ಐವರು ನ್ಯಾಯಮೂರ್ತಿಗಳ ಕೈಯಲ್ಲಿ ಮೂರು ತಲಾಖ್ ಹಣೆಬರಹ
ನವದೆಹಲಿ, ಮೇ 11 : ಮುಸ್ಲಿಂ ಗಂಡಂದಿರು ಮೂರು ಬಾರಿ ತಲಾಖ್ ಹೇಳಿ ಹೆಂಡತಿಗೆ ವಿಚ್ಛೇದನ ನೀಡುವುದು ಕಾನೂನಾತ್ಮಕವಾಗಿದೆಯೋ ಇಲ್ಲವೋ ಎಂಬುದನ್ನು ಸುಪ್ರೀಂ ಕೋರ್ಟಿನ ಐವರು ನ್ಯಾಯಮೂರ್ತಿಗಳು ನಿರ್ಧರಿಸಲಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹರ್ ನೇತೃತ್ವದ ನ್ಯಾಯಪೀಠದಲ್ಲಿ ಇರುವ ಇತರ ನ್ಯಾಯಮೂರ್ತಿಗಳು ಕುರಿಯನ್ ಜೋಸೆಫ್, ಆರ್ ಎಫ್ ನಾರಿಮನ್, ಯುಯು ಲಲಿತ್ ಮತ್ತು ಅಬ್ದುಲ್ ನಜೀರ್.[ತಲಾಖ್ ಹೇಳಿ 3 ತಿಂಗಳು ವಾಪಸ್ ಪಡೆಯದಿದ್ದರೆ 'ವಿಚ್ಛೇದನ'ವೇ? ಸುಪ್ರೀಂ ಪ್ರಶ್ನೆ]
ಸುಪ್ರೀಂ ಕೋರ್ಟಿನ ಈ ನ್ಯಾಯಮೂರ್ತಿಗಳು ಒಂದೊಂದು ಸಮುದಾಯಕ್ಕೆ ಸೇರಿದವರಾದರೂ ಅವರು ಯಾವುದೇ ಸಮುದಾಯಕ್ಕೆ ಸೇರಿದವರಲ್ಲ. ಯಾವುದೇ ಜಾತಿ, ಧರ್ಮದ ಹಂಗಿಲ್ಲದೆ ನಿಷ್ಪಕ್ಷಪಾತವಾಗಿ ನ್ಯಾಯ ಒದಗಿಸುವವರು.
ಮುಸ್ಲಿಂ ಸಮುದಾಯದಲ್ಲಿ ಶತಮಾನಗಳಿಂದ ಚಾಲ್ತಿಯಲ್ಲಿರುವ, ಕಾನೂನು ಬಾಹಿರವಾಗಿರುವ ಈ ಹೀನ ಪದ್ಧತಿಯನ್ನು ಕಿತ್ತೊಗೆಯಬೇಕೆಂದು ಮುಸ್ಲಿಂ ಮಹಿಳೆಯರೇ 7 ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಮಹಿಳೆಯರಲ್ಲಿ ಕೆಲವರು ಫೇಸ್ ಬುಕ್ ಮತ್ತು ಟ್ವಿಟ್ಟರಲ್ಲಿ ವಿಚ್ಛೇದನಕ್ಕೊಳಗಾಗಿದ್ದಾರೆ.[ವಾರಾಣಸಿಯಲ್ಲಿ ಮುಸ್ಲಿಂ ಮಹಿಳೆಯರು ಹನುಮಾನ್ ಚಾಲಿಸಾ ಓದಿದ್ದೇಕೆ?]
ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ, ತಕ್ಕಂತೆ ಕಾನೂನು ತಿದ್ದುಪಡಿಯನ್ನು ಸಂಸದರು ತರಬೇಕಾಗುತ್ತದೆ. ತಲಾಖ್ ಮುಸ್ಲಿಂ ಧರ್ಮಕ್ಕೆ ಮೂಲಭೂತವಾಗಿದೆಯೆ ಎಂಬ ವಿಷಯದ ಬಗ್ಗೆ ಎರಡೂ ಬದಿಗಿನ ವಾದಗಳನ್ನು ಆಲಿಸಿದ ನಂತರ ನ್ಯಾಯಮೂರ್ತಿಗಳು ತೀರ್ಪು ನೀಡಲಿದ್ದಾರೆ.
1937ರಿಂದ ಮುಸ್ಲಿಂ ವೈಯಕ್ತಿಕ ಕಾನೂನು ಮಾತ್ರ ಮುಸ್ಲಿಂ ಸಮುದಾಯಕ್ಕೆ ಅನ್ವಯವಾಗುತ್ತದೆ. ಮೂರು ಬಾರಿ ತಲಾಖ್ ನೀಡುವುದು ಮೂಲಭೂತ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಎನ್ಡಿಎ ವಾದ ಮಂಡಿಸುತ್ತಲೇ ಇದೆ.