ಪನ್ನೀರ್ ಸೆಲ್ವಂ ಹೆಸರು ಅಂತಿಮವಾಗಿದ್ದು ಹೇಗೆ: ಎಐಎಡಿಎಂಕೆ ಒಳಸುಳಿಗಳು
ಚೆನ್ನೈ, ಡಿಸೆಂಬರ್ 6: ಜಯಲಲಿತಾ ನಿಧನದೊಂದಿಗೆ ಎಐಎಡಿಎಂಕೆಗೆ ಎದುರಾಗಿದ್ದು ಆಕೆ ನಂತರ ಯಾರು ಎಂದು ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯ. ಜಯಲಲಿತಾ ಗೈರಿನಲ್ಲಿ ಪ್ರತಿ ಸಲ ಕೇಳಿಬರುತ್ತಿದ್ದ ಹೆಸರು ಒ.ಪನ್ನೀರ್ ಸೆಲ್ವಂ. ಆದರೆ ಈ ಬಾರಿ ನಿರ್ಧಾರ ತೆಗೆದುಕೊಳ್ಳುವುದು ಅಷ್ಟು ಸಲೀಸಿರಲಿಲ್ಲ.
[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]
ಮುಚ್ಚಿದ ಕೋಣೆಯ ಹಿಂದೆ ಸಾಕಷ್ಟು ಬೆಳವಣಿಗೆಗಳು ನಡೆದ ನಂತರ ಅಂತಿಮವಾಗಿ ಪಕ್ಷದಿಂದ ಪನ್ನೀರ್ ಸೆಲ್ವಂ ಹೆಸರು ಅಂತಿಮಗೊಳಿಸಲಾಯಿತು. ಈ ನಿರ್ಧಾರ ಕೈಗೊಂಡ ವೇಗ, ಆ ನಂತರ ಪ್ರಮಾಣ ವಚನ ಸ್ವೀಕಾರ ನಡೆದ ವೇಗ ತೀರಾ ಆಶ್ಚರ್ಯಕ್ಕೆ ಕಾರಣವಾಯಿತು.[ಅಮ್ಮ ಇಲ್ಲದ ಮೇಲೆ ರಾಜ್ಯ ನಡೆದೀತು ಹೇಗೆ ?]
ಜಯಲಲಿತಾ ಸೋಮವಾರ ರಾತ್ರಿ 11.30ಕ್ಕೆ ತೀರಿಕೊಂಡರು. ಪನ್ನೀರ್ ಸೆಲ್ವಂ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು 11.40ಕ್ಕೆ ತೀರ್ಮಾನಿಸಲಾಯಿತು. ರಾತ್ರಿ 12.30ಕ್ಕೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಮುಗಿದೇ ಹೋಯಿತು.
ಸೋಮವಾರ ರಾತ್ರಿ 7ಕ್ಕೆ ಪಕ್ಷದ ಕಚೇರಿಯಲ್ಲಿರುವಂತೆ ಎಐಎಡಿಎಂಕೆ ಶಾಸಕರಿಗೆ ಸೇರಲು ತಿಳಿಸಲಾಗಿತ್ತು. ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ತೀರ್ಮಾನ ಕೈಗೊಳ್ಳುತ್ತದೋ ಅದಕ್ಕೆ ಬದ್ಧವಾಗಿರುವಂತೆ ಸಹಿ ಪಡೆಯಲಾಯಿತು. ಪಕ್ಷದೊಳಗಿನ ಪ್ರಕ್ರಿಯೆ ಬಗ್ಗೆ ಯಾರ ಜೊತೆಗೂ ಚರ್ಚಿಸಬಾರದು ಎಂದು ನಾಯಕರಿಗೆಲ್ಲ ತಿಳಿಸಲಾಗಿತ್ತು.[ಅಮ್ಮ 'ಜನ ಪ್ರೀತಿ' ಗಳಿಸಿದ ಕ್ಯಾಂಟೀನ್ ನಿಂದ ಲ್ಯಾಪ್ ಟಾಪ್ ವರೆಗೆ]
ಈ ಮಧ್ಯೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅಪೋಲೋ ಆಸ್ಪತ್ರೆಗೆ ಬಂದು, ಪನ್ನೀರ್ ಸೆಲ್ವಂ, ಎಡಪಡಿ ಪಳನಿಸ್ವಾಮಿ ಹಾಗೂ ಶಶಿಕಲಾ ಜೊತೆಗೆ ಮಾತುಕತೆ ನಡೆಸಿದರು. ಆ ನಂತರ ನಡೆದ ಸಭೆಯಲ್ಲಿ ಪನ್ನೀರ್ ಸೆಲ್ವಂ ಇರಲಿಲ್ಲ, ಸಭೆ ಮುಗಿಸಿ ಹೊರಬಂದಿದ್ದೇ ಪನ್ನೀರ್ ಸೆಲ್ವಂ ಮುಖ್ಯಮಂತ್ರಿ ಎಂದು ತೀರ್ಮಾನಿಸಲಾಯಿತು.
ಜಯಲಲಿತಾ ನಿಧನರಾದ 10 ನಿಮಿಷಕ್ಕೆ ಅಂದರೆ ರಾತ್ರಿ 11.40ಕ್ಕೆ ಪನ್ನೀರ್ ಸೆಲ್ವಂಗೆ ನಿರ್ಧಾರವನ್ನು ತಿಳಿಸಲಾಯಿತು. ಈ ಮಧ್ಯೆ ರಾತ್ರಿ 11.45ಕ್ಕೆ ಹೇಳಿಕೆ ಬಿಡುಗಡೆ ಮಾಡಿದ ಅಪೋಲೋ ಆಸ್ಪತ್ರೆ ಜಯಲಲಿತಾ ನಿಧನ ಸುದ್ದಿಯನ್ನು ಘೋಷಿಸಿತು. ಆ ನಂತರ ರಾಜಭವನಕ್ಕೆ ನಿರ್ಧಾರ ತಿಳಿಸಿ, ಪನ್ನೀರ್ ಸೆಲ್ವಂ ಸೇರಿದಂತೆ ಎಲ್ಲ ಶಾಸಕರು ರಾತ್ರಿ 12ಕ್ಕೆ ರಾಜಭವನಕ್ಕೆ ತೆರಳಿದರು. 12.30ಕ್ಕೆ ಪ್ರಮಾಣವಚನ ಪೂರ್ಣವಾಯಿತು.