ಕೇಂದ್ರ ಸರ್ಕಾರದಿಂದ ಸಿಬಿಐ ದುರ್ಬಳಕೆ: ಚಿದಂಬರಂ ಗುಡುಗು
ತಮ್ಮನ್ನು ಹಾಗೂ ತಮ್ಮ ಪುತ್ರನನ್ನು ಅನವಶ್ಯಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿರುವ ಚಿದಂಬರಂ, ತಮ್ಮ ಬಾಯಿ ಮುಚ್ಚಿಸುವುದಕ್ಕೋಸ್ಕರ ಕೇಂದ್ರ ಸರ್ಕಾರ ಹೂಡಿರುವ ತಂತ್ರ ಇದು ಎಂದ ಮಾಜಿ ಹಣಕಾಸು ಸಚಿವ.
ಚೆನ್ನೈ, ಮೇ 16: ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ದಳವನ್ನು (ಸಿಬಿಐ) ದುರ್ಬಳಕೆ ಮಾಡುತ್ತಿದ್ದು, ತಮ್ಮನ್ನು ಹಾಗೂ ತಮ್ಮ ಪುತ್ರನ ವಿರುದ್ಧ ಸಮರ ಸಾರಿದೆ ಎಂದು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.
ಮಂಗಳವಾರ ಬೆಳಗ್ಗೆ ತಮ್ಮ ಹಾಗೂ ತಮ್ಮ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸೇರಿದ ನಿವಾಸಗಳು ಹಾಗೂ ಕೆಲ ಸಂಬಂಧಿಗಳ ಮನೆಗಳ ಮೇಲೆ ನಡೆದ ಸಿಬಿಐ ಹಿನ್ನೆಲೆಯಲ್ಲಿ, ಪತ್ರಿಕಾ ಪ್ರಕಟಣೆ ಹೊರಡಿಸಿರುವ ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ತಮ್ಮನ್ನು ಹಾಗೂ ತಮ್ಮ ಪುತ್ರನನ್ನು ಅನವಶ್ಯಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿರುವ ಚಿದಂಬರಂ, ತಮ್ಮ ಬಾಯಿ ಮುಚ್ಚಿಸುವುದಕ್ಕೋಸ್ಕರ ಕೇಂದ್ರ ಸರ್ಕಾರ ಹೂಡಿರುವ ತಂತ್ರ ಇದು ಎಂದು ಹೇಳಿದ್ದಾರೆ.
ಆದರೆ, ನಾನು ಬಾಯಿ ಮುಚ್ಚಿಕೊಂಡು ಸುಮ್ಮನೇ ಕೂರುವ ವ್ಯಕ್ತಿಯಲ್ಲ. ನಾನು ಖಂಡಿತವಾಗಿಯೂ ಕೇಂದ್ರದ ವಿರುದ್ಧ ಮಾತನಾಡುತ್ತೇನೆ ಎಂದು ಅವರು ಗುಡುಗಿದ್ದಾರೆ.
ಇನ್ನು, ಕಾರ್ತಿಕ್ ಚಿದಂಬರಂ ಅವರಿಗೆ ಸೇರಿದ ಕಂಪನಿಗೆ ನಿಯಮ ಬಾಹಿರವಾಗಿ ವಿದೇಶಿ ಬಂಡವಾಳ ಉತ್ತೇಜನಾ ಮಂಡಳಿಯಿಂದ (ಎಫ್ಐಪಿಬಿ) ನಿರಕ್ಷೇಪಣ ಪತ್ರ ದೊರೆತಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ಎಫ್ಐಪಿಬಿ ವತಿಯಿಂದ ಕಾರ್ತಿಕ್ ಅವರ ಕಂಪನಿಯ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಮೇಲೆಯೇ ನಿರಪೇಕ್ಷಣಾ ಪತ್ರ ನೀಡಲಾಗಿದೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಸಾಮಾನ್ಯವಾಗಿ ಎಫ್ಐಪಿಬಿಯು ಅನೇಕ ಕಂಪನಿಗಳ ದಾಖಲೆಗಳನ್ನು ಪರಿಶೀಲಿಸಿಯೇ ನಿರಪೇಕ್ಷಣಾ ಪತ್ರ ನೀಡುತ್ತದೆ. ನನ್ನ ಮಗನ ಕಂಪನಿಗೆ ಬಂದಿರುವ ಅನುಮತಿಯನ್ನು ನೀವು ಪ್ರಶ್ನಿಸುವುದಾರೆ, ಎಫ್ಐಪಿಬಿ ನೀಡಿರುವ ಎಲ್ಲಾ ಅನುಮತಿಗಳನ್ನು ಪರಿಶೀಲಿಸಬೇಕು'' ಎಂದು ಪ್ರತಿ ಸವಾಲು ಹಾಕಿದ್ದಾರೆ.
ಅಕ್ರಮ ನಡೆದಿದೆ ಎನ್ನುವುದಾದರೆ ಕೇಂದ್ರ ಸರ್ಕಾರ, ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಬೇಕೇ ಹೊರತು, ನಮ್ಮ ಮನೆಗಳನ್ನೇಕೆ ರೈಡ್ ಮಾಡಬೇಕು ಎಂದು ಗುಟುರು ಹಾಕಿದ್ದಾರೆ.