ಮಾತು ಉಳಿಸಿಕೊಳ್ಳಲು ಉ.ಪ್ರ. ಬಿಜೆಪಿ ಸರಕಾರಕ್ಕೆ ಬೇಕು 27 ಸಾವಿರ ಕೋಟಿ
ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲೇ ಹೇಳಲಾಗಿತ್ತು. ಈಗ ಆ ಮಾತು ಉಳಿಸಿಕೊಳ್ಳುವುದಕ್ಕೆ ರಾಜ್ಯ ಸರಕಾರದ ಮೇಲೆ 27 ಸಾವಿರ ಕೋಟಿ ರುಪಾಯಿ ಹೊರೆ ಬೀಳಲಿದೆ
ಲಖನೌ, ಮಾರ್ಚ್ 20: ಚುನಾವಣೆ ವೇಳೆ ಬಿಜೆಪಿ ಮಾತು ಕೊಟ್ಟಂತೆ ಉತ್ತರಪ್ರದೇಶ ರೈತರ ಸಾಲ ಮನ್ನಾ ಮಾಡಬೇಕು ಅಂದರೆ ಬ್ಯಾಂಕ್ ಗಳು 27,420 ಕೋಟಿ ಮನ್ನಾ ಮಾಡಬೇಕಾಗುತ್ತದೆ. ರಾಜ್ಯಕ್ಕೆ ಆರ್ಥಿಕ ಹೊರೆ ಬೀಳಲಿದೆ ಎಂದು ವರದಿಯೊಂದು ಎಚ್ಚರಿಸಿದೆ.
ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಚುನಾವಣೆ ಪ್ರಣಾಳಿಕೆಯಲ್ಲೇ ಹೇಳಿತ್ತು. ಬಿಜೆಪಿ ಮತ್ತದರ ಮಿತ್ರಪಕ್ಷಗಳು 403 ಸಂಖ್ಯಾಬಲದ ಉತ್ತರಪ್ರದೇಶದಲ್ಲಿ 325 ಸ್ಥಾನಗಳಲ್ಲಿ ಜಯ ಗಳಿಸಿವೆ. ಎಸ್ ಬಿಐ ಬಿಡುಗಡೆ ಮಾಡಿರುವ ವರದಿ ಪ್ರಕಾರ ಒಟ್ಟು 86,241.20 ಕೋಟಿ ಕೃಷಿ ಸಾಲ ಬಾಕಿ ಇದೆ.[ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿರುಗಾಳಿ ಎಬ್ಬಿಸಿದ ಮೋದಿ 9 ಹೇಳಿಕೆ]
ಸರಾಸರಿ 1.34 ಲಕ್ಷದಂತೆ ಸಣ್ಣ ಹಾಗೂ ಮಧ್ಯಮ ಪ್ರಮಾಣ ರೈತರ ಸಾಲ ಬಾಕಿ ಇದೆ. ಒಂದು ವೇಳೆ ಸಣ್ಣ ಹಾಗೂ ಮಧ್ಯಮ ಪ್ರಮಾಣದ ರೈತರ ಎಲ್ಲ ಬ್ಯಾಂಕ್ ನ ಎಲ್ಲ ಸಾಲಗಳು ಮನ್ನಾ ಮಾಡಬೇಕು ಅಂದರೆ 27,419.40 ಕೋಟಿ ರುಪಾಯಿ ಆಗುತ್ತದೆ. ಅಂದಹಾಗೆ, 2016-17ರ ಸಾಲಿನ ಪ್ರಕಾರ ಉತ್ತರಪ್ರದೇಶದ ಒಟ್ಟು ಆದಾಯ 3,40,255.24 ಕೋಟಿ ರುಪಾಯಿ.[ಉತ್ತರಪ್ರದೇಶದಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ 10 ಕಾರಣ]
ಇನ್ನು 27,419.40 ಕೋಟಿ ರುಪಾಯಿ ಕೃಷಿ ಸಾಲ ಮನ್ನಾ ಮಾಡಿದರೆ ಒಟ್ಟು ಆದಾಯದ ಶೇ 8ರಷ್ಟು ಕಳೆದುಕೊಂಡ ಹಾಗೆ ಲೆಕ್ಕ. ಇದರಿಂದ ಬರುವ ವರ್ಷದಲ್ಲಿ ರಾಜ್ಯದ ಆರ್ಥಿಕತೆ ಮೇಲೆ ಖಂಡಿತಾ ಪರಿಣಾಮ ಆಗುತ್ತದೆ ಎಂದು ವರದಿ ತಿಳಿಸಿದೆ. ಹೀಗಾದಲ್ಲಿ ಆದಾಯ ಹೆಚ್ಚಳಕ್ಕಾಗಿ ಹೊಸ ಆಲೋಚನೆ ಮಾಡಬೇಕಾಗುತ್ತದೆ.