ರಕ್ಷಣಾ ಸಚಿವರು ಮನವಿ ಕೇಳಲಿಲ್ಲ: ನಿವೃತ್ತ ಯೋಧ ಆತ್ಮಹತ್ಯೆ
ಹರಿಯಾಣ, ನವೆಂಬರ್ 2: ಏಕ ಶ್ರೇಣಿ, ಏಕ ಪಿಂಚಣಿ (ಒಆರ್ಒಪಿ) ಬಗ್ಗೆ ತನ್ನ ಮನವಿ ಸಲ್ಲಿಸಲು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ನಿವೃತ್ತ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸುಬೇದಾರ್ ರಾಮ್ ಕಿಶನ್ ಗ್ರೇವಲ್ ಆತ್ಮಹತ್ಯೆ ಮಾಡಿಕೊಂಡವರು.
ಕಳೆದ ವರ್ಷ ದೆಹಲಿಯ ಜಂತರ್ ಮಂತರ್ ನಲ್ಲಿ ಏಕ ಶ್ರೇಣಿ, ಏಕ ಪಿಂಚಣಿ ಜಾರಿಗಾಗಿ ನಡೆದ ಪ್ರತಿಭಟನೆಯಲ್ಲಿ ರಾಮ್ ಕಿಶನ್ ಭಾಗವಹಿಸಿದ್ದರು. ಹರಿಯಾಣದ ಭಿವಾನಿ ಜಿಲ್ಲೆಯ ಬುಮ್ಲಾ ಗ್ರಾಮದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 'ಅವರು ನಮಗೆ ದೂರವಾಣಿ ಕರೆ ಮಾಡಿದ್ದರು. ಸರಕಾರವು ನಮ್ಮ ಬೇಡಿಕೆ ಈಡೇರಿಸುವುದರಲ್ಲಿ ವಿಫಲವಾಗಿದೆ ಎಂದು ಅಲವತ್ತುಕೊಂಡರು' ಎಂದು ಮೃತರ ಮಗ ತಿಳಿಸಿದ್ದಾರೆ.[ಮೋದಿ ಸರಕಾರದಿಂದ ಯೋಧರಿಗೆ ಭರ್ಜರಿ ದೀಪಾವಳಿ ಬೋನಸ್]
69 ವರ್ಷದ ರಾಮ್ ಕಿಶನ್ ವಿಷ ಸೇವಿಸಿದ್ದಾರೆ. ಅವರು ಮತ್ತು ಇತರ ನಾಲ್ವರು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಆಗಬೇಕು ಅಂತಿದ್ದರು. ಏಕ ಶ್ರೇಣಿ, ಏಕ ಪಿಂಚಣಿ ಬಗ್ಗೆ ತಮ್ಮ ಮನವಿಯನ್ನು ಸಲ್ಲಿಸುವವರಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.