ಅಡ್ವಾಣಿ ಕನಸಿನ ರಾಷ್ಟ್ರಪತಿ ಹುದ್ದೆಗೆ ಮುಳ್ಳಾಯ್ತಾ ಬಾಬ್ರಿ ಕೇಸ್?
ನವದೆಹಲಿ, ಮೇ 30: ಸರಿಯಾಗಿ 27 ವರ್ಷಗಳ ಹಿಂದೆ ಅಯೋಧ್ಯೆಗೆ ರಥ ಯಾತ್ರೆ ಮುನ್ನಡೆಸಿದ್ದರು ಬಿಜೆಪಿಯ ಭೀಷ್ಮ ಎಲ್.ಕೆ ಅಡ್ವಾಣಿ. ಇಂದು ಇದೇ ಅಡ್ವಾಣಿ ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯದ ಕಟಕಟೆಯಲ್ಲಿ ನಿಂತಿದ್ದಾರೆ.
ಅವರ ವಿರುದ್ಧ ನ್ಯಾಯಾಲಯ ಆರೋಪಗಳನ್ನು ಪಟ್ಟಿ ಸಿದ್ದಪಡಿಸುತ್ತಿದೆ. ಕಳೆದ ತಿಂಗಳು ಅಡ್ವಾಣಿ ಮತ್ತಿತರರ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿತ್ತು. ಸದ್ಯ ರಾಷ್ಟ್ರಪತಿಯಾಗುವ ಅಡ್ವಾಣಿ ಕನಸಿಗೆ ಈ ಪ್ರಕರಣ ಅಡ್ಡಿಯಾಗುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ.[ಬಾಬ್ರಿ ಮಸೀದಿ ಧ್ವಂಸ ಪ್ರಕರಣ : 8 ಪ್ರಮುಖ ಬೆಳವಣಿಗೆ]
ಕೆಲವು ವರದಿಗಳ ಪ್ರಕಾರ ಜುಲೈನಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಅಡ್ವಾಣಿಯನ್ನೇ ಕಣಕ್ಕಿಳಿಸಲು ಪ್ರಧಾನಿ ನರೇಂದ್ರ ಮೋದಿ ಯೋಜನೆ ಹಾಕಿಕೊಂಡಿದ್ದಾರೆ. ಇದು ಅವರು ಅಡ್ವಾಣಿಗೆ ಸಲ್ಲಿಸುವ ಗುರು ದಕ್ಷಿಣೆ ಎಂದು ಪಕ್ಷದ ಕಾರ್ಯಕರ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಆದರೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವಾಣಿ ರಾಷ್ಟ್ರಪತಿಯಾಗುವ ಅವಕಾಶಗಳು ನಿಧಾನಕ್ಕೆ ಕಡಿಮೆಯಾಗುತ್ತಿವೆ. ಈ ಕುರಿತು ಕೇಂದ್ರ ಸಚಿವ ಅರುಣ್ ಜೇಟ್ಲಿಯವರ ಬಳಿ ಪ್ರಶ್ನಿಸಿದಾಗ, "ಪ್ರಶ್ನೆಯೇ ಕಾಲ್ಪನಿಕ," ಎಂದು ಹೇಳಿದ್ದರು.[25 ವರ್ಷಗಳ ನಂತರ ಬಾಬ್ರಿ ಮಸೀದಿ ಕೆಡವಿದ ಕೇಸ್ ರೀ ಕ್ಯಾಪ್]
ಇನ್ನು ಹಲವು ಬಿಜೆಪಿ ಮೂಲಗಳು ಈ ಕುರಿತು ಇನ್ನೂ ಯಾವುದೂ ನಿರ್ಧಾರವಾಗಿಲ್ಲ ಎಂದೇ ಹೇಳುತ್ತಿದ್ದಾರೆ. ದೇಶದ ರಾಜಕಾರಣಕ್ಕೆ ಬಂದಾಗ ಹಿಂದೂ ರಾಜಕಾರಣವನ್ನು ಮುನ್ನಡೆಸಿದವರು ಅಡ್ವಾಣಿ. ಇದನ್ನು ನೆನಪಿನಲ್ಲಿಟ್ಟುಕೊಂಡು ಬಿಜೆಪಿ ಅವರಿಗೆ ರಾಷ್ಟ್ರಪತಿ ಹುದ್ದೆ ನೀಡುತ್ತಾ ಗೊತ್ತಿಲ್ಲ.
ಇನ್ನೊಂದು ವಿಶೇಷ ಎಂದರೆ ಅಡ್ವಾಣಿಯನ್ನು ರಾಷ್ಟ್ರಪತಿಯಾಗಿಸಿ ಎಂಬ ಮೊದಲ ಬೇಡಿಕೆ ಬಿಜೆಪಿ ಒಳಗಿನವರಿಂದಲೇ ಬಂದಿರಲಿಲ್ಲ. ಬದಲಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂಥಹದ್ದೊಂದು ಬೇಡಿಕೆ ಮುಂದಿಟ್ಟಿದ್ದರು. ಮಾತ್ರವಲ್ಲ ಅಡ್ವಾಣಿ ರಾಷ್ಟ್ರಪತಿ ಹುದ್ದೆಗೆ ಒಮ್ಮತದ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಿದ್ದರು.[ಬಾಂಬ್ರಿ ಮಸೀದಿ ಧ್ವಂಸ ಪ್ರಕರಣ, ಇಂದು ಕೋರ್ಟ್ ಮುಂದೆ ಅಡ್ವಾಣಿ ಹಾಜರ್]
ಒಂದೊಮ್ಮೆ ಅಡ್ವಾಣಿ ರಾಷ್ಟ್ರಪತಿ ಅಭ್ಯರ್ಥಿಯಾಗಬೇಕಾದರೆ ಅವರು ಆರ್.ಎಸ್.ಎಸ್ ಮತ್ತು ಬಿಜೆಪಿ ಎರಡೂ ಕಡೆಗಳ ಬೆಂಬಲ ಪಡೆಯಬೇಕಾಗುತ್ತದೆ. ಆದರೆ ನಿಜವಾಗಿಯೂ ಮೋದಿ ಮತ್ತು ಆರ್.ಎಸ್.ಎಸ್ ಅವರನ್ನು ಬೆಂಬಲಿಸುವುದೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಸಮಯವೇ ಇದಕ್ಕೆ ಉತ್ತರಿಸಲಿದೆ.