ಗೋವಾದ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕ್ಕರ್ ನೇಮಕ
ಪಣಜಿ, ಮಾರ್ಚ್ 13: ಭಾನುವಾರ ಸಂಜೆ ನಡೆದ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಗೋವಾ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ.
ಗೋವಾ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಪರಿಕ್ಕರ್ ಅವರಿಗೆ ವಿಶ್ವಾಸ ಮತ ಸಾಬೀತು ಪಡಿಸಲು ರಾಜ್ಯಪಾಲರಾದ ಮೃದುಲಾ ಸಿನ್ಹಾ ಹದಿನಇದು ದಿನಗಳ ಕಾಲಾವಕಾಶ ನೀಡಿದ್ದು, ಈ ಬಗ್ಗೆ ರಾಜಭವನದಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿದೆ.
ಪರಿಕ್ಕರ್ ತಮಗೆ ಅಗತ್ಯ ಸಂಖ್ಯೆಯ ಶಾಸಕರ ಬೆಂಬಲ ಇರುವುದಾಗಿ ಸಾಕ್ಷ್ಯ ಒದಗಿಸಿದ್ದಾರೆ. 13 ಬಿಜೆಪಿ ಶಾಸಕರು, ಮೂವರು ಎಂಜಿಪಿ ಶಾಸಕರು, ಮೂವರು ಗೋವಾ ಫಾರ್ವಡ್ ಶಾಸಕರು ಮತ್ತು ಇಬ್ಬರು ಪಕ್ಷೇತರ ಶಾಸಕರ ಬೆಂಬಲ ಸೇರಿ, 40 ಸಂಖ್ಯಾಬಲದ ಗೋವಾ ವಿಧಾನಸಭೆಯಲ್ಲಿ ಬಹುಮತಕ್ಕೆ ಅಗತ್ಯವಾದ 21 ಶಾಸಕರ ಬೆಂಬಲ ಪಡೆದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.[ಅಂತಿಮ ಫಲಿತಾಂಶ: ಗೋವಾ ಅತಂತ್ರ, ಮುಂದೇನಾಗಬಹುದು?]
ಗೋವಾ ವಿಧಾನಸಭೆಯಲ್ಲಿ ಇನ್ನು ಹದಿನೈದು ದಿನದೊಳಗೆ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲರು ಮನೋಹರ್ ಪರಿಕ್ಕರ್ ಅವರಿಗೆ ಸೂಚಿಸಿದ್ದಾರೆ. ಪರಿಕ್ಕರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ರಕ್ಷಣಾ ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 13 ಸ್ಥಾನಗಳಲ್ಲಷ್ಟೇ ಜಯ ಗಳಿಸಿತ್ತು. ಭಾನುವಾರ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ 21 ಶಾಸಕರ ಬೆಂಬಲ ತಮ್ಮ ಪಕ್ಷಕ್ಕಿದೆ ಎಂದು ಬಿಜೆಪಿ ರಾಜ್ಯಪಾಲರಿಗೆ ಸರಕಾರ ರಚಿಸಲು ಅವಕಾಶ ಕೇಳಿದೆ.
17 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ ಗೆ ಇದು ದೊಡ್ಡ ಆಘಾತ ನೀಡಿದೆ. ಭಾನುವಾರ ರಾತ್ರಿ ಪರಿಕ್ಕರ್ ಜತೆಗೆ ಅವರ ಬೆಂಬಲದ 21 ಶಾಸಕರೂ ರಾಜಭವನಕ್ಕೆ ತೆರಳಿದ್ದಾರೆ. ಇತರ 8 ಶಾಸಕರು ಪರಿಕ್ಕರ್ ನೇತೃತ್ವದ ಸರಕಾರವನ್ನು ಬೆಂಬಲಿಸುವ ಪತ್ರವನ್ನು ಪ್ರತ್ಯೇಕವಾಗಿ ನೀಡಿದ್ದಾರೆ.[ಜ್ಯೋತಿಷ್ಯ: ಗುರುಬಲದಲ್ಲಿ ಇನ್ನಷ್ಟು ಎತ್ತರಕ್ಕೆ ಏರಿದ ನರೇಂದ್ರ ಮೋದಿ]
ಇದೇ ವೇಳೆ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸೇರಿದಂತೆ ಕಾಂಗ್ರೆಸ್ ಶಾಸಕರು ಹೋಟೆಲ್ ವೊಂದರಲ್ಲಿ ಸೇರಿ ಕಾಂಗ್ರೆಸ್ ನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಲ್ಲಿ ತೊಡಗಿದ್ದರು.
ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಗೋವಾದ ಬಿಜೆಪಿ ನಾಯಕರು ಮನೋಹರ್ ಪರಿಕ್ಕರ್ ಅವರನ್ನು ಕೇಂದ್ರ ಸೇವೆಯಿಂದ ಮುಕ್ತಿಗೊಳಿಸಿ, ಗೋವಾಕ್ಕೆ ವಾಪಸ್ ಕಳಿಸುವಂತೆ ಮನವಿ ಮಾಡಿದ್ದರು.
ಇದೇ ವೇಳೆ ಎನ್ ಸಿಪಿ ಶಾಸಕ ಬೆನಲಿಂ ಚರ್ಚಿಲ್ ಬೆಂಬಲ ಕೂಡ ಬಿಜೆಪಿಗೆ ಇದ್ದು, ಅವರ ಬೆಂಬಲದ ಪತ್ರವನ್ನು ರಾಜ್ಯಪಾಲರಿಗೆ ಶೀಘ್ರದಲ್ಲಿ ಸಲ್ಲಿಸುವುದಾಗಿ ತಿಳಿಸಲಾಗಿದೆ.