ಯೋಗಿಯ ಆತ್ಮಕಥೆ: ಉ.ಪ್ರ. ನೂತನ ಸಿಎಂ ಬಗ್ಗೆ ತಿಳಿಯಬೇಕಾದ 5 ವಿಚಾರ
ಐದು ಬಾರಿ ಸಂಸತ್ ಪ್ರವೇಶಿಸಿರುವ ಯೋಗಿ ಆದಿತ್ಯನಾಥ್, ಬಿಜೆಪಿಯ ಆಶೋತ್ತರಗಳನ್ನು ಉತ್ತರ ಪ್ರದೇಶದಲ್ಲಿ ಈಡೇರಿಸಲು ಆ ಪಕ್ಷಕ್ಕಿರುವ ಪ್ರಬಲವಾದ ವ್ಯಕ್ತಿ ಎಂದೇ ಪರಿಗಣಿಸಲ್ಪಟ್ಟಿದ್ದಾರೆ.
ಲಕ್ನೋ, ಮಾರ್ಚ್ 18: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯಭೇರಿ ಬಾರಿಸಿರುವ ಬಿಜೆಪಿ ಪಕ್ಷವು ತನ್ನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಉತ್ತರ ಪ್ರದೇಶದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ ಅವರನ್ನು ಆರಿಸಲಾಗಿದೆ.
ಇದರೊಂದಿಗೆ, ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಉತ್ತರ ಪ್ರದೇಶ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಶನಿವಾರ (ಮಾರ್ಚ್ 18) ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಯೋಗಿ ಆದಿತ್ಯನಾಥ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.[ಯೋಗಿ ಆದಿತ್ಯ ನಾಥ್ ಉ.ಪ್ರ ಸಿಎಂ; ಮೌರ್ಯ, ಶರ್ಮಾ ಡಿಸಿಎಂ]
ಈ ಸಭೆಗೆ ಬಿಜೆಪಿಯ ಕೇಂದ್ರ ಕಚೇರಿಯಿಂದ ಕೇಂದ್ರ ಸಚಿವರಾದ ಎಂ. ವೆಂಕಯ್ಯ ನಾಯ್ಡು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್, ಬಿಜೆಪಿ ಉಪಾಧ್ಯಕ್ಷ ಓಂ ಮಾಥುರ್, ಉತ್ತರ ಪ್ರದೇಶ ರಾಜ್ಯದ ಬಿಜೆಪಿ ಪಕ್ಷದ ಮುಖ್ಯಸ್ಥ ಕೇಶವ್ ಪ್ರಸಾದ್ ಮೌರ್ಯ ಹಾಗೂ ಪಕ್ಷದ ಹಿರಿಯ ನಾಯಕರು ಉಪಸ್ಥಿತರಿದ್ದರು.[ಯೋಗಿ ಆದಿತ್ಯನಾಥರ ಟಾಪ್ 5 ವಿವಾದಾತ್ಮಕ ಹೇಳಿಕೆ]
ಹಾಗಾದರೆ, ಈ ನೂತನ ಸಿಎಂ ಬಗ್ಗೆ ನೀವು ತಿಳಿಯಲೇಬೇಕಾದ ಐದು ಅಂಶಗಳು ಇಲ್ಲಿವೆ.[ಹಿಂದೆ ಬಿಜೆಪಿಗೇ ಬಿಸಿ ಮುಟ್ಟಿಸಿದ್ರೂ ಪಕ್ಷಕ್ಕೆ ಯೋಗಿಯೇ ಅಚ್ಚುಮೆಚ್ಚು]
ರಜಪೂತ್ ಕುಟುಂಬಕ್ಕೆ ಸೇರಿದವರು
ಯೋಗಿ ಆದಿತ್ಯನಾಥ್ ಹುಟ್ಟಿದ್ದು ಉತ್ತರಾಖಾಂಡ್ ನ ಹಳ್ಳೆಯೊಂದರಲ್ಲಿ, 1972ರ ಜೂನ್ 5ರಂದು. ಅವರ ಮೂಲ ಹೆಸರು ಅಜಯ್ ಸಿಂಗ್ ಬಿಶ್ತ್. ಇವರು ರಜಪೂತ್ ಕುಟುಂಬಕ್ಕೆ ಸೇರಿದವರು. ಅವರ ಮೂಲ ಹೆಸರು ಅಜಯ್ ಸಿಂಗ್ ಬಿಶ್ತ್. ಉತ್ತರಾಖಾಂಡ್ ನಲ್ಲಿರುವ ಶ್ರೀನಗರದಲ್ಲಿರುವ (ಗರ್ವಾಲ್) ಹೇಮಾವತಿ ನಂದನ ಬಹುಗುಣ ಗರ್ವಾಲ್ ವಿಶ್ವವಿದ್ಯಾಲಯದಿಂದ ಅವರು ಬಿಎಸ್ ಸಿ ಪದವಿ ಪಡೆದಿದ್ದಾರೆ.
ಹಿಂದುತ್ವ ಪ್ರತಿಪಾದಕರು
2002ರಲ್ಲಿ ಯೋಗಿ ಆದಿತ್ಯನಾಥ ಅವರು, ಸಾಂಸ್ಕೃತಿಕ- ಸಾಮಾಜಿಕ ಸೇವೆಯ ಪರಿಕಲ್ಪನೆಯಡಿಯಲ್ಲಿ ಹಿಂದೂ ಯುವ ವಾಹಿನಿ (ಎಚ್ ವೈ ವಿ) ಎಂಬ ಸಂಘಟನೆಯೊಂದನ್ನು ಹುಟ್ಟುಹಾಕಿದ್ದರು. ಅದರ ಕಾರ್ಯಕರ್ತರು ಗೋ ರಕ್ಷಣೆ, ಲವ್ ಜಿಹಾದ್ ವಿರುದ್ಧ ಹೋರಾಡಿದ್ದರು. ಈಗ, ಹಿಂದೂ ಯುವ ವಾಹಿನಿಯು ಗೋರಖ್ ಪುರ, ಮವೂ, ಡಯೋರಿಯಾ, ಖುಷಿ ನಗರ್, ಮಹಾರಾಜ್ ಗಂಜ್, ಬಸ್ತಿ, ಸಂತ್ ಕಬೀರ್ ನಗರ ಹಾಗೂ ಸಿದ್ದಾರ್ಥ ನಗರಗಳಲ್ಲಿ ತನ್ನ ಶಾಖೆಗಳನ್ನು ತೆರೆದು, ಸಕ್ರಿಯವಾಗಿದೆ.
ಸತತ ಐದು ಸಂಸತ್ ಚುನಾವಣೆಯಲ್ಲಿ ಜಯ
ತಮ್ಮ 26ನೇ ವಯಸ್ಸಿಗೇ ಸಂಸತ್ ಪ್ರವೇಶಿಸಿದ ಹೆಗ್ಗಳಿಕೆ ಇವರದ್ದು. 1998ರಲ್ಲಿ ನಡೆದಿದ್ದ 12ನೇ ಲೋಕಸಭಾ ಚುನಾವಣೆಯಲ್ಲಿ ಗೋರಖ್ ಪುರ ಕ್ಷೇತ್ರದಿಂದ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದ ಅವರು, ಮೊದಲ ಬಾರಿಗೆ ಗೆದ್ದು ಸಂಸದರಾಗಿದ್ದರು. ಆನಂತರ, 1999, 2004, 2009 ಹಾಗೂ 2014ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಸತತ ನಾಲ್ಕು ಬಾರಿಗೆ ಗೋರಖ್ ಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಮಹಾಂತ ಆದಿತ್ಯನಾಥರೆಂದೂ ಪ್ರಸಿದ್ಧರು
ಯೋಗಿ ಆದಿತ್ಯನಾಥ ಅವರು, ಗೋರಖ್ ಪುರದ ಪ್ರತಿಷ್ಠಿತ ಗುರು ಗೋರಖ್ ನಾಥ್ ದೇಗುಲದ ಮಹಾಂತರೂ ಆಗಿದ್ದಾರೆ. ಅವರಿಗೂ ಹಿಂದೆ ಮಹಾಂತ ಆವೈದ್ಯನಾಥ ಎಂಬುವರು ಆ ದೇಗುಲದ ಮಹಾಂತರಾಗಿದ್ದರು. ಅವರೇ ಆದಿತ್ಯನಾಥ ಅವರ ಅಧ್ಯಾತ್ಮಿಕ ಗುರು. 2014ರ ಸೆಪ್ಟಂಬರ್ 12ರಂದು ಆವೈದ್ಯನಾಥ ಅವರು ನಿಧನರಾದ ನಂತರ, ಆದಿತ್ಯನಾಥ ಅವರನ್ನು ದೇಗುಲದ ಮಹಾಂತರನ್ನಾಗಿ ಘೋಷಿಸಲಾಯಿತು.
ಹಿಂದುತ್ವದ ಪ್ರಬಲ ಪ್ರತಿಪಾದಕ
ಸದಾ ಹಿಂದುತ್ವವನ್ನೇ ಪ್ರತಿಪಾದಿಸುತ್ತಾ ಬಂದಿರುವ ಅವರು, ಹಲವಾರು ಬಾರಿ ವಿವಾದಗಳಿಗೆ ಕಾರಣವಾಗಿದ್ದೂ ಉಂಟು. ಕಳೆದ ವರ್ಷ ಅಸಹಿಷ್ಣುತೆ ಬಗ್ಗೆ ಬಾಲಿವುಡ್ ನಟ ಶಾರೂಖ್ ಖಾನ್ ಮಾತನಾಡಿದ್ದಾಗ ಅವರನ್ನು ಮುಂಬೈ ದಾಳಿಯ ರೂವಾರಿ ಹಫೀಸ್ ಸಯ್ಯದ್ ಗೆ ಹೋಲಿಸಿ ಬಯ್ದಿದ್ದರು ಯೋಗಿ ಆದಿತ್ಯನಾಥ್. ಈವರೆಗಿನ ತಮ್ಮ ರಾಜಕೀಯ ವೃತ್ತಿಜೀವನದಲ್ಲಿ ಇಂಥ ಹಲವಾರು ವಿವಾದಗಳನ್ನು ಎದುರಿಸುತ್ತಲೇ ಬೆಳೆದಿದ್ದಾರೆ ಅವರು. ಇದೀಗ, ಅವರನ್ನು ಬಿಜೆಪಿಯ ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಿರುವುದರಿಂದ ಉತ್ತರ ಪ್ರದೇಶದಲ್ಲಿ ಬಿಜೆಪಿ ಆಶಯದಂತೆ ಹಿಂದುತ್ವ ಅಜೆಂಡಾವನ್ನು ನೆರವೇರಿಸಲು ಹೆಚ್ಚಿನ ಅನುಕೂಲವಾಗಲಿದೆ ಎಂದು ರಾಜಕೀಯ ತಜ್ಞರುು ವಿಶ್ಲೇಷಿಸಿದ್ದಾರೆ.