ಹೋರಾಟದಿಂದ ಹಿಂದೆ ಸರಿದ ಕೌರ್ಗೆ ಪ್ರತಾಪ್ ತಿರುಗೇಟು
ಯುದ್ಧ ನಡೆಯಬೇಕಾದರೆ ಎರಡು ದೇಶಗಳಿರಲೇಬೇಕು. ಭಾರತ ತನ್ನ ಮೇಲೆಯೇ ಯುದ್ಧ ಸಾರಲು ಸಾಧ್ಯವೆ? ಹಾಗಾದ್ರೆ ಪಾಕಿಸ್ತಾನ ಅಲ್ಲದಿದ್ದರೆ ನಿಮ್ಮ (ಗುರ್ ಮೆಹರ್ ಕೌರ್) ತಂದೆಯನ್ನು ಕೊಂದಿದ್ದು ಯಾರು?
ನವದೆಹಲಿ, ಫೆಬ್ರವರಿ 28 : "ನನ್ನ ತಂದೆಯನ್ನು ಪಾಕಿಸ್ತಾನ ಕೊಂದಿಲ್ಲ, ಯುದ್ಧ ಕೊಂದಿದೆ...", "ನನಗೆ ಎಬಿವಿಪಿ ಭಯವಿಲ್ಲ. ನಾನು ಕೇವಲ ವಿದ್ಯಾರ್ಥಿಗಳ ಪರವಾಗಿದ್ದೇನೆ..." ಮುಂತಾದ ಮೌನ ಸಂದೇಶಗಳ ಮೂಲಕ ರಾಷ್ಟ್ರದಾದ್ಯಂತ ಸಂಚಲನ ಉಂಟು ಮಾಡಿದ್ದ ಗುರ್ಮೆಹರ್ ಕೌರ್ ತಾವು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಅಮರನಾಥ ಯಾತ್ರೆಯ ಸಂದರ್ಭ (ಕಾರ್ಗಿಲ್ ಯುದ್ಧ ಅಲ್ಲ) ಹುತಾತ್ಮರಾಗಿದ್ದ ಮಂದೀಪ್ ಸಿಂಗ್ ಅವರ ಮಗಳು ಸೋಷಿಯಲ್ ಮೀಡಿಯಾದಲ್ಲಿ ಆರಂಭಿಸಿದ್ದ ಯುದ್ಧ ವಿವಾದಗಳ ಸ್ವರೂಪ ಪಡೆದುಕೊಂಡಿದೆ. ಕೆಲವರು ಜಲಂಧರದ ಯುವತಿ ಗುರ್ಮೆಹರ್ ಬೆಂಬಲಕ್ಕೆ ನಿಂತಿದ್ದರೆ, ಹಲವರು ಆಕೆಯ ಪ್ರತಿಭಟನೆಯನ್ನು ಟೀಕಿಸುತ್ತಿದ್ದಾರೆ.
ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ ಅವರು ಒಂದು ಹೆಜ್ಜೆ ಮುಂದೆ ಹೋಗಿ, ದೇಶದ್ರೋಹಿ ದಾವೂದ್ ಇಬ್ರಾಹಿಂ ದೇಶದ್ರೋಹವನ್ನು ಸಮರ್ಥಿಸಿಕೊಳ್ಳಲು ತನ್ನ ತಂದೆಯ ಹೆಸರು ಹೇಳಿರಲಿಲ್ಲ ಎಂದು ಟ್ವೀಟ್ ಮಾಡಿದ್ದರು. ಸಿಂಹ ಅವರು, ಗುರ್ಮೆಹರ್ ಕೌರ್ ಅವರನ್ನು ದಾವೂದ್ ಇಬ್ರಾಹಿಂಗೆ ಹೋಲಿಸಿದ್ದಾರೆ ಎಂದು ಟೀಕಿಸಲಾಯಿತು. [ಗುರ್ಮೆಹರ್ ಕೌರ್, ಪಾಕಿಸ್ತಾನ ಎಷ್ಟು ಭಾರತೀಯರನ್ನು ಕೊಂದಿದೆ ಗೊತ್ತಾ?]
ಸಂಸದ ಪ್ರತಾಪ್ ಸಿಂಹ ತಿರುಗೇಟು
ಯುದ್ಧ ನಡೆಯಬೇಕಾದರೆ ಎರಡು ದೇಶಗಳಿರಲೇಬೇಕು. ಭಾರತ ತನ್ನ ಮೇಲೆಯೇ ಯುದ್ಧ ಸಾರಲು ಸಾಧ್ಯವೆ? ಹಾಗಾದ್ರೆ ಪಾಕಿಸ್ತಾನ ಅಲ್ಲದಿದ್ದರೆ ನಿಮ್ಮ ತಂದೆಯನ್ನು ಕೊಂದಿದ್ದು ಯಾರು? ನೀವು ಯುದ್ಧಭೂಮಿಯಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡಿರುವ ಸಹಸ್ರಾರು ಮಕ್ಕಳ ಹೃದಯವನ್ನು ಒಡೆದಿದ್ದೀರಿ ಎಂದು ಪ್ರತಾಪ್ ಸಿಂಹ ಅವರು ತಿರುಗೇಟು ನೀಡಿದ್ದಾರೆ.
ಚಳವಳಿಯನ್ನು ನಾನು ಹಿಂತೆಗೆದುಕೊಂಡಿದ್ದೇನೆ
ನನ್ನ ಚಳವಳಿಯನ್ನು ನಾನು ಹಿಂತೆಗೆದುಕೊಂಡಿದ್ದೇನೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನನ್ನ ಧೈರ್ಯವನ್ನು ಪ್ರಶ್ನಿಸಿದ ಎಲ್ಲರಿಗೂ ತಕ್ಕ ಉತ್ತರ ನೀಡಿದ್ದೇನೆ. ಪ್ರತಿಭಟನೆ ನಡೆಯುತ್ತಿರುವುದು ವಿದ್ಯಾರ್ಥಿಗಳಿಗಾಗಿಯೇ ಹೊರತು ನನಗಾಗಿ ಅಲ್ಲ. ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ ಎಂಬ ಸಂದೇಶವನ್ನು ಕೌರ್ ಟ್ವಿಟ್ಟರ್ ನಲ್ಲಿ ಹಾಕಿದ್ದಾಳೆ.[ಕಾರ್ಗಿಲ್ ಅಲ್ಲ, ಅಮರನಾಥ ಯಾತ್ರಿಕರ ರಕ್ಷಣೆ ವೇಳೆ ಕೌರ್ ತಂದೆ ಹುತಾತ್ಮ!]
ಕೌರ್ ಗೆ ಮುಂದುವರಿದ ಬೆಂಬಲ
ಕೌರ್ ತಮ್ಮ ಮೌನ ಆಂದೋಲನವನ್ನು ಹಿಂತೆಗೆದುಕೊಂಡಿರಬಹುದು. ಆದರೆ, ಬಿಜೆಪಿ ಮತ್ತು ಎಬಿವಿಪಿಯನ್ನು ವಿರೋಧಿಸುವವರಿಂದ ಗುರ್ಮೆಹರ್ ಕೌರ್ ಅವರಿಗೆ ಬೆಂಬಲ ವ್ಯಕ್ತವಾಗುತ್ತಲೇ ಇದೆ. ನೀನು ನಿನ್ನ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಬೇಡ. ನಿನ್ನ ಜೊತೆಯಲ್ಲಿ ನಾವಿದ್ದೇವೆ ಎಂದು ನೂರಾರು ಜನರು ಕೌರ್ ಬೆಂಬಲಕ್ಕೆ ನಿಂತಿದ್ದಾರೆ.
ರಾಬರ್ಟ್ ವಾದ್ರಾ, ಪ್ರಿಯಾಂಕಾ ಗಾಂಧಿ ಗಂಡ
ಗುರ್ಮೆರಹ್ ಕೌರ್, ನಾನು ನಿನ್ನ ಜೊತೆಗಿದ್ದೇನೆ. ತಮ್ಮ ಹಕ್ಕು ಮತ್ತು ವಾಕ್ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಎಲ್ಲರ ಜೊತೆಗೆ ನಾನಿದ್ದೇನೆ. ದಬ್ಬಾಳಿಕೆಯ ವಿರುದ್ಧ ಹೋರಾಡುತ್ತಿರುವ ನಿನಗೆ ಬೆಂಬಲವಾಗಿ ಇಡೀ ದೇಶ ನಿಂತಿದೆ. ನಿನ್ನ ಬಗ್ಗೆ ನಮಗೆ ಅಪಾರವಾದ ಹೆಮ್ಮೆಯಿದೆ. ಒಬ್ಬ ಗೌರವಯುತ ಯುವತಿಯನ್ನು ಟ್ರೋಲ್ ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಪ್ರಿಯಾಂಕಾ ಗಾಂಧಿ ವಾದ್ರಾಅವರ ಗಂಡ ರಾಬರ್ಟ್ ವಾದ್ರಾ ಅವರು ಬೆಂಬಲ ಸೂಚಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಗುರ್ಮೆಹರ್ ಕೌರ್ ಅವರಿಗೆ ಅತ್ಯಾಚಾರದ ಬೆದರಿಕೆ ಒಡ್ಡಿರುವವರ ವಿರುದ್ಧ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಮಧ್ಯಾಹ್ನ 2.30ಕ್ಕೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.
ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
ವಿದ್ಯಾರ್ಥಿಗಳಲ್ಲಿ ಬೆದರಿಕೆ ಬಿತ್ತುತ್ತಿರುವವರ ವಿರುದ್ಧ ನಾನು ನಿಲ್ಲುತ್ತೇನೆ. ಸಿಟ್ಟಿನಿಂದ, ಅಸಹಿಷ್ಣುತೆಯ ವಿರುದ್ಧ ದನಿ ಎತ್ತುವ ಪ್ರತಿಯೊಬ್ಬರಲ್ಲಿಯೂ ಗುರ್ಮೆಹರ್ ಕೌರ್ ಇರುತ್ತಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕೌರ್ ಬೆಂಬಲಕ್ಕೆ ಬಂದ ಕಾರ್ಗಿ ಹುತಾತ್ಮನ ತಂದೆ
ಒಬ್ಬ ಮಹಿಳೆಯ ಗೌರವ ಎಲ್ಲಕ್ಕಿಂತ ಮಹತ್ವವಾದದ್ದು. ತಪ್ಪಿಸತ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೌರಭ್ ಕಾಲಿಯಾ ಅವರ ತಂದೆ ಎನ್ ಕೆ ಕಾಲಿಯಾ ಅವರು, ಗುರ್ ಮೆಹರ್ ಕೌರ್ ಅವರಿಗೆ ಅತ್ಯಾಚಾರದ ಬೆದರಿಕೆ ಒಡ್ಡುತ್ತಿರುವವರ ವಿರುದ್ಧ ಗುಡುಗಿದ್ದಾರೆ.
ಚೇತನ್ ಭಗತ್, ಕಾದಂಬರಿಕಾರ, ಲೇಖಕ
ರಿಲ್ಯಾಕ್ಸ್. ನೀನು ಸರಿಯಾಗಿಯೇ ಮಾಡಿದ್ದಿಯಾ. ನಿನ್ನ ಅಭಿಪ್ರಾಯವನ್ನು ನಾವು ಒಪ್ಪಿಕೊಳ್ಳಬಹುದು ಅಥವಾ ಒಪ್ಪಿಕೊಳ್ಳದೇ ಇರಬಹುದು. ಆದರೆ, ಅಭಿಪ್ರಾಯ ವ್ಯಕ್ತಪಡಿಸುವ ನಿನ್ನ ಹಕ್ಕಿನ ಪರವಾಗಿ ಯಾವತ್ತೂ ನಿಲ್ಲುತ್ತೇನೆ ಎಂದು ಹೇಳಿದ್ದಾರೆ ಲೇಖಕ ಚೇತನ್ ಭಗತ್.