5 ಕಂಪನಿಗಳಿಗೆ ಅಂತಿಮ ಮೊಳೆ ಹೊಡೆದ ಕೇಂದ್ರ ಸರಕಾರ
ನವದೆಹಲಿ, ಮಾ 12: ನಿರೀಕ್ಷೆಯಂತೆ ಸಾರ್ವಜನಿಕ ವಲಯದ ಐದು ಪ್ರಮುಖ ಕಂಪನಿಗಳನ್ನು ಮುಚ್ಚುವ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದಿದ್ದು, ಲೋಕಸಭೆಯಲ್ಲಿ ಈ ಸಂಬಂಧ ಅಧಿಕೃತ ಹೇಳಿಕೆ ನೀಡಿದೆ.
ಬೃಹತ್ ಕೈಗಾರಿಕಾ ಸಚಿವ ಅನಂತ್ ಗೀತೆ ಪ್ರಶ್ನೋತ್ತರ ವೇಳೆಯಲ್ಲಿ (11.03.2015) ಹೇಳಿಕೆ ನೀಡಿ, ಈ ಐದೂ ಸಂಸ್ಥೆಗಳ ಉದ್ಯೋಗಿಗಳಿಗೆ ಉತ್ತಮ ವಿಆರ್ಎಸ್ (Voluntery Retirement Scheme) ಸೌಲಭ್ಯದ ಪ್ಯಾಕೇಜನ್ನು ಮುಂದಿಟ್ಟಿದ್ದೇವೆ ಎಂದು ಹೇಳಿದ್ದಾರೆ.
ಮಾರ್ಚ್ 31, 2014ಕ್ಕೆ ಕೊನೆಗೊಳ್ಳುವ ಹಣಕಾಸು ವರದಿಯಂತೆ ಸುಮಾರು 65 ಸಂಸ್ಥೆಗಳು ತೀವ್ರ ನಷ್ಟದ ಪಟ್ಟಿಯಲ್ಲಿದೆ. ಈ ಸಂಸ್ಥೆಗಳು ನಷ್ಟ ಅನುಭವಿಸುತ್ತಿರುವುದಕ್ಕೆ ಪಾವತಿಸುತ್ತಿರುವ ಅಧಿಕ ಬಡ್ಡಿದರ, ಅವಶ್ಯಕತೆಗಿಂತ ಹೆಚ್ಚಿರುವ ಸಿಬ್ಬಂದಿಗಳು ಸೇರಿದಂತೆ ಹಲವಾರು ಕಾರಣಗಳಿವೆ ಎಂದು ಸಚಿವ ಅನಂತ್ ಗೀತೆ ಹೇಳಿದ್ದಾರೆ. (ಕೋಲಾ ಕಂಪನಿ ಕೈಗೆ 250 ಎಕರೆ ಭೂಮಿ)
65 ಸಂಸ್ಥೆಗಳ ಪೈಕಿ ಐದು ಸಂಸ್ಥೆಗಳನ್ನು ಮುಚ್ಚುವ ಅಧಿಕೃತ ನಿರ್ಧಾರಕ್ಕೆ ಬರಲಾಗಿದೆ. ಉಳಿದ ಸಂಸ್ಥೆಗಳನ್ನು ಪುನಶ್ಚೇತಗೊಳಿಸಬೇಕೆ ಅಥವಾ ಮುಚ್ಚಬೇಕೇ ಎನ್ನುವ ನಿರ್ಧಾರಕ್ಕೆ ಬರಲು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಅಧ್ಯಯನ ನಡೆಸಿ ಕೇಂದ್ರ ಸರಕಾರಕ್ಕೆ ವರದಿ ನೀಡುವಂತೆ ತಿಳಿಸಲಾಗಿದೆ ಎಂದು ಸಚಿವರು ಲೋಕಸಭೆಯಲ್ಲಿ ಹೇಳಿದ್ದಾರೆ.
ಎಚ್ ಎಂ ಟಿ
ಹಂತ ಹಂತವಾಗಿ ಬೆಂಗಳೂರು ಮೂಲದ ಎಚ್ ಎಂ ಟಿ (ಹಿಂದೂಸ್ಥಾನ್ ಮೆಷಿನ್ ಟೂಲ್ಸ್) ಸಂಸ್ಥೆಯನ್ನು ಮುಚ್ಚುವ ನಿರ್ಧಾರಕ್ಕೆ 2014ರಲ್ಲೇ ಬರಲಾಗಿತ್ತು. ಕೈಗಡಿಯಾರ ಘಟಕ ಮುಚ್ಚಿದ್ದರೂ, ಟ್ರ್ಯಾಕ್ಟರ್ ಘಟಕ ಚಾಲನೆಯಲ್ಲಿತ್ತು. ಈಗ ಸಂಸ್ಥೆಯ ಮೂರು ಘಟಕವನ್ನು ಮುಚ್ಚುವ ನಿರ್ಧಾರಕ್ಕೆ ಸರಕಾರ ಬಂದಿದೆ.
ಏರ್ ಇಂಡಿಯಾ
ತೀವ್ರ ನಷ್ಟದಲ್ಲಿರುವ ಏರ್ ಇಂಡಿಯಾ ಯಾನಕ್ಕೆ ತಿಲಾಂಜಲಿ ಇಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಖಾಸಗಿ ಸಂಸ್ಥೆಗಳಿಗೆ ಪೈಪೋಟಿ ನೀಡಲು ವಿಫಲವಾಗಿ, ವರ್ಷ ವರ್ಷ ಸಾವಿರಾರು ಕೋಟಿ ನಷ್ಟ ಅನುಭವಿಸುತ್ತಿರುವ ಏರ್ ಇಂಡಿಯಾ 5388, 5490, 7559 ಕೋಟಿ ರೂಪಾಯಿ ವಾರ್ಷಿಕ ನಷ್ಟ (in years 2013-14, 2012-13 and 2011-12 respectively) ಅನುಭವಿಸಿದೆ.
ಎಂ ಟಿ ಎನ್ ಎಲ್
ತೊಂಬತ್ತರ ದಶಕದಲ್ಲಿ ದೆಹಲಿ ಮತ್ತು ಮುಂಬೈ ಮಹಾನಗರದ ದೂರವಾಣಿ ಸೇವೆಯಲ್ಲಿ ಪೈಪೋಟಿಯೇ ಇಲ್ಲದಂತೇ ಮುನ್ನುಗ್ಗುತ್ತಿದ್ದ ಎಂ ಟಿ ಎನ್ ಎಲ್ ನಂತರದ ದಿನಗಳಲ್ಲಿ ಕೇಳುವವರೇ ಇಲ್ಲದಂತಾಗಿದ್ದು ದುರಂತ. ಕಳೆದ ವರ್ಷಾಂತ್ಯದಲ್ಲಿ ಸಂಸ್ಥೆ 7820 ಕೋಟಿ ರೂಪಾಯಿ ಲಾಭದಲ್ಲಿದ್ದರೂ ಅದರ ಹಿಂದಿನ ಎರಡು ವರ್ಷದಲ್ಲಿ 5321, 4109 ಕೋಟಿ ರೂಪಾಯಿ ನಷ್ಟದ ಕಾರಣಕ್ಕಾಗಿ ಕೇಂದ್ರ ಸರಕಾರ ಬಾಗಿಲು ಮುಚ್ಚುವ ಅಂತಿಮ ನಿರ್ಧಾರಕ್ಕೆ ಬಂದಿದೆ.
ಹಿಂದೂಸ್ಥಾನ್ ಶಿಪ್ ಯಾರ್ಡ್
ಈ ಸಂಸ್ಥೆ 859 , 551 , 462 ಕೋಟಿ ರೂಪಾಯಿ ಕಳೆದ ಮೂರು ವರ್ಷದಲ್ಲಿ ಅನುಭವಿಸಿದ್ದರಿಂದ ಮುಚ್ಚುವ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದಿದೆ.
ಇನ್ನೆರಡು ಕಂಪನಿಯ ಹೆಸರಿಲ್ಲ
ಎಚ್ ಎಂ ಟಿ ಮೂರು ಘಟಕದ ಹೊರತಾಗಿ ಇನ್ನೆರಡು ಸಂಸ್ಥೆಗಳ ಹೆಸರನ್ನು ಸಚಿವ ಅನಂತ್ ಗೀತೆ ಲೋಕಸಭೆಯಲ್ಲಿ ಪ್ರಕಟಿಸಲಿಲ್ಲ. (ಚಿತ್ರದಲ್ಲಿ ಸಚಿವ ಅನಂತ್ ಗೀತೆ)