ನಾಲಿಗೆ ಬಿಗಿ ಹಿಡಿದು ಮಾತಾಡಿ, ಜನ್ಮ ಜಾಲಾಡಿಸುತ್ತೇನೆ: ಮೋದಿ ಎಚ್ಚರಿಕೆ
ನಾಲಿಗೆ ಬಿಗಿಹಿಡಿದು ಮಾತನಾಡಿ, ಹರಿದ್ವಾರದಲ್ಲಿ ಕಾಂಗ್ರೆಸ್ ಮುಖಂಡರಿಗೆ ಪ್ರಧಾನಿ ಮೋದಿ ಎಚ್ಚರಿಕೆ.
ಡೆಹ್ರಾಡೂನ್, ಹರಿದ್ವಾರ, ಫೆ 11 (ಪಿಟಿಐ) : ಕಾಂಗ್ರೆಸ್ ಪಕ್ಷದ ನಾಯಕರು ನಾಲಿಗೆ ಬಿಗಿ ಹಿಡಿದು ಮಾತನಾಡಲಿ, ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ಮುಖಂಡರ ಜನ್ಮ ಜಾಲಾಡಿಸಿ ಬಿಡುತ್ತೇನೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
ಹರಿದ್ವಾರದಲ್ಲಿ ಚುನಾವಣೆಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ನಾನು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆಯಿಂದ ಮಾತನಾಡಿ ಎಂದು ಹೇಳುತ್ತಲೇ ಬರುತ್ತಿದ್ದೇನೆ, ಅವರು ಇದೇ ರೀತಿ ಹೇಳಿಕೆ ನೀಡುತ್ತಾ ಬಂದರೆ ಅವರ ಪಕ್ಷದ ಮುಖಂಡರ ಜಾತಕ ನನ್ನ ಬಳಿಯಿದೆ ಎನ್ನುವುದನ್ನು ಕಾಂಗ್ರೆಸ್ ಮುಖಂಡರು ಅರಿತಿರಲಿ ಎಂದು ಮೋದಿ ಎಚ್ಚರಿಸಿದ್ದಾರೆ.
ಪ್ರಸಕ್ತ ಬಜೆಟ್ ಅಧಿವೇಶನದ ವೇಳೆ, ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಗ್ಗೆ ಆಡಿದ ಮಾತಿಗೆ ಕಾಂಗ್ರೆಸ್ ನಾಯಕರು ನನ್ನ ಮೇಲೆ ಟೀಕಾಪ್ರಹಾರ ನಡೆಸುತ್ತಿದ್ದಾರೆ. ನಾನು ವಿವೇಕ ಇಟ್ಟುಕೊಂಡೇ ಹೇಳಿಕೆ ನೀಡಿದ್ದು ಎಂದು ಮೋದಿ ಸ್ಪಷ್ಟನೆ ನೀಡಿದ್ದಾರೆ.
ನಾನು ನನ್ನ ರಾಜಕೀಯ ವಿರೋಧಿಗಳ ವಿರುದ್ದ ಮಾತನಾಡುವಾಗ ಒಳ್ಳೆ ಪದಗಳನ್ನು ಬಳಸುತ್ತೇನೆ, ಆದರೆ ಕಾಂಗ್ರೆಸ್ ಮುಖಂಡರು ನನ್ನ ಬಗ್ಗೆ 'ನಾನ್ ಸೆನ್ಸ್' ಪದ ಬಳಸಿದರೆ, ಕಾಂಗ್ರೆಸ್ ಈ ದೇಶಕ್ಕೆ ಮಾಡಿರುವ ಮೋಸದ ಇತಿಹಾಸ ಅವರ ಹಿಂದೆಯೇ ಬರುತ್ತದೆ ಎನ್ನುವುದನ್ನು ಮೋದಿ, ಕಾಂಗ್ರೆಸ್ ಮುಖಂಡರಿಗೆ ನೆನೆಪಿಸಿದ್ದಾರೆ.
ಸರ್ಜಿಕಲ್ ದಾಳಿಯ ವೇಳೆ ನಮ್ಮ ದೇಶದ ಯೋಧರು ಎದುರಾಳಿಗಳ ಕ್ಯಾಂಪಿಗೆ ಹೋಗಿ ಉಗ್ರರನ್ನು ಸದೆಬಡಿದಿದ್ದಾರೆ. ಇಂತಹ ದಾಳಿಗಳನ್ನು ಗೌಪ್ಯವಾಗಿ ನಿರ್ವಹಿಸಬೇಕಾಗುತ್ತದೆ ಎನ್ನುವ ಕನಿಷ್ಠ ಜ್ಞಾನವಿಲ್ಲದ ವಿರೋಧ ಪಕ್ಷಗಳು ಯೋಧರ ಬಗ್ಗೆ ಅನುಮಾನ ವ್ಯಕ್ತಪಡಿಸಿತು ಎಂದು ಮೋದಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಚುನಾವಣೆಯ ಹೊಸ್ತಿಲಲ್ಲಿರುವ ಉತ್ತರಾಖಾಂಡ ರಾಜಧಾನಿ ಡೆಹ್ರಾಡೂನ್ ನಲ್ಲಿ ಶನಿವಾರ (ಫೆ 11) ಮತ್ತೊಂದು ಭಾರೀ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ನಮ್ಮ ಸರಕಾರ ಒನ್ ರ್ಯಾಂಕ್ ಒನ್ ಪೆನ್ಸನ್ ಸ್ಕೀಂ ಜಾರಿಗೆ ತಂದಿದೆ.
ಚಾರ್ ಧಾಮ್ ಯಾತ್ರೆಗೆ ಹೋಗುವ ಯಾತ್ರಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಗೆ ನಮ್ಮ ಸರಕರ ವಿಶೇಷ ಒತ್ತು ನೀಡಲಿದೆ, ಚೌಕೀದಾರನಾಗಿ ನೀವು ನನ್ನನ್ನು ನೇಮಿಸಿದ್ದೀರಾ, ಆ ಕೆಲಸ ನಾನು ಮಾಡುತ್ತಿದ್ದೇನೆಂದು ಸಭೆಯಲ್ಲಿ ಮೋದಿ ಹೇಳಿದ್ದಾರೆ.