ಮಣಿಪುರ: ಆಡಳಿತ ವಿರೋಧಿ ಅಲೆಯಲ್ಲಿ ಈಜಿ ದಡ ಮುಟ್ಟುವುದೇ ಕಾಂಗ್ರೆಸ್?
ಚುನಾವಣೋತ್ತರ ಸಮೀಕ್ಷೆಗಳನ್ನು ನೋಡಿದರೆ ಮಣಿಪುರದಲ್ಲಿ ಈ ಬಾರಿ ಯಾರು ಅಧಿಕಾರಕ್ಕೇರಲಿದ್ದಾರೆ ಎಂಬುದು ಕುತೂಹಲ ಹುಟ್ಟಿಸಿದೆ.ಕೆಲವು ಸಮೀಕ್ಷೆಗಳು ರಾಜ್ಯದಲ್ಲಿ ಕಾಂಗ್ರೆಸ್ ಭಾರೀ ಬಹುಮತದಿಂದ ಅಧಿಕಾರಕ್ಕೇರಲಿದೆ ಎಂದು ಹೇಳಿವೆ.
ಬೆಂಗಳೂರು, ಮಾರ್ಚ್ 10: ಚುನಾವಣೋತ್ತರ ಸಮೀಕ್ಷೆಗಳನ್ನು ನೋಡಿದರೆ ಮಣಿಪುರದಲ್ಲಿ ಈ ಬಾರಿ ಯಾರು ಅಧಿಕಾರಕ್ಕೇರಲಿದ್ದಾರೆ ಎಂಬುದು ಕುತೂಹಲ ಹುಟ್ಟಿಸಿದೆ. ಕೆಲವು ಸಮೀಕ್ಷೆಗಳು ರಾಜ್ಯದಲ್ಲಿ ಕಾಂಗ್ರೆಸ್ ಭಾರೀ ಬಹುಮತದಿಂದ ಅಧಿಕಾರಕ್ಕೇರಲಿದೆ ಎಂದು ಹೇಳಿದ್ದರೆ ಇನ್ನು ಕೆಲವು ಸಮೀಕ್ಷೆಗಳು ಬಿಜೆಪಿ ಗೆಲ್ಲಲಿದೆ ಎಂದು ಹೇಳಿವೆ.
ಇಂಡಿಯಾ ಟುಡೇ- ಮೈ ಆಕ್ಸಿಸ್ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ 30-36 ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಲಿದೆ. ಇದೇ ವೇಳೆ ಬಿಜೆಪಿ 16 - 22 ಸ್ಥಾನಗಳನ್ನಷ್ಟೆ ಗೆಲ್ಲಲಿದೆ. ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನಿಂದ ಆಡಳಿತ ಯಂತ್ರ ಕಿತ್ತುಕೊಳ್ಳಲು ಬಿಜೆಪಿಗೆ ಸಾಧ್ಯವಿಲ್ಲ ಎಂಬುದನ್ನು ಸಮೀಕ್ಷೆ ಹೇಳುತ್ತಿದೆ.[ಬಿಹಾರದಲ್ಲಿ ಕೂಡ ಸಮೀಕ್ಷೆ ಸುಳ್ಳಾಗಿತ್ತು : ರಾಹುಲ್ ಗಾಂಧಿ]
ಇಡೀ ಚುನಾವಣೆಯ ಪ್ರಮುಖ ಅಂಶವೆಂದರೆ ಕಾಂಗ್ರೆಸ್ ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಸಿಂಗ್ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಂತಿದ್ದು. ರಾಜ್ಯದಲ್ಲಿ 127 ದಿನಗಳಿಂದ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿ ಇಡೀ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಪರಿಸ್ಥಿತಿ ಸೃಷ್ಟಿಯಾಗಿತ್ತು. ಇದನ್ನು ತಮ್ಮ ಕಡೆಗೆ ಇಬೋಬಿ ಸಿಂಗ್ ತಿರುಗಿಸಿಕೊಂಡರು. ಕೇಂದ್ರ ಸರಕಾರ ಪರಿಸ್ಥಿತಿ ಸುಧಾರಿಸಲು ಸಹಕರಿಸುತ್ತಿಲ್ಲ ಎಂದು ಇಡೀ ರಾಜ್ಯದಲ್ಲಿ ಬಿಂಬಿಸಿದರು.
ಇನ್ನೊಂದು ಕಡೆಯಲ್ಲಿ ಟಿಕೆಟ್ ಸಿಗದೆ ಬಂಡಾಯವೆದ್ದಿದ್ದ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಗೆ ಕರೆ ತಂದರು. ಇದೂ ಕಾಂಗ್ರೆಸ್ಗೆ ಅನುಕೂಲವಾಗಿ ಪರಿಣಮಿಸಿತು ಎಂದು ರಾಜಕೀಯ ತಜ್ಞರು ವಿಶ್ಲೇಶಿಸುತ್ತಾರೆ.[ಎನ್ ಡಿ ಟಿವಿ ಬ್ರೇಕಿಂಗ್ : ಸಮೀಕ್ಷೆಗಳ ಸಮೀಕ್ಷೆಯಲ್ಲಿ ಬಿಜೆಪಿ ಮುಂದೆ]
ಬಹುಶಃ ಹೆದ್ದಾರಿ ಬಂದ್ ಆಗಿ ರಾಜ್ಯದಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ಬಿಜೆಪಿ ಬಗೆ ಹರಿಸಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಇನ್ನು ಟಿಕೆಟ್ ಹಂಚಿಕೆ ವಿಚಾರದಲ್ಲಿ ಸ್ವಲ್ಪ ಗಮನ ಹರಿಸಿದ್ದರೆ ಬಿಜೆಪಿಗೆ ಇಲ್ಲಿ ಗೆಲ್ಲುವ ಉತ್ತಮ ಅವಕಾಶಗಳಿತ್ತು. ಸದ್ಯಕ್ಕೆ ಇಲ್ಲಿ ಬಿಜೆಪಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದಂತೆ ಕಾಣಿಸುತ್ತಿದೆ.