'ಜೈ ಶ್ರೀರಾಮ್' ಎಂದ ಸಚಿವನ ವಿರುದ್ಧ ಫತ್ವಾ
ಪಾಟ್ನ, ಜುಲೈ 31: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಪುಟಕ್ಕೆ ಸೇರಿರುವ ನೂತನ ಸಚಿವರೊಬ್ಬರು 'ಜೈ ಶ್ರೀರಾಮ್' ಎಂದು ಹೇಳಿದ್ದಕ್ಕೆ ಅವರ ವಿರುದ್ಧ ಫತ್ವಾ ಹೊರಡಿಸಲಾಗಿದೆ.
ಸಚಿವ ಖುರ್ಷಿದ್ ಅವರ ವಿರುದ್ಧ ಇಸ್ಲಾಂ ಧಾರ್ಮಿಕ ಮುಖಂಡರು ಫತ್ವಾ ಹೊರಡಿಸಿದ್ದು, ಸಚಿವರ ಮದುವೆಗೂ ಸಂಚಕಾರ ಬರಲಿದೆ ಎಂದು ಎಚ್ಚರಿಸಲಾಗಿದೆ.
ಶುಕ್ರವಾರದಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅಸೆಂಬ್ಲಿಯಲ್ಲಿ ವಿಶ್ವಾಸಮತ ಗೆದ್ದ ಬಳಿಕ, ಬಿಹಾರದ ಸಚಿವ ಖುರ್ಷಿದ್ ಅವರು, ಅಸೆಂಬ್ಲಿ ಹೊರಗೆ ನಿಂತು 'ಜೈ ಶ್ರೀರಾಮ್' ಎಂದು ಕೂಗಿ ಹರ್ಷ ವ್ಯಕ್ತಪಡಿಸಿದ್ದರು.
ಖುರ್ಷಿಕ್ ಅವರ ನಡವಳಿಕೆಯಿಂದ ಗರಂ ಆಗಿರುವ ಮುಸ್ಲಿಂ ಸಂಘಟನೆಯೊಂದು ಫತ್ವಾ ಹೊರಡಿಸಿದೆ. ಬಿಹಾರ ಹಾಗೂ ಜಾರ್ಖಂಡ್ ನಲ್ಲಿ ಸಕ್ರಿಯವಾಗಿರುವ ಇಮ್ರಾತ್ ಶಾರಿಯಾರ್ ನ ಮುಫ್ತಿ ಸೊಹೈಲ್ ಕ್ವಾಸ್ಮಿ ಎಂಬ ಸಾಮಾಜಿಕ -ಧಾರ್ಮಿಕ ಸಂಘಟನೆಯೊಂದು ಈ ಕ್ರಮ ಕೈಗೊಂಡಿದೆ.
ಫತ್ವಾದಂಥ ಬೆದರಿಕೆಗೆ ನಾನು ಹೆದರುವುದಿಲ್ಲ. ಆದರೆ, ಸಿಎಂ ನಿತೀಶ್ ಅವರ ಸಲಹೆಯಂತೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಸಚಿವ ಖುರ್ಷಿದ್ ಅವರು ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತಾ ಹೇಳಿದ್ದಾರೆ. ನನ್ನ ನಡವಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮೆ ಇರಲಿ ಎಂದು ಖುರ್ಷಿದ್ ಕೇಳಿಕೊಂಡಿದ್ದಾರೆ.
ಹಿಂದೂಗಳ ದೇವತೆ ರಾಮನ ಬಗ್ಗೆ ಘೋಷಣೆ ಕೂಗಿರುವ ಖುರ್ಷಿದ್ ಅಹ್ಮದ್ ಅವರ ಮದುವೆಯನ್ನು ರದ್ದುಗೊಳಿಸಲಾಗುವುದು ಹಾಗೂ ಅವರು ಮತ್ತೊಮ್ಮೆ ನಿಖಾ ಮಾಡಿಸಿಕೊಳ್ಳಬೇಕು ಎಂದು ಫತ್ವಾದಲ್ಲಿ ಹೇಳಲಾಗಿತ್ತು.