ವಾಹನಕ್ಕೆ ಹಣ ಹೊಂದಿಸಲಾಗದೆ ಹೆಂಡತಿ ಶವ ಹೊತ್ತು 10 ಕಿ.ಮೀ. ನಡೆದ
ಭುವನೇಶ್ವರ್, ಆಗಸ್ಟ್ 25: ದೇಶದ ಬಡ ಜಿಲ್ಲೆಗಳ ಪೈಕಿ ಒಂದಾದ ಒಡಿಶಾದ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶವವನ್ನು ಸಾಗಿಸಲು ವಾಹನ ವ್ಯವಸ್ಥೆ ಮಾಡುವುದಕ್ಕೆ ಹಣ ಇಲ್ಲದೆ ಹೆಗಲ ಮೇಲಿಟ್ಟುಕೊಂಡು 10 ಕಿ.ಮೀ. ನಡೆದಿದ್ದಾನೆ. ಜತೆಗೆ ಆತನ ಮಗಳೂ ನಡೆದಿದ್ದಾಳೆ.
ಸರ್ಕಾರಿ ಆಸ್ಪತ್ರೆಯಿಂದ 60 ಕಿ.ಮೀ. ದೂರವಿರುವ ಮನೆಗೆ ಹೆಂಡತಿಯ ಶವ ಒಯ್ಯಲು ವಾಹನ ವ್ಯವಸ್ಥೆ ಸಹ ಮಾಡಲು ಆಗದ ಆತನ ಅಸಹಾಯಕತೆಯ ಮಾತುಗಳು ಕೇಳುತ್ತಿದ್ದರೆ ಹೃದಯ ಹಿಂಡಿದಂತಾಗುತ್ತದೆ.
ದಾನಾ ಮಝಿ ಎಂಬುವನ 42 ವರ್ಷದ ಹೆಂಡತಿ ಮಂಗಳವಾರ ರಾತ್ರಿ ಕಾಳಹಂಡಿ ಆಸ್ಪತ್ರೆಯಲ್ಲಿ ಕ್ಷಯರೋಗದಿಂದ ಮೃತಪಟ್ಟಿದ್ದಳು. 'ನಾನು ಬಡವ. ನನ್ನಿಂದ ವಾಹನ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಆಗಲ್ಲ ಎಂದು ಆಸ್ಪತ್ರೆಯವರನ್ನು ಕೇಳಿಕೊಂಡೆ. ಆದರೆ ನನಗೆ ಸಹಾಯ ಮಾಡುವುದಿಕ್ಕೆ ಆಗಲ್ಲ' ಎಂದುಬಿಟ್ಟರು ಎಂದು ಮಝಿ ತಿಳಿಸಿದ್ದಾನೆ.['ಬಡತನ, ಹಸಿವಿಗೆ ಪರಿಹಾರ ಯಾವ ಪಠ್ಯದಲ್ಲೂ ಇಲ್ಲ']
ಮರಗಟ್ಟಿದ ದೇಹವನ್ನು ಬಟ್ಟೆಯೊಂದರಲ್ಲಿ ಕಟ್ಟಿ, ಆತನ ಮಗಳ ಜತೆಗೆ ತನ್ನ ಗ್ರಾಮಕ್ಕೆ ನಡೆದುಕೊಂಡು ಹೊರಟಿದ್ದ. ಈತನನ್ನು ನೋಡಿದ ಮಾಧ್ಯಮದವರೊಬ್ಬರು ಹಿರಿಯ ಅಧಿಕಾರಿಗಳೊಬ್ಬರಿಗೆ ಕರೆ ಮಾಡಿ, ಆ ನಂತರ ಮಝಿ ಗ್ರಾಮಕ್ಕೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಸಿದ್ದಾರೆ. 'ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜತೆಗೆ ಮಾತಾಡಿದ್ದೇನೆ. ಪರಿಶೀಲಿಸಿ, ಅಗತ್ಯ ಕ್ರಮ ತೆಗೆದುಕೊಳ್ಳೋದಿಕ್ಕೆ ಹೇಳಿದ್ದೀನಿ' ಅಂತ ಸಂಸದ ಕಾಳಿಕೇಶ್ ಸಿಂಗ್ ದಿಯೋ ಟ್ವೀಟ್ ಮಾಡಿದ್ದಾರೆ.[ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಧೂಳು ಹಿಡಿದ ಎಕ್ಸ್ ರೇ ಯಂತ್ರ]
ಸರ್ಕಾರವೇ ಈ ರಾಜ್ಯದಲ್ಲಿ ಸರ್ಕಾರ 'ಮಹಾಪ್ರಯಾಣ' ಎಂಬ ಯೋಜನೆಯನ್ನು ಫೆಬ್ರುವರಿಯಲ್ಲಿ ಜಾರಿಗೆ ತಂದಿದೆ. ಅದರಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಶವವನ್ನು ಉಚಿತವಾಗಿ ವಾಹನದಲ್ಲಿ ತೆಗೆದುಕೊಂಡು ಹೋಗಬಹುದು. ಈ ಯೋಜನೆಯಡಿ 37 ಸರ್ಕಾರಿ ಆಸ್ಪತ್ರೆಯಲ್ಲಿ ಶವ ಸಾಗಿಸಲು ವಾಹನ ನೀಡಲಾಗುತ್ತಿದೆ.
ಕಾಳಹಂಡಿ ಡಿಸಿ ಬೃಂದಾ ಮಾತನಾಡಿ, ನಮಗೆ ಘಟನೆ ಬಗ್ಗೆ ತಿಳಿದ ತಕ್ಷಣ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ವಿ. ಜತೆಗೆ ಅಂತ್ಯ ಸಂಸ್ಕಾರಕ್ಕೂ ಅ ಕುಟುಂಬಕ್ಕೆ ಸಹಾಯ ಮಾಡ್ತಿದ್ದೀವಿ' ಎಂದು ತಿಳಿಸಿದರು.