ಗೋರಖ್ ಪುರ ಆಸ್ಪತ್ರೆಯಲ್ಲಿ ಮತ್ತೆ 9ಮಕ್ಕಳ ಸಾವು
ಗೋರಖ್ ಪುರ, ಅ. 19 : ಉತ್ತರ ಪ್ರದೇಶದ ಗೋರಖ್ ಪುರದಲ್ಲಿನ ಆಸ್ಪತ್ರೆಯಲ್ಲಿ ಕಳೆದ 24ಗಂಟೆಯಲ್ಲಿ 9 ಮಕ್ಕಳು ಸಾವನ್ನಪ್ಪಿದ್ದಾರೆ. ಆಗಸ್ಟ್ 10ರ ನಂತರ ಸಾವನ್ನಪ್ಪಿರುವ ಮಕ್ಕಳ ಸಂಖ್ಯೆ 105ಕ್ಕೆ ಏರಿಕೆಯಾಗಿದೆ.
ಬಿಆರ್ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಡಾ.ಪಿ.ಕೆ.ಸಿಂಗ್ ಒಂಭತ್ತು ಮಕ್ಕಳು ಸಾವನ್ನಪ್ಪಿರುವುದನ್ನು ಮಾಧ್ಯಮಗಳಿಗೆ ಖಚಿತ ಪಡಿಸಿದ್ದಾರೆ.
ಗೋರಖ್ ಪುರ ದುರಂತ: ತುರ್ತು ಸಭೆ ಕರದ ಯೋಗಿ ಆದಿತ್ಯನಾಥ್
ಸಾವನ್ನಪ್ಪಿರುವ ಒಂಭತ್ತು ಮಕ್ಕಳ ಪೈಕಿ 5 ಮಕ್ಕಳು ಹರಿಗೆ ನಂತರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದವು. ಸಾಮಾನ್ಯ ವಾರ್ಡ್ನಲ್ಲಿನ ಎರಡು ಮಕ್ಕಳ ಸಾವನ್ನಪ್ಪಿವೆ. ಆಗ ತಾನೇ ಜನಿಸಿದ ಮಕ್ಕಳನ್ನು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಕರೆತರಲಾಗಿತ್ತು.
48 ಗಂಟೆಗಳಲ್ಲಿ ಯೋಗಿ ಆದಿತ್ಯನಾಥ್ ತವರಲ್ಲಿ 30 ಮಕ್ಕಳ ದಾರುಣ ಬಲಿ
'ಈಗಾಗಲೇ ಮಕ್ಕಳ ಸಾವಿನ ಬಗ್ಗೆ ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶ ನೀಡಿದ್ದು, ಮೃತಪಟ್ಟ ಮಕ್ಕಳ ಮಾಹಿತಿಯನ್ನು ಸರ್ಕಾರಕ್ಕೆ ಕಳಿಸಲಾಗಿದೆ' ಎಂದು ಡಾ.ಪಿ.ಕೆ.ಸಿಂಗ್ ಹೇಳಿದ್ದಾರೆ.
ಪ್ರಾಥಮಿಕ ವರದಿ ಸಲ್ಲಿಕೆ : ಗೋರಖ್ ಪುರದ ಆಸ್ಪತ್ರೆಯಲ್ಲಿನ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಶುಕ್ರವಾರ ಸಲ್ಲಿಕೆ ಮಾಡಲಾಗಿದೆ. ಮಕ್ಕಳ ಸಾವಿಗೆ ಹಿರಿಯ ವೈದ್ಯರ ನಿರ್ಲಕ್ಷ್ಯ ಮತ್ತು ಸಮನ್ವಯದ ಕೊರತೆ ಕಾರಣ ಎಂದು ಹೇಳಲಾಗಿದೆ.
ಸಿಬಿಐ ತನಿಖೆಗೆ ಆಗ್ರಹ : ಗೋರಖ್ ಪುರ ಆಸ್ಪತ್ರೆಯಲ್ಲಿನ ಮಕ್ಕಳ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.
'ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಸಿಬಿಐ ಜೊತೆ ಉತ್ತಮವಾದ ನಂಟಿದೆ. ಸಿಬಿಐ ಉತ್ತರ ಪ್ರದೇಶದ ವಿವಿಧ ಪ್ರಕರಣಗಳ ತನಿಖೆ ನಡೆಸುತ್ತಿದೆ. ಆದ್ದರಿಂದ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು' ಎಂದು ಆಗ್ರಹಿಸಿದ್ದಾರೆ.