ಕೇರಳ: ಬೀದಿನಾಯಿ ಕೊಂದರೆ ಚಿನ್ನದ ನಾಣ್ಯ ಬಹುಮಾನ
ತಿರುವನಂತಪುರಂ, ಅಕ್ಟೋಬರ್, 30: ಅತಿ ಹೆಚ್ಚು ಬೀದಿ ನಾಯಿಗಳನ್ನು ಕೊಲ್ಲುವ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಚಿನ್ನದ ನಾಣ್ಯಗಳನ್ನು ಬಹುಮಾನ ನೀಡುವುದಾಗಿ ಕೇರಳದ ಪ್ರಮುಖ ಕಾಲೇಜುಗಳಲ್ಲಿ ಒಂದಾದ ಸಂತ ಥಾಮಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಘೋಷಿಸಿದೆ.
ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ನಾಯಿ ದಾಳಿಗೆ ತುತ್ತಾಗಿ ನಾಲ್ಕು ಮಂದಿ ಸಾವನ್ನಪ್ಪಿದ್ದು, 175 ಮಕ್ಕಳೂ ಸೇರಿದಂತೆ 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಂಘ ಈ ಬಹುಮಾನ ಘೋಷಿಸಿದೆ.
ಡಿ.10 ರ ವರೆಗೆ ಗಡುವು ನೀಡಿ ಅತಿ ಹೆಚ್ಚು ಬೀದಿ ನಾಯಿಗಳನ್ನು ಕೊಲ್ಲಲಾಗುವ ಪ್ರದೇಶದ ಪಂಚಾಯಿತಿ ಮುಖ್ಯಸ್ಥರಿಗೆ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಹೇಳಿರುವ ಹಳೆ ವಿದ್ಯಾರ್ಥಿಗಳ ಸಂಘ, ಇತ್ತೀಚೆಗಷ್ಟೇ ಹಿಂಸಾತ್ಮಕ ನಾಯಿಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ಸಬ್ಸಿಡಿ ದರದಲ್ಲಿ ಏರ್ ಗನ್ ಗಳನ್ನು ಸಹ ನೀಡುವುದಾಗಿ ಘೋಷಿಸಿತ್ತು.
ಅಷ್ಟೇ ಅಲ್ಲದೆ ಜನರಿಗೆ ಉಪಟಳ ನೀಡುತ್ತಿರುವ ಬೀದಿ ನಾಯಿಗಳನ್ನು ಕೊಲ್ಲುವವರಿಗೆ ನಗದು ಬಹುಮಾನ ನೀಡುವುದಾಗಿಯೂ ಸಂತ ಥಾಮಸ್ ಕಾಲೇಜ್ ನ ಹಳೆಯ ವಿದ್ಯಾರ್ಥಿಗಳ ಸಂಘಟನೆ ಹೇಳಿತ್ತು.
ವಿದ್ಯಾರ್ಥಿ ಸಂಘದಲ್ಲಿ ಒಟ್ಟು 1200 ಸದಸ್ಯರು ಇದ್ದು, ಸದಸ್ಯರೇ ಹಣ ಸಂಗ್ರಹಿಸಿ ಚಿನ್ನದ ನಾಣ್ಯ ನೀಡುವುದಾಗಿ ಸಂಘ ತಿಳಿಸಿದೆ. ಇದಷ್ಟೇ ಅಲ್ಲದೇ ಕೇರಳದ ಕೆಲವು ಕೈಗಾರಿಕೆಗಳೂ ಸಹ ನಗದು ಬಹುಮಾನ ಘೋಷಿಸಿದ್ದವು.
ಈ ವರ್ಷ ಒಟ್ಟು 53ಸಾವಿರ ಮಂದಿ ನಾಯಿ ಕಡಿತಕ್ಕೆ ತುತ್ತಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ.