ಹರಿಯಾಣ ಬಿಜೆಪಿ ಅಧ್ಯಕ್ಷರ ಪುತ್ರನ ಆಟಾಟೋಪಕ್ಕೆ ನಲುಗಿದ ಯುವತಿ
ಚಂಡೀಗಢ, ಆಗಸ್ಟ್ 7: ಹರಿಯಾಣ ಬಿಜೆಪಿ ಘಟಕದ ಅಧ್ಯಕ್ಷ ಸುಭಾಷ್ ಬರಲಾ ಪುತ್ರ ವಿಕಾಸ್ ಬರಲಾ ಯುವತಿಯೊಬ್ಬಳನ್ನು ಹಿಂಬಾಲಿಸಿ ಬೆದರಿಕೆ ಹಾಕಿದ ಪ್ರಕರಣ ರಾಷ್ಟ್ರಾದ್ಯಂತ ಸದ್ದು ಮಾಡುತ್ತಿದೆ.
ಒಂದೆಡೆ ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ದೂರು ನೀಡಿದ ಯುವತಿಯ ತೇಜೋವಧೆಯನ್ನು ಕುಟುಂಬಸ್ಥರು ಮಾಡುತ್ತಿದ್ದಾರೆ ಎಂದು 'ದಿ ವೈರ್' ವರದಿ ಮಾಡಿದೆ. ಇನ್ನೊಂದೆಡೆ ಯುವತಿಯನ್ನು ಹಿಂಬಾಲಿಸಿದ ಮಾರ್ಗದ 9 ಸಿಸಿಟಿವಿ ಕ್ಯಾಮೆರಾಗಳೂ ಏಕಕಾಲಕ್ಕೆ ಕೆಲಸ ಮಾಡುತ್ತಿರಲಿಲ್ಲ ಎಂದು ಪೊಲೀಸರು ನಾಟಕೀಯ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ. ಆದರೆ ರಾಜ್ಯಾಧ್ಯಕ್ಷ ಸುಭಾಷ್ ಬರಲಾ ಪುತ್ರನಿಗೆ ಮಾತ್ರ ಈ ಪ್ರಕರಣದಲ್ಲಿ ಸಂಬಂಧವಿರುವುದರಿಂದ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಬಿಜೆಪಿ ವಾದಿಸಿದೆ.
ಆಗಿದ್ದೇನು?
ಎರಡು ದಿನಗಳ ಹಿಂದೆ ಐಎಎಸ್ ಅಧಿಕಾರಿಯೊಬ್ಬರ ಮಗಳನ್ನು ಕಾರಿನಲ್ಲಿ ವಿಕಾಸ್ ಬರಲಾ ಹಿಂಬಾಲಿಸಿದ್ದರು. ಈ ಕುರಿತು ಯುವತಿ 'ಬೆದರಿಕೆ ಹಾಕಿದರು ಮತ್ತು ಅಪಹರಣ ನಡೆಸಲು ಯತ್ನಿಸಿದ್ದರು,' ಎಂದು ಪೊಲೀಸರಿಗೆ ದೂರು ನೀಡಿದ್ದರು.
ಈ ವೇಳೆ ಪೊಲೀಸರು ಬರಲಾ ಮತ್ತು ಆತನ ಸ್ನೇಹಿತ ಆಶಿಶ್ ಕುಮಾರ್ ನನ್ನು ಬಂಧಿಸಿ, ಆಮೇಲೆ ಬಿಡುಗಡೆ ಮಾಡಿದ್ದರು. ಪೊಲೀಸರು ಜಾಮೀನು ರಹಿತ ಪ್ರಕರಣ ಅಂದರೆ 'ಅಪಹರಣ ಯತ್ನ' ಪ್ರಕರಣವನ್ನು ದಾಖಲಿಸದೆ ಅವರನ್ನು ಬಿಡುಗಡೆ ಮಾಡಿದ್ದರು. ಈ ಕುರಿತು ಹೇಳಿಕ್ಕೆ ನೀಡಿರುವ ಡಿಎಸ್ಪಿ ಸತೀಶ್ ಕುಮಾರ್ 'ಜಾಮೀನು ರಹಿತ ಪ್ರಕರಣ' ದಾಖಲಿಸುವಂತ ಅಪರಾಧವೇನೂ ನಡೆದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಅಧ್ಯಕ್ಷರ ವಿರುದ್ಧ ಆಕ್ರೋಶವನ್ನು ಹುಟ್ಟುಹಾಕಿತ್ತು. ಇದರಿಂದ ಕೆರಳಿದ ಬರಲಾ ಕುಟುಂಬಸ್ಥರು ಯುವತಿಯ ವಿರುದ್ಧ ಸಾಮಾಜಿಕ ತಾಣದಲ್ಲಿ ಅವಹೇಳನಾಕಾರಿ ಪೋಸ್ಟ್ ಹಾಕಿ ತೇಜೋವಧೆ ಮಾಡುತ್ತಿದ್ದಾರೆ.
ಪ್ರಕರಣ ದಾಖಲಿಸಿದ ಯುವತಿಯ ಅಪ್ಪ ವಿರೇಂದರ್ ಖಂಡು ಹರಿಯಾಣದಲ್ಲಿ ಐಎಎಸ್ ಅಧಿಕಾರಿಯಾಗಿದ್ದು, ಪ್ರಕರಣದ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. 'ಯುವಕರು ಪ್ರಭಾವಿ ಕುಟುಂಬದವರು. ಈ ರೀತಿಯ ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವುದಿಲ್ಲ," ಎಂದು ಅವರು ಅಸಹಾಯಕತೆ ಪ್ರದರ್ಶಿಸಿದ್ದಾರೆ.
ಇದಲ್ಲದೆ ಸುಭಾಷ್ ಬರಲಾ ಅವರ ವಿರುದ್ದ ವಿಪಕ್ಷಗಳು ಮತ್ತು ಶಿವಸೇನೆಯಂಥ ಬಿಜೆಪಿ ಮಿತ್ರ ಪಕ್ಷಗಳು ತೀವ್ರ ಆಕ್ರೋಶ ಹೊರ ಹಾಕಿವೆ. ಸಿಸಿಟಿವಿ ದೃಶ್ಯಾವಳಿ ಇಲ್ಲ ಎನ್ನು ಮೂಲಕ ಬಿಜೆಪಿ ನೇರವಾಗಿ ಪ್ರಕರಣವನ್ನು ಮುಚ್ಚಿ ಹಾಕುತ್ತಿದೆ. ಬಿಜೆಪಿ ಅಧ್ಯಕ್ಷರು ರಾಜೀನಾಮೆ ನೀಡಲೇಬೇಕು ಎಂದು ಕಾಂಗ್ರೆಸ್ ಕಿಡಿಕಾರಿದೆ.
ಇನ್ನು 'ಚಂಡೀಗಢ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದು ಸುಭಾಷ್ ಬರಲಾ ಅವರಿಗೆ ಸಂಬಂಧಿಸಿದ್ದಲ್ಲ; ಅವರ ಮಗನಿಗೆ ಸಂಬಂಧಿಸಿದ ಪ್ರಕರಣ," ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಹಾರಿಕೆಯ ಉತ್ತರ ನೀಡಿದ್ದಾರೆ. ಈ ಮೂಲಕ ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.