ಕುಡಿದಿದ್ದ ಗುಜರಾತ್ ಉಪಮುಖ್ಯಮಂತ್ರಿ ಮಗನಿಗೆ ಏರ್ಪೋರ್ಟಲ್ಲಿ ಮಂಗಳಾರತಿ
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿತಿನ್ ಭಾಯಿ ಪಟೇಲ್, ಇದು ತಮ್ಮ ಜನಪ್ರಿಯತೆಗೆ ಕುತ್ತು ತರುವ ಸಂಚು. ನಮ್ಮ ವಿರೋಧಿಗಳು ನಮ್ಮ ಜನಪ್ರಿಯತೆಗೆ ಮಸಿ ಬಳೆಯಲು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದೂ ಅವರು ದೂರಿದ್ದಾರೆ.
ಗುಜರಾತ್, ಮೇ 8: ಗುಜರಾತ್ ಬಿಜೆಪಿ ಸರಕಾರದ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಪುತ್ರನನ್ನು ಕತಾರ್ ಏರ್ವೇಸ್ ವಿಮಾನವೇರದಂತೆ ಸಿಬ್ಬಂದಿಗಳು ತಡೆದಿದ್ದಾರೆ. ಕಾರಣ ಅವರು ಮದ್ಯ ಸೇವಿಸಿದ್ದು.
ಸಿಬ್ಬಂದಿಗಳು ವಿಮಾನ ಹತ್ತಲು ತಡೆಯುತ್ತಿದ್ದಂತೆ ನಿತಿನ್ ಪಟೇಲ್ ಪುತ್ರ ಜೈಮನ್ ಪಟೇಲ್ ಅಧಿಕಾರಿಗಳೊಂದಿಗೆ ವಾಗ್ವಾದವೂ ನಡೆಸಿದ್ದಾರೆ. 30 ವರ್ಷ ವಯಸ್ಸಿನ ಜೈಮನ್ ಪಟೇಲ್ ಪತ್ನಿ ಹಾಗೂ ಮಗಳೊದಿಗೆ ಗ್ರೀಸ್ ಪ್ರವಾಸಕ್ಕೆ ಹೊರಟಿದ್ದರು ಎನ್ನಲಾಗಿದೆ. ಬೆಳಿಗ್ಗೆ 4 ಗಂಟೆಗೆ ಈ ಘಟನೆ ನಡೆದಿದೆ.[ಚಪ್ಪಲಿಯೇಟು ಪ್ರಕರಣ: ಸಂಸದ ರವೀಂದ್ರ ಬೆಂಬಲಕ್ಕೆ ನಿಂತ ಶಿವಸೇನೆ]
ಇನ್ನು ಮೂಲಗಳ ಪ್ರಕಾರ ಲ್ಯಾಂಡ್ ಡೀಲರ್ ಪಟೇಲ್ ಅಹಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವ ವೇಳೆ ಅವರಿಗೆ ನಡೆದಾಡಲೂ ಆಗುತ್ತಿರಲಿಲ್ಲ ಎನ್ನಲಾಗಿದೆ. ವೀಲ್ ಚೇರಿನಲ್ಲಿ ಕುಳಿತುಕೊಂಡು ಅವರು ಇಮಿಗ್ರೇಷನ್ ಚೆಕ್ ಗಳನ್ನೆಲ್ಲಾ ಮುಗಿಸಿದ್ದಾರೆ. ಇದಾದ ನಂತರ ವಿಮಾನದ ಸಿಬ್ಬಂದಿಗಳು ಅವರನ್ನು ವಿಮಾನ ಹತ್ತದಂತೆ ತಡೆದಿದ್ದಾರೆ. ಈ ಸಂದರ್ಭ ಅಲ್ಲಿನ ಸಿಬ್ಬಂದಿಗಳ ಜತೆ ಅವರು ವಾಗ್ವಾದವೂ ನಡೆಸಿದ್ದಾರೆ ಎಂದೂ ವರದಿಯಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿತಿನ್ ಭಾಯಿ ಪಟೇಲ್, ಇದು ತಮ್ಮ ಜನಪ್ರಿಯತೆಗೆ ಕುತ್ತು ತರುವ ಸಂಚು ಎಂದು ಹೇಳಿದ್ದಾರೆ. "ನನ್ನ ಮಗ, ಹೆಂಡತಿ ಮತ್ತು ಮಗಳು ರಜೆಯಲ್ಲಿ ಪ್ರವಾಸ ಹೊರಟಿದ್ದರು. ಅವರಿಗೆ ಆರೋಗ್ಯ ಸರಿ ಇಲ್ಲ. ಆತನ ಪತ್ನಿ ಮನೆಗೆ ಕರೆ ಮಾಡಿದರು. ನಂತರ ಪ್ರವಾಸ ಹೋಗದಿರುವಂತೆ ತೀರ್ಮಾನಿಸಲಾಯಿತು," ಎಂದು ನಿತಿನ್ ಪಟೇಲ್ ಹೇಳಿದ್ದಾರೆ.
ನಮ್ಮ ವಿರೋಧಿಗಳು ನಮ್ಮ ಜನಪ್ರಿಯತೆಗೆ ಮಸಿ ಬಳೆಯಲು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದೂ ಇದೇ ಸಂದರ್ಭದಲ್ಲಿ ಅವರು ಹೇಳಿದ್ದಾರೆ.