6 ಕೋಟಿ ಜನಧನ್ ಖಾತೆ ಮೇಲೆ ಗುಪ್ತಚರ ಇಲಾಖೆ ಹದ್ದಿನಕಣ್ಣು!
ಆರು ಕೋಟಿ ಖಾತೆಗಳನ್ನು ಆರ್ಥಿಕ ಗುಪ್ತಚರ ವಿಭಾಗ ಗಮನಿಸುತ್ತದೆ. ಒಂದು ಸಲ ವರದಿ ಸಿದ್ಧವಾದ ನಂತರ ಆದಾಯ ತೆರಿಗೆ ಇಲಾಖೆಯ ಜೊತೆಗೆ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.
ಬೆಂಗಳೂರು, ನವೆಂಬರ್ 24: ಅನುಮಾನ ಮೂಡುವಂಥ ವ್ಯವಹಾರಗಳು ನಡೆದಿರುವ ಜನಧನ್ ಖಾತೆಗಳ ಬಗ್ಗೆ ತನಿಖೆ ನಡೆಸಲು ಗುಪ್ತಚರ ದಳ ನಿರ್ಧರಿಸಿದೆ. ಈ ಕಾರ್ಯಾಚರಣೆ ಆರ್ಥಿಕ ಗುಪ್ತಚರ ವಿಭಾಗಕ್ಕೆ ವಹಿಸಲಾಗಿದೆ. ನೋಟು ರದ್ದು ನಂತರ ಜನಧನ್ ಖಾತೆಯಲ್ಲಿ ಅನುಮಾನ ಮೂಡಿಸುವಂಥ ನಗದು ವ್ಯವಹಾರಗಳು ನಡೆದಿದ್ದರೆ ಅಂಥವುಗಳನ್ನು ಪರಿಶೀಲಿಸಲಾಗುತ್ತದೆ.
ಆರು ಕೋಟಿ ಖಾತೆಗಳನ್ನು ಆರ್ಥಿಕ ಗುಪ್ತಚರ ವಿಭಾಗ ಗಮನಿಸುತ್ತದೆ. ಒಂದು ಸಲ ವರದಿ ಸಿದ್ಧವಾದ ನಂತರ ಆದಾಯ ತೆರಿಗೆ ಇಲಾಖೆಯ ಜೊತೆಗೆ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ. ಒಂದು ವೇಳೆ ತಪ್ಪಿತಸ್ಥರು ಅಂತ ಕಂಡುಬಂದಲ್ಲಿ ಅಂತಹವರ ವಿರುದ್ಧ ಬೇನಾಮಿ ವ್ಯವಹಾರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುತ್ತದೆ.[ಜನ್ ಧನ್ ಅಕೌಂಟಿಗೆ ಬಿತ್ತು ಕೋಟಿ ಕೋಟಿ, ರಾಜ್ಯಕ್ಕೆ 2ನೇ ಸ್ಥಾನ!]
ಜನಧನ್ ಖಾತೆಗಳ ವ್ಯವಹಾರದಲ್ಲಿ ತೀವ್ರ ಹೆಚ್ಚಳವಾಗಿದ್ದು, ಈ ಖಾತೆಗಳಲ್ಲಿ ಇಪ್ಪತ್ತೊಂದು ಸಾವಿರ ಕೋಟಿ ರುಪಾಯಿ ಜಮೆಯಾಗಿದೆ. ಪಶ್ಚಿಮ ಬಂಗಾಲ ಹಾಗೂ ಕರ್ನಾಟಕದಲ್ಲಿ ಅತಿ ಹೆಚ್ಚಿನ ಮೊತ್ತ ಜಮೆಯಾಗಿದೆ. ತನಿಖೆಯ ಭಾಗವಾಗಿ ಆರ್ಥಿಕ ಗುಪ್ತಚರ ವಿಭಾಗವು ಆದಾಯ ತೆರಿಗೆ ಇಲಾಖೆಯ ನೆರವು ಕೋರಿದೆ.[ನರೇಂದ್ರ ಮೋದಿ ಸಮೀಕ್ಷೆ: ನೋಟು ರದ್ದು ಬೆಂಬಲಿಸಿದ ಶೇ 93ರಷ್ಟು ಜನ!]
ಇದೇ ವೇಳೆ ಬ್ಯಾಂಕ್ ನೌಕರರ ವ್ಯವಹಾರದ ಮಾಹಿತಿ ಕೂಡ ಕೇಳಲಾಗಿದೆ. ಆರ್ಥಿಕ ಗುಪ್ತಚರ ವಿಭಾಗದ ಅಧಿಕಾರಿ ಒನ್ ಇಂಡಿಯಾಗೆ ನೀಡಿದ ಮಾಹಿತಿ ಪ್ರಕಾರ, ಎಲ್ಲ ಖಾತೆಗಳ ಮೇಲೂ ನಿಗಾ ಇಡಲಾಗಿದೆ. ಹಲವು ಅನುಮಾನಾಸ್ಪದ ವ್ಯವಹಾರಗಳು ಗಮನಕ್ಕೆ ಬಂದಿವೆ. ಒಂದು ಬಾರಿ ಸ್ಪಷ್ಟ ಚಿತ್ರಣ ಸಿಕ್ಕ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.