ಅವರು (ಕರಾಚಿ) ಮನೇಲಿದ್ದಾರೆ, ಮಲಗಿದ್ದಾರೆ : ದಾವೂದ್ ಹೆಂಡತಿ
ನವದೆಹಲಿ, ಆಗಸ್ಟ್ 22 : "ಅವರು ಮನೇಲಿದ್ದಾರೆ, ಮಲಗಿದ್ದಾರೆ" ಎಂಬ ಮೂರು ಪದಗಳ ಹೇಳಿಕೆ ಸುದ್ದಿವಲಯದಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ. ಈ ಹೇಳಿಕೆ ನೀಡಿದ್ದು ಮತ್ತಾರೂ ಅಲ್ಲ. 1993ರ ಮುಂಬೈ ಸರಣಿ ದಾಳಿಯ ಪ್ರೈಮ್ ಆರೋಪಿ ದಾವೂದ್ ಇಬ್ರಾಹಿಂ ಹೆಂಡತಿ ಮಹಜಬೀನ್. ಆಕೆ ಹೇಳಿಕೆ ನೀಡಿದ್ದು ಪಾಕಿಸ್ತಾನದಿಂದ!
ದೇಶದ ಪ್ರಮುಖ ಸುದ್ದಿ ವಾಹಿನಿ, ಭಾರತೀಯ ಕಾಲಮಾನ ಶನಿವಾರ 12.24ಕ್ಕೆ ಮಾಡಿದ ಕರೆಗೆ ದಾವೂದ್ ಹೆಂಡತಿ ಮಹಜಬೀನ್ ಶೇಖ್ ಮೇಲಿನಂತೆ ಉತ್ತರಿಸಿದ್ದಾರೆ. ಮೋಸ್ಟ್ ವಾಂಟೆಡ್ ಭೂಗತ ದೊರೆ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲೇ ಇರುವುದು ಇದರಿಂದ ಸಾಬೀತಾಗಿದೆ. ಪಾಕಿಸ್ತಾನಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಮತ್ತಿನ್ನೇನು ಬೇಕು?
1993ರ ಸರಣಿ ಸ್ಫೋಟ ನಡೆಸಿ 257 ಜನರ ಹತ್ಯೆಗೆ ಕಾರಣನಾಗಿದ್ದ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿದ್ದಾನೆ ಎಂಬ ಭಾರತ ಸರಕಾರದ ಹೇಳಿಕೆಯನ್ನು ಪಾಕಿಸ್ತಾನ ಸರಕಾರ ಅಲ್ಲಗಳೆಯುತ್ತಲೇ ಬಂದಿತ್ತು. ಭಾರತದಲ್ಲಿರುವ ಪಾಕಿಸ್ತಾನದ ರಾಜಭಾರಿ ಅಬ್ದುಲ್ ಬಾಸಿತ್ ಈ ಹೇಳಿಕೆಯನ್ನು ನೀಡುತ್ತಲೇ ಬಂದಿದ್ದರು.
ಹಿಂದೂಸ್ತಾನ್ ಟೈಮ್ಸ್ ನಡೆಸಿದ ತನಿಖಾ ವರದಿಯ ಪ್ರಕಾರ, ದಾವೂದ್, ಆತನ ಹೆಂಡತಿ ಮಹಜಬೀನ್, ಮಗ ಮೊಯೀನ್ ನವಾಜ್ ಮತ್ತು ಹೆಣ್ಣುಮಕ್ಕಳಾದ ಮಹರುಖ್, ಮೆಹರೀನ್ ಮತ್ತು ಮಾಝಿಯಾ ಪಾಕಿಸ್ತಾನದ ಕರಾಚಿಯ ಶ್ರೀಮಂತ ಬಡಾವಣೆಯಲ್ಲಿ ನೆಲೆಸಿದ್ದಾರೆ. ದಾವೂದ್ ಮಗಳು ಮಹರುಖ್ ಪಾಕ್ ಮಾಜಿ ಕ್ರಿಕೆಟರ್ ಜಾವೇದ್ ಮಿಯಾಂದಾಗ್ ಮಗನನ್ನು ವರಿಸಿದ್ದಾಳೆ.
ಸೋಮವಾರ ಭಾರತ ಮತ್ತು ಪಾಕಿಸ್ತಾನದ ಭದ್ರತಾ ಸಲಹೆಗಾರರು ನವದೆಹಲಿಯಲ್ಲಿ ಭೇಟಿ ಮಾಡುತ್ತಿರುವ ಹಿನ್ನೆಲೆಯಲ್ಲಿ, ದಾವೂದ್ ಪಾಕಿಸ್ತಾನದಲ್ಲೇ ಇರುವ ಮಾಹಿತಿ ಭಾರೀ ಮಹತ್ವ ಪಡೆದುಕೊಂಡಿದೆ. ದಾವೂದ್ ನನ್ನು ಹಸ್ತಾಂತರಿಸುವಂತೆ ಪಾಕಿಸ್ತಾನದ ಮೇಲೆ ಭಾರತ ಮತ್ತೆ ಒತ್ತಡ ಹೇರುವ ಸಂಭವನೀಯತೆಯಿದೆ.