ಹೊಟೇಲುಗಳಲ್ಲಿ ವ್ಯರ್ಥವಾಗುವ ಆಹಾರಕ್ಕೆ ಸರಕಾರದ ಮೂಗುದಾರ
ರೆಸ್ಟೋರೆಂಟ್ ಗಳಲ್ಲಿ ಆಹಾರ ವ್ಯರ್ಥ ಮಾಡುವುದನ್ನು ತಡೆಗಟ್ಟಲು ಕೇಂದ್ರ ಸರಕಾರ ಮುಂದಾಗಿದೆ. ಇದಕ್ಕಾಗಿ ಹೊಟೇಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ನೀಡುವ ಆಹಾರದ ಪ್ರಮಾಣವನ್ನೂ ಸರಕಾರ ನಿರ್ಧರಿಸುವ ಸಾಧ್ಯತೆ ಇದೆ.
ನವದೆಹಲಿ, ಏಪ್ರಿಲ್ 11: ರೆಸ್ಟೋರೆಂಟ್ ಗಳಲ್ಲಿ ಆಹಾರ ವ್ಯರ್ಥ ಮಾಡುವುದನ್ನು ಕೇಂದ್ರ ಸರಕಾರ ಗಂಭೀರವಾಗಿ ತೆಗೆದುಕೊಂಡಿದೆ. ಈ ಬಾರಿಯ ಮನ್ ಕೀ ಬಾತ್ ನಲ್ಲಿ ನರೇಂದ್ರ ಮೋದಿ ಹೊಟೇಲುಗಳಲ್ಲಿ ಹಾಳಾಗುವ ಆಹಾರದ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದು ಸರಕಾರಕ್ಕೆ ಇಂಥಹದ್ದೊಂದು ತೀರ್ಮಾನ ತೆಗೆದುಕೊಳ್ಳುವ ಸೂಚನೆ ನೀಡಿದ್ದಾರೆ.
ತಾರಾ ಹೋಟೇಲುಗಳು ಮತ್ತು ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರಿಗೆ ನೀಡುವ ಆಹಾರದ ಪ್ರಮಾಣವನ್ನು ಸರಕಾರ ನಿರ್ಧರಿಸುವ ಸಾಧ್ಯತೆ ಇದೆ. ಇದಕ್ಕಾಗಿ ಒಬ್ಬ ವ್ಯಕ್ತಿಗೆ ಇಂತಿಷ್ಟು ಆಹಾರ ನೀಡಬೇಕು ಎಂಬ ನಿಯಮ ರೂಪಿಸಲು ಸಾಧ್ಯವೇ ಎಂದು ಸರಕಾರ ಚರ್ಚೆ ನಡೆಸುತ್ತಿದೆ. ಇದಕ್ಕಾಗಿ ಸದ್ಯದಲ್ಲೇ ರೆಸ್ಟೋರೆಂಟ್ ಮತ್ತು ಹೊಟೇಲ್ ಮಾಲಿಕರ ಸಭೆ ಕರೆಯಲಿದೆ.[ಬಿಸಿಲ ಹೊಡೆತದಿಂದ ತಪ್ಪಿಸಿಕೊಳ್ಳುವುದು ಹೇಗೆ?]
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಮ್ ವಿಲಾಸ್ ಪಾಸ್ವಾನ್, ಓರ್ವ ವ್ಯಕ್ತಿಗೆ ಎರಡೇ ಸೀಗಡಿ ತಿನ್ನಲು ಸಾಧ್ಯವಿದೆ ಎಂದಾದರೆ 6 ನೀಡುವುದು ಯಾಕೆ? ಎರಡೇ ಇಡ್ಲಿ ಒಬ್ಬರಿಗೆ ತಿನ್ನಲು ಸಾಧ್ಯವಿರುವುದಾದರೆ ನಾಲ್ಕು ನೀಡುವುದು ಏಕೆ? ಇದು ಆಹಾರವನ್ನು ಹಾಳು ಮಾಡುವುದರ ಜತೆಗೆ ತಿನ್ನದ ಆಹಾರಕ್ಕೆ ಹಣ ಕೊಟ್ಟು ಹಣ ವ್ಯರ್ಥ ಮಾಡಿದಂತಲ್ಲವೇ?" ಎಂದು ಪ್ರಶ್ನಿಸಿದ್ದಾರೆ.[ದೂರು ನೀಡಲು ಹೋದರೆ ಪಾಠ ಹೇಳಿದ ಪೊಲೀಸರು!]
ಸದ್ಯದಲ್ಲೇ ಹೊಟೇಲುಗಳಲ್ಲಿ ನೀಡಬೇಕಾದ ಆಹಾರದ ಪ್ರಮಾಣದ ಬಗ್ಗೆ ಸೂಚನೆಗಳನ್ನು ಸಚಿವಾಲಯದ ಕಡೆಯಿಂದ ನೀಡಲಾಗುವುದು ಎಂದು ಪಾಸ್ವಾನ್ ಹೇಳಿದ್ದಾರೆ.
ಕೇವಲ ಸ್ಟ್ಯಾಂಡರ್ಡ್ ಹೊಟೇಲುಗಳಲ್ಲಿ ನೀಡುವ ಆಹಾರದ ಮೇಲೆ ಮಾತ್ರ ನಿಯಂತ್ರಣ ಹೇರಲು ಸರಕಾರ ಮುಂದಾಗಿದೆ. ಸಮಾನ್ಯ ಹೊಟೇಲುಗಳಿಗೆ ಇದರಿಂದ ಯಾವುದೇ ಸಮಸ್ಯೆಯೂ ಇಲ್ಲ.