30ರಂದು ನಡೆಯಲಿರುವ ಮಧ್ಯರಾತ್ರಿ ಸಂಸತ್ ಅಧಿವೇಶನದ ಮಹತ್ವ
ಜಿಎಸ್ ಟಿ ಜಾರಿಗೊಳ್ಳಲಿರುವ ಹಿನ್ನೆಲೆಯಲ್ಲಿ ಜೂನ್ 30ರಂದು ಮಧ್ಯರಾತ್ರಿ ಅಧಿವೇಶನ. ಜಂಟಿ ಅಧಿವೇಶನ ಕರೆದಿರುವ ಕೇಂದ್ರ ಸರ್ಕಾರ. ಪ್ರಧಾನಿ ಮೋದಿ, ಕೇಂದ್ರದ ಸಚಿವರು, ಲೋಕಸಭೆ-ರಾಜ್ಯಸಭೆಗಳ ಸದಸ್ಯರು ಸೇರಿದಂತೆ ಸುಮಾರು 600 ಜನರು ಭಾಗಿಯಾಗುವ ನಿ
ನವದೆಹಲಿ, ಜೂನ್ 29: ಮುಂದಿನ ತಿಂಗಳ 1ರಿಂದ ದೇಶಾದ್ಯಂತ ಜಾರಿಗೊಳ್ಳಲಿರುವ ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್ ಟಿ) ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜೂನ್ 30ರ ಮಧ್ಯರಾತ್ರಿ ಕರೆದಿರುವ ವಿಶೇಷ ಅಧಿವೇಶನಕ್ಕೆ ಹಲವಾರು ಮುಖಂಡರು ಸಾಕ್ಷಿಯಾಗುವ ನಿರೀಕ್ಷೆಯಿದೆ.
ಅಧಿವೇಶನದ ವೇಳೆ, ಈಗಾಗಲೇ ಸದನದ ಸಮ್ಮತಿ ಪಡೆದಿರುವ ಜಿಎಸ್ ಟಿ ಮಸೂದೆಯನ್ನು ಔಪಚಾರಿಕವಾಗಿ ಮತ್ತೊಮ್ಮೆ ಮಂಡಿಸಿ, ಸದನದ ಅನುಮೋದನೆ ಪಡೆಯಲಾಗುವುದು.
ಜಿಎಸ್ ಟಿ ಮಾದರಿಯ ತೆರಿಗೆ ವ್ಯವಸ್ಥೆಯು ಜಾರಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಆ ಬಗ್ಗೆ ಚರ್ಚೆಗಳು, ಪರ- ವಿರೋಧಗಳು ವ್ಯಕ್ತವಾಗಿವೆ.
ಹಲವಾರು ಆರ್ಥಿಕ ಪಂಡಿತರು ಈ ಕ್ರಮವನ್ನು ಸ್ವಾಗತಿಸಿದ್ದರೂ ಜಿಎಸ್ ಟಿಗೆ ಕೆಲವರ ವಿರೋಧವೂ ವ್ಯಕ್ತವಾಗಿದೆ. ವರ್ತಕರಲ್ಲಿ ಹೊಸ ಬಗೆಯ ಆತಂಕ ಸೃಷ್ಟಿಯಾಗಿದೆ.
ಈ ಹಿನ್ನೆಲೆಯಲ್ಲಿ, ಈ ಅಧಿವೇಶನದ ಹಿನ್ನೆಲೆಯೇನು, ಅಧಿವೇಶನದಲ್ಲಿ ಯಾವ ಯಾವ ಧುರೀಣರು ಪಾಲ್ಗೊಳ್ಳುತ್ತಿದ್ದಾರೆ ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ.
ಔಪಚಾರಿಕ ಚರ್ಚೆ
ಜಿಎಸ್ ಟಿಯ ಬಗ್ಗೆ ಔಪಚಾರಿಕ ಚರ್ಚೆಗೆ ಜೂನ್ 30ರ ಮಧ್ಯರಾತ್ರಿ ಕರೆಯಲಾಗಿರುವ ಅಧಿವೇಶನವು ಜಂಟಿ ಅಧಿವೇಶನವಾಗಿರಲಿದೆ. ಅಂದರೆ, ಲೋಕಸಭೆ ಹಾಗೂ ರಾಜ್ಯ ಸಭೆಗಳ ಸದಸ್ಯರು ಈ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಹಿಂದೆ ಎರಡು ಇಂಥ ಅಧಿವೇಶನಗಳು
ಇದು ಮೂರನೇ ಮಧ್ಯರಾತ್ರಿ ಅಧಿವೇಶನ. ಈ ಹಿಂದೆ ಎರಡು ಬಾರಿ ಹೀಗೆ ಮಧ್ಯರಾತ್ರಿ ಅಧಿವೇಶನಗಳನ್ನು ಕರೆಯಲಾಗಿತ್ತು. ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಮಹತ್ವದ ಘಟ್ಟವಾದ ಕ್ವಿಟ್ ಇಂಡಿಯಾ ಚಳವಳಿಯ 50ನೇ ವರ್ಷಾಚರಣೆ ಸಂದರ್ಭದಲ್ಲಿ ಹಾಗೂ ಭಾರತ ಸ್ವತಂತ್ರಗೊಂಡ 50ನೇ ವರ್ಷಾಚರಣೆಯ ಸಂದರ್ಭದಲ್ಲಿ ಹೀಗೆ ಮಧ್ಯರಾತ್ರಿ ಸಂಸತ್ ಅಧಿವೇಶನವನ್ನು ಕರೆಯಲಾಗಿತ್ತು.
ಕೇಂದ್ರದ ಹೊಸ ವ್ಯವಸ್ಥೆ ಜಾರಿ ಬಗೆಗಿನ ಮೊದಲ ಅಧಿವೇಶನ
ಚಾರಿತ್ರಿಕ ಘಟನೆಗಳ 50 ವರ್ಷಗಳ ಮೈಲುಗಲ್ಲನ್ನು ಸ್ಮರಿಸಲು ಹೀಗೆ, ಮಧ್ಯರಾತ್ರಿ ಸಂಸತ್ ಸಭೆಯನ್ನು ಕರೆಯಲಾಗಿತ್ತಾದರೂ, ಹೀಗೆ, ಜಾರಿಗೊಳ್ಳಲಿರುವ ಕೇಂದ್ರ ಸರ್ಕಾರದ ಹೊಸ ವ್ಯವಸ್ಥೆಯೊಂದರ ಬಗ್ಗೆ ಜಂಟಿ ಅಧಿವೇಶನ ಕರೆದಿರುವುದು ಇದೇ ಮೊದಲು.
600 ಜನ ಭಾಗಿಯಾಗುವ ನಿರೀಕ್ಷೆ
ಜಂಟಿ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ಸಚಿವರು, ಲೋಕಸಭೆ, ರಾಜ್ಯ ಸಭೆಗಳ ಸದಸ್ಯರು ಸೇರಿದಂತೆ ಸುಮಾರು 600 ಮಂದಿ ಈ ಭಾಷಣ ಆಲಿಸಲಿದ್ದಾರೆ.
ಉಪರಾಷ್ಟ್ರಪತಿ, ಸ್ಪೀಕರ್ ಉಪಸ್ಥಿತಿ
ಮಾಜಿ ಪ್ರಧಾನಿಗಳು ಹಾಗೂ ಹಿರಿಯರಾದ ಮನಮೋಹನ್ ಸಿಂಗ್ ಹಾಗೂ ಎಚ್.ಡಿ. ದೇವೇಗೌಡ ಅವರು ಜಂಟಿ ಅಧಿವೇಶನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಈ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.