2014: ಗಾಸಿಪ್, ವಿವಾದ ಸುದ್ದಿಗೆ ಗ್ರಾಸವಾದ ಸೆಲೆಬ್ರಿಟಿಗಳು
ಸಿನಿಮಾ, ಸಾಹಿತ್ಯ, ಕ್ರೀಡೆ ಹೀಗೆ ವಿವಿಧ ರಂಗಳಲ್ಲಿ ಸಾಧನೆ ಮಾಡುವ ಮೂಲಕ ಸಮಾಜದಲ್ಲಿ ಸೆಲೆಬ್ರಿಟಿಗಳ ಸ್ಥಾನಕ್ಕೇರಿರುವ ವ್ಯಕ್ತಿಗಳ ಬೆನ್ನ ಹಿಂದೆಯೇ ವಿವಾದಗಳು ನೆರಳಿನಂತೆ ಹಿಂಬಾಲಿಸುತ್ತಲೇ ಇರುತ್ತವೆ. ಸರಿ ತಪ್ಪುಗಳ ಲೆಕ್ಕಾಚಾರ ಹಾಕುವಷ್ಟರಲ್ಲಿ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಎಲ್ಲರ ಬಾಯಲ್ಲಿ ಸೆಲೆಬ್ರಿಟಿಗಳ ಹೆಸರು ನಲಿದಾಡುತ್ತಿರುತ್ತದೆ.
ಈಗಂತೂ ಸಾಮಾಜಿಕ ಜಾಲ ತಾಣಗಳು ಸೆಲೆಬ್ರಿಟಿಗಳ ಜೀವನವನ್ನು ಕನ್ನಡಿಯಂತೆ ಸಾರ್ವಜನಿಕರ ಮುಂದಿಡುತ್ತಿವೆ. ಹಲವಾರು ಸೆಲೆಬ್ರಿಟಿಗಳು ಸದಾಕಾಲ ಫೇಸ್ಬುಕ್ ಅಥವಾ ಟ್ವಿಟ್ಟರ್ ಮೂಲಕ ಜನರಿಗೆ ಹತ್ತಿರವಾಗುವ ಪ್ರಯತ್ನ ನಡೆಸುತ್ತಾರೆ. ಹಲವರು ಸಾಮಾಜಿಕ ಕಳಕಳಿ ಮೆರೆಯುತ್ತಾರೆ.
ಸಿನಿಮಾ ತಾರೆಗಳು, ಕ್ರಿಕೆಟರ್ ಗಳನ್ನು ದೇವರಂತೆ ಕಾಣುವ ಈ ದೇಶದಲ್ಲಿ ಸೆಲೆಬ್ರಿಟಿಗಳು ತಪ್ಪು ಮಾಡಿದರೆ ಅದು ದೊಡ್ಡ ಪ್ರಮಾದದಂತೆ ಬಿಂಬಿಸಿ ಮಾಧ್ಯಮಗಳು ವರದಿ ಮಾಡುವುದು ಮಾಮೂಲಿ. ಬಿಟ್ಟಿ ಪ್ರಚಾರದ ಲಾಭ ಪಡೆಯುವುದು ಕೂಡಾ ಸೆಲೆಬ್ರಿಟಿಗಳಿಗೆ ಕರಗತವಾಗಿರುತ್ತದೆ. ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ ಕೆಲ ಸೆಲೆಬ್ರಿಟಿಗಳ ವಿವರ ಇಲ್ಲಿದೆ
1. ದೀಪಿಕಾ ಪಡುಕೋಣೆ
ಬೆಂಗಳೂರು ಮೂಲದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಬಂದ ಒಂದು ಎದೆಸೀಳು ಚಿತ್ರದ ಟ್ವೀಟ್ ನೋಡಿ ಕೆಂಡಾಮಂಡಲವಾಗಿಬಿಟ್ಟರು. "OMG! Deepika Padukone's cleavage show". ಎಂದು ಜನಪ್ರಿಯ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದ್ದಲ್ಲದೆ ಅದಕ್ಕೆ ಸಮರ್ಥನೆ ನೀಡಿತ್ತು. [ಎದೆ ಸೀಳುನೋಟದ ಮೇಲೆ ವಾರೆನೋಟ]
ಅದರೆ, ದೀಪಿಕಾ ಇದಕ್ಕೆ ಕಿಡಿಕಾರಿದ್ದಲ್ಲದೆ ಮಹಿಳೆಯನ್ನು ಸಾರ್ವಜನಿಕವಾಗಿ ಮಾಧ್ಯಮಗಳು ಯಾವ ರೀತಿ ಬಿಂಬಿಸಬೇಕು ಎಂಬುದರ ಬಗ್ಗೆ ಪಾಠ ಕಲಿಯುವಂತೆ ಮಾಡಿದರು. ಹಲವು ತಿಂಗಳು ಈ ಸುದ್ದಿ ಭಾರಿ ಚರ್ಚೆಯಲ್ಲಿತ್ತು. ದೀಪಿಕಾ ಚಿತ್ರಗಳು ಭರ್ಜರಿ ಯಶಸ್ಸು ಕಾಣುತ್ತಿದ್ದರಿಂದ ಈ ಎದೆಸೀಳು ಸುದ್ದಿ ಗಿಮಿಕ್ ಅಲ್ಲ ದೀಪಿಕಾ ಮುನಿಸು ಹುಸಿಯಲ್ಲ ಎಂದು ತಿಳಿದು ಜನತೆ ಕೂಡಾ ಆಕೆಗೆ ಸಾಥ್ ನೀಡಿದರು.
2. ಅಮೀರ್ ಖಾನ್
ರಾಜಕುಮಾರ್ ಹಿರಾನಿ ನಿರ್ದೇಶನದ ಅವರ ಬಹುನಿರೀಕ್ಷಿತ 'ಪಿಕೆ' ಚಿತ್ರದ ಪೋಸ್ಟರ್ ನಲ್ಲಿ ಟ್ರಾನ್ಸಿಸ್ಟರ್ ಹಿಡಿದುಕೊಂಡು ಬೆತ್ತಲೆ ನಿಂತ ಅಮೀರ್ ಖಾಣ್ ವಿವಾದದ ಕೇಂದ್ರ ಬಿಂದುವಾದರು. ಬೆತ್ತಲೆ ಫೋಟೊಗಳು ಇವತ್ತಿಗೂ ಹಾಸ್ಯಾಸ್ಪದವಾಗಿ ಬೇರೆ ಬೇರೆ ರೂಪ ಪಡೆದು ಟ್ವಿಟ್ಟರ್, ವಾಟ್ಸಪ್, ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ. [ಪಿಕೆ ನಿಷೇಧಕ್ಕೆ ಆಗ್ರಹ]
ಹೇಮಂತ್ ಪಾಟೀಲ್ ಎಂಬುವರು ಬೆತ್ತಲೆಯಾದ ಅಮೀರ್ ಖಾನ್ ವಿರುದ್ಧ ಮೊಕದ್ದಮೆ ಹೂಡಿ, ಪಿಕೆ ಚಿತ್ರ ನಿಷೇಧಕ್ಕೆ ಅರ್ಜಿ ಹಾಕಿದ್ದರು. ಆದರೆ, ಚಿತ್ರ ಬಿಡುಗಡೆಯಾಗಿ ಭರ್ಜರಿ ಹಣ ಗಳಿಸುತ್ತಿದೆ. [ಟ್ರಾನ್ಸಿಸ್ಟರ್ ಗೆ ಭಾರಿ ಬೆಲೆ]
ಬಿಡುಗಡೆ ನಂತರ ಚಿತ್ರದಲ್ಲಿ ಹಿಂದೂ ದೇವತೆಗಳು, ಸ್ವಾಮೀಜಿಗಳು, ಜ್ಯೋತಿಷಿಗಳು, ಮಹಿಳೆಯರು, ಬಾಬಾಗಳನ್ನು ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂದು ಟ್ವಿಟ್ಟರ್ ನಲ್ಲಿ PK ನಿಷೇಧಕ್ಕೆ ಆಗ್ರಹಿಸಲಾಗುತ್ತಿದೆ. [ಸುದ್ದಿ ಇಲ್ಲಿ ಓದಿ]
3. ಸಾನಿಯಾ ಮಿರ್ಜಾ
ತೆಲಂಗಾಣ ರಾಜ್ಯ ಉದಯವಾಗುತ್ತಿದ್ದಂತೆ ಹೈದರಾಬಾದಿನ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ರಾಜ್ಯದ ರಾಯಭಾರಿಯಾಗಿ ಮುಖ್ಯಮಂತ್ರಿ ಕೆ ಚಂದ್ರಶೇಖರರಾವ್ ಘೋಷಿಸಿದರು. ಇದು ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಯ್ತು.
ಸಾನಿಯಾ ಟೆನಿಸ್ ಟೂರ್ನಿಗಳಲ್ಲಿ ಭಾರತದ ಪರ ಆಡುತ್ತಿದ್ದರೂ ಆಕೆಯನ್ನು 'ಪಾಕಿಸ್ತಾನದ ಸೊಸೆ' ಎಂದು ಹೀಯಾಳಿಸಲಾಯಿತು. ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಸಾನಿಯಾ ಪರ ವಿರೋಧ ಚರ್ಚೆಗಳಾಯಿತು.
ತೆಲಂಗಾಣ ಹೋರಾಟದಲ್ಲಿ ಪಾಲ್ಗೊಳ್ಳದ ಪಾಕಿಸ್ತಾನಿಯನ್ನು ಮದುವೆಯಾಗಿರುವ ಆಕೆಗೆ ಪ್ರಾಶಸ್ತ್ಯ ಏಕೆ ಎಂದು ಬಿಜೆಪಿ ಪ್ರಶ್ನಿಸಿತು. ನಾನು ಪಾಕಿಸ್ತಾನದ ಸೊಸೆ ನಿಜ ಆದರೆ, ನಾನು ನನ್ನ ಕೊನೆಯುಸಿರಿರುವ ತನಕ ಭಾರತೀಯಳು ಎಂದು ಮಾಧ್ಯಮವೊಂದರಲ್ಲಿ ಮಾತನಾಡುತ್ತಾ ಸಾನಿಯಾ ಕಣ್ಣೀರಿಟ್ಟರು.
4. ಶ್ವೇತಾ ಬಸು
ರಾಷ್ಟ್ರಪ್ರಶಸ್ತಿ ನಟಿ ಶ್ವೇತಾ ಬಸು ಪ್ರಕರಣ ನಿಗೂಢವಾಗಿ ಉಳಿಯಿತು. ಹೈಟೆಕ್ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆರ್ಥಿಕ ಸಂಕಷ್ಟದಿಂದ ಮೈಮಾರಿಕೊಳ್ಳುವ ಮಟ್ಟಕ್ಕೆ ಈಕೆ ಇಳಿಯಬೇಕಾಯಿತು.
ಟಾಲಿವುಡ್ ಗಣ್ಯರು, ಉದ್ಯಮಿಗಳ ಹೆಸರುಗಳನ್ನು ಆಕೆ ಹೇಳಿದ್ದಾಳೆ ಎಂಬ ಸುದ್ದಿ ಬಂತು. ಅದರೆ, ಆರು ತಿಂಗಳುಗಳ ಕಾಲದ ನಂತರ ಜೈಲಿನಿಂದ ಹೊರ ಬಂದ ಶ್ವೇತಾ ನೀಡಿದ ಹೇಳಿಕೆ ಎಲ್ಲವೂ ವ್ಯತಿರಿಕ್ತವಾಗಿತ್ತು.
ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಶ್ವೇತಾ ನಾನು ಯಾರ ಹೆಸರು ಹೇಳಿಲ್ಲ, ನಾನು ವೇಶ್ಯಾವಾಟಿಕೆ ಜಾಲದಲ್ಲೇ ಇರಲಿಲ್ಲ, ನಾನು ಯಾವ ಮಾಧ್ಯಮಕ್ಕೂ ಸಂದರ್ಶನ ನೀಡಿಲ್ಲ ಎಂದು ಹೇಳುವ ಮೂಲಕ ಎಲ್ಲರ ಹುಬ್ಭೇರಿಸಿದ್ದರು.
5. ಅಂಕಿತ್ ತಿವಾರಿ
ಬಾಲಿವುಡ್ ನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ ಗಾಯಕ, ಸಂಗೀತಗಾರ ಅಂಕಿತ್ ತಿವಾರಿ ಹೆಸರು ಅತ್ಯಾಚಾರ ಪ್ರಕರಣದಲ್ಲಿ ಕೇಳಿ ಬಂದಿತು. ವರ್ಸೋವಾ ಪೊಲೀಸರು ಅಂಧೇರಿಯ ನಿವಾಸಕ್ಕೆ ಆಗಮಿಸಿ ತಿವಾರಿಯನ್ನು ಬಂಧಿಸಿ ಕರೆದೊಯ್ದಿದ್ದರು. [ಜೈಲಿನಿಂದ ಗಾಯಕ ಅಂಕಿತ್ ಹೊರಕ್ಕೆ]
ಅಂಕಿತ್ ನನ್ನ ಗೆಳೆಯ ಎಂದು ಹೇಳಿಕೊಂಡಿರುವ 28 ವರ್ಷದ ಮಹಿಳೆ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ದೂರು ನೀಡಿದ್ದಳು. ಬಾಲಿವುಡ್ ಈ ಸುದ್ದಿ ಕೇಳಿ ಬೆಚ್ಚಿತ್ತು.