ಭೀಕರ ಪ್ರವಾಹಕ್ಕೆ ಗುಜರಾತ್ ತತ್ತರ: 83 ಕ್ಕೇರಿದ ಸಾವಿನ ಸಂಖ್ಯೆ
ಅಹಮದಾಬಾದ್, ಜುಲೈ 26: ನೀರು... ನೀರು... ನೀರು... ಕಣ್ಣು ಹಾಯಿಸಿದಷ್ಟು ದೂರವೂ ನೀರೇ ನೀರು. ಇದು ಗುಜರಾತಿನ ಪ್ರಸ್ತುತ ಪರಿಸ್ಥಿತಿ. ಮನೆ ಕಳೆದುಕೊಂಡವರು, ಆತ್ಮೀಯರನ್ನೇ ಕಳೆದುಕೊಂಡವರ ಕತೆ ಗುಜರಾತಿನ ಗಲ್ಲಿ ಗಲ್ಲಿಯಲ್ಲೂ ಸಿಕ್ಕುತ್ತದೆ! ಹೌದು, ಜುಲೈ 21 ರಿಂದ ಗುಜರಾತಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಎಲ್ಲೆಲ್ಲೂ ಪ್ರವಾಹ ತಲೆದೂರಿದೆ.
ಈ ಪ್ರವಾಹದಲ್ಲಿ ನಿನ್ನೆ (ಜುಲೈ 25) 9 ಜನ ಸಾವಿಗೀಡಾಗಿದ್ದು, ಒಟ್ಟು ಸಾವಿನ ಸಂಖ್ಯೆ 83 ಕ್ಕೇರಿದೆ. 46,000 ಕ್ಕೂ ಹೆಚ್ಚು ಸಂತ್ರಸ್ಥರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ನಿನ್ನೆ(ಜುಲೈ 25) ಗುಜರಾತ್ ಪ್ರವಾಹವನ್ನು ಹೆಲಿಕಾಪ್ಟರ್ ಮೂಲಕ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ, ಧೈರ್ಯಗೆಡಬಾರದೆಂದು ಗುಜರಾತ್ ಜನತೆಯಲ್ಲಿ ಮನವಿಮಾಡಿಕೊಂಡಿದ್ದಾರೆ.
ಪ್ರವಾಹ ಪೀಡಿತ ಗುಜರಾತಿಗೆ ಮೋದಿಯಿಂದ ರೂ. 500 ಕೋಟಿ ಪರಿಹಾರ
ಹಾಗೆಯೇ ಗುಜರಾತಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ 500 ಕೋಟಿ ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ.ಪರಿಹಾರ ಮತ್ತು ಗಂಭೀರವಾಗಿ ಗಾಯಗೊಂಡವರ ಚಿಕಿತ್ಸೆಗಾಗಿ ತಲಾ 50,000 ರೂ. ನೀಡುವುದಾಗಿಯೂ ಹೇಳಿದ್ದಾರೆ.
ಮನೆ-ಹೊಲವೆಲ್ಲ ನೀರುಪಾಲು: ನಮ್ಮ ನಾಳೆಗಳಿಗೆ ಗತಿ ಯಾರು?
ಭಾರತೀಯ ಭೂ ಸೇನೆ, ವಾಯು ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿಗಳು ಶಕ್ತಿ ಮೀರಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
ನನಗೆ ಗುಜರಾತ್ ಜನರ ಮೇಲೆ ನಂಬಿಕೆ ಇದೆ
ನನಗೆ ಗುಜರಾತ್ ಜನರ ಧೈರ್ಯದ ಬಗ್ಗೆ ನಂಬಿಕೆಯಿದೆ. ಗುಜರಾತ್ ಆದಷ್ಟು ಬೇಗ ಈ ಸಂಕಷ್ಟದಿಂದ ಹೊರಬರುತ್ತದೆ. ಮತ್ತೆ ಪ್ರಗತಿಯತ್ತ ಮುಂದುವರಿಯುತ್ತದೆ ಎಂದು ಗುಜರಾತಿನ ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿದಿದ್ದಾರೆ.
ಸಾರಿಗೆ ಸಂಪರ್ಕವೂ ಇಲ್ಲ!
ಪ್ರವಾಹದಿಂದಾಗಿ ಗುಜರಾತಿನ ಹಲವೆಡೆಗಳಲ್ಲಿ ಸಾರಿಗೆ ಸಂಪರ್ಕವೇ ಇಲ್ಲದಂತಾಗಿದೆ. ಇಲ್ಲಿನ ಮುಂಬೈ ಮತ್ತು ದೆಹಲಿ ಮಾರ್ಗಕ್ಕೆ ತೆರಳುವ ಸುಮಾರು 20 ಕ್ಕೂ ಹೆಚ್ಚು ರೈಲುಗಳು ಸ್ಥಗಿತಗೊಂಡಿವೆ. ರೈಲ್ವೇ ಟ್ರ್ಯಾಕ್ ಗಳೆಲ್ಲ ಮುಳುಗಿಹೋಗಿವೆ. 915 ಕ್ಕೂ ಹೆಚ್ಚು ಬಸ್ಸುಗಳು ಸ್ಥಗಿತಗೊಂದಿವೆ. ಉತ್ತರ ಗುಜರಾತಿನೊಂದಿಗೆ ಸಂಪರ್ಕ ಬೆಸೆಯುವ ಎಲ್ಲಾ ಮುಖ್ಯ ರಸ್ಥೆಗಳೂ ಹಾಳಾಗಿವೆ.
463 ಮಿ ಮೀ ಮಳೆ
ಬನಷ್ಕಂಠದ ದಾಂತಿವಾಡದಲ್ಲಿ 463 ಮಿ.ಮೀ. ಮಳೆ ದಾಖಲಾಗಿದ್ದು, ಪಲಾನ್ಪುರ(380 ಮಿ.ಮೀ.), ವದ್ಗಾಂ(357ಮಿ.ಮೀ.), ಅಮಿರ್ಗಢ್(337 ಮಿ.ಮೀ.), ಲಖನಿ(305 ಮಿ.ಮೀ.) ಗಳಲ್ಲೂ ಧಾರಾಕಾರ ಮಳೆ ಸುರಿದಿದೆ.
ರಾಜಸ್ತಾನದಲ್ಲೂ ಮಳೆ
ರಾಜಸ್ತಾನದಲ್ಲೂ ಕಳೆದ ಎರಡು ದಿನದಿಂದ ಎಡಬಿಡದೆ ಸುರಿಯುತ್ತಿರುವವ ಮಳೆ, ಪ್ರವಾಹ ಪರಿಸ್ಥಿತಿಯನ್ನು ತಂದಿಟ್ಟಿದ್ದು, ಇದುವರೆಗೂ 12 ಜನ ಸಾವಿಗೀಡಾಗಿದ್ದಾರೆ. 500 ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.