ಸಂಸತ್ ಕಲಾಪದ ವೇಳೆ ಕುಸಿದು ಬಿದ್ದಿದ್ದ ಮಾಜಿ ಕೇಂದ್ರ ಸಚಿವ ಇ. ಅಹ್ಮದ್ ನಿಧನ
ಮಂಗಳವಾರ, ಬಜೆಟ್ ಪೂರ್ವ ಉಭಯ ಸದನಗಳ ಕಲಾಪದ ವೇಳೆ ಕುಸಿದುಬಿದ್ದಿದ್ದ ಇ. ಅಹ್ಮದ್. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅವರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದರು.
ನವದೆಹಲಿ, ಫೆಬ್ರವರಿ 1: ಮಂಗಳವಾರ (ಜನವರಿ 31) ಬೆಳಗ್ಗೆ ಸಂಸತ್ ಕಲಾಪದ ವೇಳೆ ಹೃದಯಾಘಾತದಿಂದಾಗಿ ಕುಸಿದುಬಿದ್ದು ಅಸ್ವಸ್ಥರಾಗಿದ್ದ ಕೇರಳದ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಇ. ಅಹ್ಮದ್ ಅವರು ನಿಧನರಾಗಿದ್ದಾರೆ.
ಅವರಿಗೆ, ರಾಮ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಲೇ ಅವರು, ಮಧ್ಯರಾತ್ರಿ 2:15ರ ಹೊತ್ತಿಗೆ ನಿಧನರಾಗಿದ್ದಾರೆ.
2017ರ ವಿತ್ತೀಯ ಬಜೆಟ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪ್ರಸಕ್ತ ವರ್ಷದ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲು ವಿಶೇಷ ಅಧಿವೇಶನ ಕರೆದಿತ್ತು. ಈ ಹಿನ್ನೆಲೆಯಲ್ಲಿ ಕಲಾಪಕ್ಕೆ ಹಾಜರಾಗಿದ್ದರು.
ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಉಭಯ ಸದನಗಳನ್ನುದ್ದೇಶಿಸಿ ಬಜೆಟ್ ಪೂರ್ವಭಾವಿ ಭಾಷಣ ಮಾಡುತ್ತಿರುವಾಗಲೇ ಅವರು ಕುಸಿದುಬಿದ್ದು ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಮಧ್ಯಾಹ್ನ 2:15ರ ಹೊತ್ತಿಗೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೇಂದ್ರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅಹ್ಮದ್ ಅವರು, ವಿದೇಶಾಂಗ ಇಲಾಖೆಯ ರಾಜ್ಯ ಸಚಿವರಾಗಿದ್ದರು. ಕೇರಳದ ಇಂಡಿಯನ್ ಲೀಗ್ ಮುಸ್ಲಿಂ ಲೀಗ್ (ಐಯುಎಂಎಲ್) ಪಕ್ಷದಿಂದ ಅವರು ಸಂಸದರಾಗಿ ಆಯ್ಕೆಯಾಗಿದ್ದರು.
ಬಜೆಟ್ ಮಂಡನೆ ಮುಂದಕ್ಕೆ?: ಕೇಂದ್ರದ ಮಾಜಿ ಸಚಿವ ಇ.ಅಹ್ಮದ್ ಅವರ ನಿಧನದಿಂದಾಗಿ ಕೇಂದ್ರ ಸರ್ಕಾರವು ಫೆ. 1ರಂದು ಮಂಡಿಸಬೇಕಿರುವ ಈ ವರ್ಷದ ವಿತ್ತೀಯ ಬಜೆಟ್ ಮುಂದೂಡಲ್ಪಡಲಿದೆಯೇ ಎಂಬ ಗುಮಾನಿ ಎದ್ದಿದೆ. ಸಂಪ್ರದಾಯದಂತೆ, ಸಂಸದರೊಬ್ಬರು ನಿಧನರಾದಾಗ ಅವರ ಗೌರವಾರ್ಥವಾಗಿ ಸಂಸತ್ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗುತ್ತದೆ. ಇದೀಗ, ಫೆ. 1ರಂದು ಬಜೆಟ್ ಮಂಡನೆಯಾಗುವ ದಿನವೇ ಅಹ್ಮದ್ ಅವರ ಸಾವಿನ ಸುದ್ದಿ ಬಂದಿರುವುದರಿಂದ ಕೇಂದ್ರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರ ಮೇಲೆ ಇಂದಿನ ಬಜೆಟ್ ಮಂಡನೆ ನಿರ್ಧಾರವಾಗಲಿದೆ.