) ಪ್ರಕಾರ ಇದು ಅತ್ಯಂತ ಕಠಿಣ ಸವಾಲಾಗಿದೆ.

ಐಎಸ್ಐಎಸ್ ಸಂಘಟನೆಯಲ್ಲಿ ನೇರವಾಗಿ ವೆಬ್ ಸೈಟ್ ಮೂಲಕವೇ ನೇಮಕಾತಿ ನಡೆಯುತ್ತದೆ. ಜನರ ಮೂಲಕ ನಡೆದರೆ ಇತರರು ಸಿಕ್ಕಿಬೀಳುವ ಅಪಾಯವಿರುವುದೇ ಇದಕ್ಕೆ ಕಾರಣ. ಆದ್ದರಿಂದಲೇ ಐಎಸ್ಐಎಸ್ ಸಂಘಟನೆಯು ಕೇವಲ 6 ತಿಂಗಳುಗಳಲ್ಲಿ 20 ಸಾವಿರ ವೆಬ್ ಸೈಟ್‌ಗಳನ್ನು ರಚಿಸಿತ್ತು. [ಇರಾಕ್ ಉಗ್ರರ ಜೊತೆ ಬೆಂಗಳೂರು ಯುವಕ]

ವಹಾಬಿ ಪ್ರಭಾವ
ಅಂತರ್ಜಾಲ ಮಾಧ್ಯಮದ ಮೂಲಕ ನೇಮಕಾತಿಯು ಆರಂಭವಾದ ನಂತರವೇ 2013ರಲ್ಲಿ ಸಮಸ್ಯೆ ಪ್ರಾರಂಭವಾಯಿತು. ಸೌದಿ ಅರೇಬಿಯಾದಿಂದ ಭಾರತಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಹಾಬಿ ವಿದ್ವಾಂಸರು ಭೇಟಿ ನೀಡುತ್ತಾರೆ. ಇವರು ಮಹಾರಾಷ್ಟ್ರದಲ್ಲಿಯೇ ಅತಿ ಹೆಚ್ಚು ಶಿಬಿರಗಳನ್ನೂ ನಡೆಸಿದ್ದಾರೆ. ಇಂತಹ ಕ್ಯಾಂಪ್‌ಗಳಿಗೆ ದೇಶಾದ್ಯಂತದಿಂದ ಒಂದು ಲಕ್ಷಕ್ಕೂ ಅಧಿಕ ಯುವಕರು ಭೇಟಿ ನೀಡಿದ್ದರು. ಇವರಲ್ಲಿ ಮಹಾರಾಷ್ಟ್ರದವರೇ 25 ಸಾವಿರ ಜನ ಎಂಬುದು ಗಣನೀಯ.

ಈ ವಹಾಬಿಗಳು ಬೋಧಿಸುವ ಷರಿಯಾ ಕಾನೂನಿನ ಪ್ರಾಮುಖ್ಯತೆ ಹಾಗೂ ಐಎಸ್ಐಎಸ್ ಪ್ರತಿಪಾದನೆ ಒಂದೇ ಎಂಬುದು ವಿಶೇಷ. ಈ ಶಿಬಿರಕ್ಕೆ ಹೋಗಿಬಂದವರು ಐಎಸ್ಐಎಸ್ ತತ್ವಗಳಂತೆ ಯೋಚಿಸತೊಡಗಿದ್ದಾರೆ. ಸಮಸ್ಯೆ ಸೃಷ್ಟಿಯಾಗುತ್ತಿರುವುದೇ ಇಲ್ಲಿಂದ ಎಂದು ಇಂಟೆಲಿಜೆನ್ಸ್ ಬ್ಯೂರೋ ಹೇಳಿದೆ.

ಜಾಗತಿಕ ಸೈನ್ಯ
ಓರ್ವ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಮಜೀದ್‌ನನ್ನು ಐಎಸ್ಐಎಸ್‌ನತ್ತ ಸೆಳೆದಿದ್ದು ಜಾಲತಾ. ಆತ ಅಲ್ಲಿಗೆ ಹೋರಾಡಲೆಂದೇ ತೆರಳಿದ್ದರೂ, ಅವಕಾಶ ಸಿಕ್ಕಿರಲಿಲ್ಲ. ಆದರೆ, ಐಎಸ್ಐಎಸ್ ಭಾರತದ ಕುರಿತು ಹೊಂದಿರುವ ಯೋಜನೆಯ ಮಾಹಿತಿಯೂ ಆತನಿಂದ ತಿಳಿಯುತ್ತದೆ.

ಆತನೇ ಹೇಳುವಂತೆ ಐಎಸ್ಐಎಸ್ ಜಗತ್ತಿನ ಎಲ್ಲೆಡೆಯಿಂದ ಉಗ್ರರನ್ನು ನೇಮಿಸಿಕೊಳ್ಳುತ್ತದೆ. ಪ್ರತಿ ದೇಶದಿಂದ ಆಯ್ಕೆಯಾದವರಿಗೂ ವಿಭಿನ್ನ ಕಾರ್ಯಗಳನ್ನು ನೀಡಲಾಗುತ್ತದೆ. ಈ ಮೂಲಕ ಐಎಸ್ಐಎಸ್ ಜಾಗತಿಕ ಇಸ್ಲಾಂ ಸಮಿತಿ ರಚಿಸಲು ಜಾಗತಿಕ ತಂಡವನ್ನು ತಯಾರಿಸುತ್ತಿದೆ.

English summary
Return of Areeb Majid a terrorist from Kalyan a small town in Maharashtra has helped investigating agencies get a lot of details on the indoctrination into the ISIS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X