ಅಕಾಲಿಕ ಮಳೆಗೆ ಕಣಿವೆ ರಾಜ್ಯ ತತ್ತರ, ಯೋಧರೇ ರಕ್ಷಿಸಿ!
ಶ್ರೀನಗರ, ಮಾ.30 : ಜಮ್ಮು ಮತ್ತು ಕಾಶ್ಮೀರದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ತಲೆ ದೋರಿದೆ. ಝೇಲಂ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇನ್ನೂ 6 ದಿನಗಳ ಕಾಲ ಭಾರಿ ಮಳೆ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ಇನ್ನಷ್ಟು ಆತಂಕಕಾರಿಯಾಗಿದೆ.ಶ್ರೀನಗರದಲ್ಲಿ ಎರಡು ಮನೆ ಕುಸಿದು ಹತ್ತಾರು ಮಂದಿ ಸಾವನ್ನಪ್ಪಿರುವ ಸುದ್ದಿ ಬಂದಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ಅಪ್ಪಳಿಸಿದ ಪ್ರವಾಹದ ಭೀತಿಯಿಂದ ಇನ್ನೂ ಜನ ಚೇತರಿಸಿಕೊಂಡಿಲ್ಲ. ಈ ನಡುವೆ ಅಕಾಲಿಕ ಮಳೆಯಿಂದ ಜನ ದಿಕ್ಕು ತೋಚದಂತೆ ರಕ್ಷಣೆಯ ನಿರೀಕ್ಷೆಯಲ್ಲಿದ್ದಾರೆ. ಪಾಕಿಸ್ತಾನ ಪರ ಜಿಂದಾಬಾದ್ ಎಂದು ಕೂಗುವ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಅವರು ಜನರ ರಕ್ಷಣೆಗೆ ಭಾರತೀಯ ಸೇನೆಯ ನೆರವು ಕೋರಲು ಇನ್ನೂ ಹಿಂದು ಮುಂದು ನೋಡುತ್ತಿದ್ದಾರೆ.
ಶ್ರೀನಗರ ಬಳಿ ಝೇಲಂ ನದಿ ನೀರಿನ ಮಟ್ಟ ಸೋಮವಾರ ಬೆಳಗ್ಗೆ ಸುಮಾರು 22.4 ಅಡಿ ಮೀರಿತ್ತು. ದಕ್ಷಿಣ ಕಾಶ್ಮೀರದ ಸಂಗಮ ಪ್ರದೇಶದಲ್ಲಿ ಭಾರಿ ಮಳೆ ಮುಂದುವರೆದಿದೆ.
ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದ್ದು, ಪರಿಹಾರ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಝೇಲಂ ನದಿ ಆರ್ಭಟ, ಜನರ ಸಂಕಷ್ಟದ ಪರಿಸ್ಥಿತಿ ಬಗ್ಗೆ ಇನ್ನಷ್ಟು ಮಾಹಿತಿ ಹಾಗೂ ಚಿತ್ರಗಳು ಇಲ್ಲಿವೆ...
ಸಚಿವ ನಖ್ವಿ ಅವರನ್ನು ಕಾಶ್ಮೀರಕ್ಕೆ ಕಳಿಸಿದ ಮೋದಿ
ಪ್ರವಾಹ ಪರಿಸ್ಥಿತಿ ಬಗ್ಗೆ ತಿಳಿದುಕೊಂಡ ಪ್ರಧಾನಿ ಮೋದಿ ಅವರು ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರನ್ನು ಶ್ರೀನಗರಕ್ಕೆ ಕಳಿಸಿ, ಪರಿಸ್ಥಿತಿ ಅವಲೋಕಿಸುವಂತೆ ಸೂಚಿಸಿದ್ದಾರೆ.
ವಾಯುಸೇನೆಯಿಂದ ನೆರವಿನ ಹಸ್ತ
ಪ್ರವಾಹ ಪೀಡಿತ ಪ್ರದೇಶಗಳಿಗೆ ಅಗತ್ಯ ವಸ್ತುಗಳು ಹಾಗೂ ಆಹಾರ ಸಾಮಾಗ್ರಿಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ(ಎನ್ ಡಿಆರ್ ಎಫ್) ಮೂಲಕ ಭಾರತೀಯ ವಾಯುಸೇನೆ ಪಡೆದುಕೊಂಡು ಭಟಿಂಡಾದಿಂದ ಶ್ರೀನಗರಕ್ಕೆ ತೆರಳಿವೆ.
ವಿಪತ್ತು ರಕ್ಷಣಾ ಪಡೆಯಿಂದ ರಕ್ಷಣಾ ಕಾರ್ಯ
ವಿಪತ್ತು ರಕ್ಷಣಾ ಪಡೆಯ ಎರಡು ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಚಿತ್ರದಲ್ಲಿ ಶ್ರೀನಗರದ ನಗರ ಪಾಲಿಕೆ ವಾಹನ ಪ್ರವಾಹ ಪೀಡಿತ ಪ್ರದೇಶಗಳತ್ತ ತೆರಳುತ್ತಿದೆ. ಚಿತ್ರ: ಪಿಟಿಐ.
ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್
ಭಾರಿ ಮಳೆ, ಭೂ ಕುಸಿತದ ಪರಿಣಾಮ ಜಮ್ಮು ಮತ್ತು ಶ್ರೀನಗರ ಹೆದ್ದಾರಿ ಉಧಂಪುರ ಬಳಿ ಸಂಪೂರ್ಣ ಬಂದ್ ಮಾಡಲಾಗಿದೆ.
|
ಕಾಶ್ಮೀರಿ ಜನರ ಬಗ್ಗೆ ಎಲ್ಲರಿಂದ ಕಳವಳ
ಕಾಶ್ಮೀರಿ ಜನರ ಬಗ್ಗೆ ಎಲ್ಲರಿಂದ ಕಳವಳ ವ್ಯಕ್ತವಾಗಿದೆ. ಸೆಲೆಬ್ರಿಟಿಗಳು ಟ್ವೀಟ್ ಮಾಡಿ ತಮ್ಮ ಕಳಕಳಿ ತೋರಿದ್ದಾರೆ.
|
ಕಲ್ಲು ಹೊಡೆದರೂ ಸಹಿಸಿಕೊಂಡು ಜನರ ರಕ್ಷಿಸಿದ ಯೋಧರು
ಅಂದು ಕಲ್ಲು ಹೊಡೆದರೂ ಸಹಿಸಿಕೊಂಡು ಜನರ ರಕ್ಷಿಸಿದ ಯೋಧರು ಮತ್ತೊಮ್ಮೆ ನೆರವಿನ ಹಸ್ತ ಚಾಚಲು ಮುಂದಾಗಿದ್ದಾರೆ.
ಮುಂದಿನ ಹವಾಮಾನ ಮುನ್ಸೂಚನೆಗೆ ಕಾಯಿರಿ
ಮುಂದಿನ 24 ಗಂಟೆಗಳಲ್ಲಿ ಕುಲ್ಗಾಮ್, ಪುಲ್ವಾಮಾ, ಬರಮುಲ್ಲಾ, ಕುಪ್ವಾರ, ಗಂಡಿಬಾಲ್ ಮತ್ತು ಕಾರ್ಗೀನ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಇದೇ ವೇಳೆ ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ.
|
ಎರಡು ಮನೆಗಳು ಪ್ರವಾಹಕ್ಕೆ ಸಿಲುಕಿದೆ
ಇದೀಗ ಬಂದ ಸುದ್ದಿ ಪ್ರಕಾರ, ಬುಡ್ಗಂ ಜಿಲ್ಲೆಯ ಛಾದೂರ ಪ್ರದೇಶದಲ್ಲಿ ಎರಡು ಮನೆಗಳು ಪ್ರವಾಹಕ್ಕೆ ಸಿಲುಕಿದ್ದು, 16 ಜನ ಜೀವಭಯದಲ್ಲಿದ್ದಾರೆ.