ಕಣ್ಣುಬಿಡುವ ಮೊದಲೇ ಉಗ್ರ ಸಂಘಟನೆಯನ್ನು ಮಟಾಶ್ ಗೊಳಿಸಿದ ಎಟಿಎಸ್
ಖೊರಾಸನ್ ಉಗ್ರ ಸಂಘಟನೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಿರುವುದಾಗಿ ಎಟಿಎಸ್ ಅಧಿಕಾರಿಗಳಿಂದ ಹೇಳಿಕೆ.
ಈತ ಅಪ್ರತಿಮ ಮಾತುಗಾರ, ತಾಂತ್ರಿಕವಾಗಿ ಅಗಾಧ ಜ್ಞಾನ ಹೊಂದಿದ್ದರೂ, ತನ್ನ ಜ್ಞಾನವನ್ನು ಒರೆಗೆ ಹಚ್ಚಲು ಮಾಡುತ್ತಿದ್ದದ್ದು, ಧರ್ಮಾಂಧತೆಯ ಮತ್ತು ದೇಶ ವಿರೋಧಿ ಕೆಲಸವನ್ನು.
ಈತನ ಹೆಸರು ಗೌಸ್ ಅಹಮದ್ ಖಾನ್. ವಿಶ್ವದಲ್ಲೆಲ್ಲಾ ವಿಷಬೀಜ ಬಿತ್ತಿ, ನಾಗರಿಕ ಸಮಾಜ ತಲೆತಗ್ಗಿಸುವಂತಹ ಅಮಾನವೀಯ ಕೆಲಸ ಮಾಡುತ್ತಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆಯಿಂದ ಪ್ರಭಾವಿತನಾಗಿ ತಾನೇ ಹುಟ್ಟುಹಾಕಿದ 'ಖೊರಾಸನ್' ಉಗ್ರ ಸಂಘಟನೆಯ ಮುಖ್ಯಸ್ಥನೀತ. (ದೇಶದ್ರೋಹಿ ಮಗನ ಶವ ನಮಗೆ ಬೇಡ)
ಎರಡು ದಿನಗಳ ಹಿಂದೆ ಉತ್ತರಪ್ರದೇಶದ ಲಕ್ನೋದಲ್ಲಿ ಯದ್ವಾತದ್ವ ಗುಂಡು ಹಾರಿಸಿ, ಭದ್ರತಾ ಪಡೆಗಳಿಂದ ಸಾವನ್ನಪ್ಪಿದ್ದ ಉಗ್ರ ಸೈಫುಲ್ಲಾ ಇದೇ ಸಂಘಟನೆಯವನು. ಗೌಸ್ ಅಹಮದ್ ಖಾನಿನ ಮಾತಿಗೆ ಮರುಳಾಗಿ ಈ ಸಂಘಟನೆಗೆ ಸೇರಿದವನು ಸೈಫುಲ್ಲಾ.
ಈಗ ಸಂಘಟನೆ ಮುಖ್ಯಸ್ಥನಾದ ಗೌಸ್ ಅಹಮದ್ ನನ್ನು ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಅಧಿಕಾರಿಗಳು ರಾಯ್ ಬರೇಲಿಯಲ್ಲಿ ಹೆಡೆಮುರಿ ಕಟ್ಟಿದ್ದಾರೆ. ಇವನ ಜೊತೆ ಈತನ ಚೇಲಾನನ್ನೂ ಬಂಧಿಸಿದ್ದಾರೆ.
ಖೊರಾಸನ್ ಉಗ್ರ ಸಂಘಟನೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಿರುವುದಾಗಿ ಎಟಿಎಸ್ ಅಧಿಕಾರಿಗಳು ಹೇಳಿದ್ದಾರೆ. ಆ ಮೂಲಕ ಭಾರೀ ಗಂಡಾಂತರವನ್ನು ಅಧಿಕಾರಿಗಳು ತಪ್ಪಿಸಿದ್ದಾರೆ. ಮುಂದೆ ಓದಿ..
ವಾಯುಪಡೆಯ ನಿವೃತ್ತ ಯೋಧ
ಗೌಸ್ ಅಹಮದ್ 1993ರಲ್ಲಿ ಭಾರತೀಯ ವಾಯುಪಡೆಯ ಯೋಧನಾಗಿದ್ದು, ನಂತರ ಸೇನೆಯಿಂದ ಕಣ್ತಪ್ಪಿಸಿಕೊಂಡಿದ್ದ. ಕಟ್ಟಾ ಮತಾಂಧ ಮತ್ತು ತೀವ್ರಗಾಮಿಯಾಗಿದ್ದ ಈತ, ತನ್ನ ಗುಂಪಿನ ಸದಸ್ಯರಿಗೆಲ್ಲಾ ಶಸ್ತ್ರಾಸ್ರ ಪೂರೈಸುತ್ತಿದ್ದ.ಈತ ಉತ್ತರಪ್ರದೇಶದ ಕಾನ್ಪುರದ ಮೂಲದವನು. (ಫೋಟೋ: ಎಎನ್ಐ/ಟ್ವಿಟ್ಟರ್)
ಅಧಿಕಾರಿಗಳು ಬಂಧಿಸಿದ ಮೇಲೆ ನಿಜಾಂಶ ಬಯಲು
ದೇಶ ಕಾಯಬೇಕಾಗಿದ್ದವನು ಉಗ್ರರನ್ನು ಬೆಳೆಸುತ್ತಿದ್ದಾನೆ ಎನ್ನುವುದು ಅವನ ಕುಟುಂಬಕ್ಕೂ ತಿಳಿದಿರಲಿಲ್ಲ. ಈತ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾನೆಂದೇ ಮನೆಯಲ್ಲೆಲ್ಲಾ ನಂಬಿದ್ದರು. ಎಟಿಎಸ್ ಅಧಿಕಾರಿಗಳು ಈತನನ್ನು ಬಂಧಿಸಿದ ಮೇಲೆಯೇ ಈತನ ಬಣ್ಣ ಕುಟುಂಬದವರಿಗೆ ಬಯಲಾಗಿದ್ದು. (ಫೋಟೋ: ಟ್ವಿಟ್ಟರ್)
ಸೈಫುಲ್ಲಾ ಮಟಾಸ್
ಲಕ್ನೋದಲ್ಲಿ ಹತ್ತುಗಂಟೆಗಳ ಕಾಲ ಸತತ ಗುಂಡಿನ ಚಕಮಕಿಯ ನಂತರ ಸಾವನ್ನಪ್ಪಿದ್ದ ಸೈಫುಲ್ಲಾ, ಗೌಸ್ ಅಹಮದ್ ಅಣತಿಯಂತೆ ಗುಂಡಿನ ದಾಳಿ ನಡೆಸಿದ್ದ. ಬದುಕಿ ಉಳಿದಿದ್ದರೆ ಈತನಿಂದ ಇನ್ನಷ್ಟು ಅನಾಹುತ ಮಾಡಿಸುವ ಯೋಜನೆ ಹಾಕಿಕೊಂಡಿದ್ದ. ತೆಲಂಗಾಣ ಎಟಿಎಸ್ ಅಧಿಕಾರಿಗಳು ಎಲೆಕ್ಟ್ರಾನಿಕ್ ಸರ್ವೇಲೆನ್ಸ್ ಮೂಲಕ ಈತನ ಚಲನವಲನವನ್ನು ಪತ್ತೆಹಚ್ಚಿದ್ದರು.
ರೈಲಿನಲ್ಲಿ ಸಂಭವಿಸಿದ್ದ ಸ್ಪೋಟಕ್ಕೆ ಈತನೇ ಕಾರಣ
ಮಧ್ಯಪ್ರದೇಶದ ಭೋಪಾಲ್-ಉಜ್ಜಯಿನಿ ರೈಲಿನಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದ ಹಿಂದೆ ಖೊರಾಸನ್ ಸಂಘಟನೆಯ ಕೈವಾಡವಿದೆ. ಒಬ್ಬನನ್ನು ಹೊರತು ಪಡಿಸಿ, ಸಂಘಟನೆಯ ಎಲ್ಲರನ್ನೂ ಬಂಧಿಸಿದ್ದೇವೆಂದು ಉತ್ತರಪ್ರದೇಶದ ಪೊಲೀಸ್ ವರಿಷ್ಠ ದಲ್ಜೀತ್ ಚೌಧುರಿ ಹೇಳಿದ್ದಾರೆ.
ಖೊರಾಸನ್ ಉಗ್ರ ಸಂಘಟನೆ
ಎಟಿಎಸ್ ಅಧಿಕಾರಿಗಳ ಗುಂಡಿಗೆ ಬಲಿಯಾಗಿದ್ದ ಸೈಫುಲ್ಲಾ, ತನ್ನ ಸಾವಿನ ಕೊನೆಯ ಕ್ಷಣಗಳಲ್ಲಿ ಕಾನ್ಪುರದಲ್ಲಿನ ತನ್ನ ಸಹೋದರನ ಜತೆ ಮಾತನಾಡಿದ್ದ ಈತನ ಅಣ್ಣ ಇವನಿಗೆ ಶರಣಾಗುವಂತೆ ಮನವಿ ಮಾಡಿದ್ದ. ಅತ್ತೂ ಕರೆದು ಶರಣಾಗಬೇಕೆಂದು ಫೋನಿನಲ್ಲೇ ಹಟ ಹಿಡಿದಿದ್ದ. ಅಣ್ಣನ ಮಾತನ್ನು ಕೇಳುವ ಮನಸ್ಥಿತಿ ಸೈಫುಲ್ಲಾ ನಲ್ಲಿರಲಿಲ್ಲ. ಅಷ್ಟರ ಮಟ್ಟಿಗೆ 'ಖೊರಾಸನ್' ಸಂಘಟನೆಯ ಮುಖ್ಯಸ್ಥ ಗೌಸ್ ಅಹಮದ್ ಖಾನ್ ಇವನಲ್ಲಿ ವಿಷ ಬೀಜ ಬಿತ್ತಿದ್ದ.