ಕಪಿಲ್ ಶರ್ಮಾ ರಂಪ ಮಾಡಿದ್ರೂ ಪ್ಲೇನ್ ನೊಳಕ್ಕೆ ಬಿಟ್ಟಿದ್ರು: ಶಿವಸೇನೆ ಪ್ರಶ್ನೆ
ಲೋಕಸಭೆಯಲ್ಲೂ ಸೋಮವಾರ ರವೀಂದ್ರ ಗಾಯಕ್ವಾಡ್ ಅವರ ಚಪ್ಪಲಿಯೇಟು ಪ್ರಸಂಗ ಪ್ರಸ್ತಾಪವಾಯಿತು. ಆಗ ಮಾತನಾಡಿದ ಸೇನೆಯ ಎಂಪಿ ಆನಂದರಾವ್ ಅದ್ಸೂಲ್ ಅವರು, ಕಪಿಲ್ ಶರ್ಮಾ ಅವರ ಪ್ರಕರಣವನ್ನು ಪ್ರಸ್ತಾಪಿಸಿದರು.
ಮುಂಬೈ, ಮಾರ್ಚ್ 27: ಕಳೆದೆರಡು ವಾರಗಳ ಹಿಂದೆ, ಹಾಸ್ಯ ನಟ ಕಪಿಲ್ ಶರ್ಮಾ ಅವರು, ಕುಡಿದು ಬಂದು ವಿಮಾನ ಸಂಸ್ಥೆಯೊಂದರ ಸಿಬ್ಬಂದಿಯೊಡನೆ ರಂಪಾಟ ಮಾಡಿಕೊಂಡಿದ್ದರೂ ಅವರನ್ನು ವಿಮಾನದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡಲಾಗಿತ್ತು. ಆದರೆ, ನಮ್ಮ ಸಂಸದ (ರವೀಂದ್ರ ಗಾಯಕ್ವಾಡ್) ತಮಗಾದ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಿದಾಗ ಅವರನ್ನೇ ದೂಷಿಸುತ್ತಿರುವುದು ಯಾವ ನ್ಯಾಯ ಎಂದು ವಿಮಾನ ಸಂಸ್ಥೆಗಳಿಗೆ ಶಿವಸೇನೆ ಸಂಸದರು ಲೋಕಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ.
ಕಳೆದ ಗುರುವಾರ, ಶಿವಸೇನೆಯ ಸಂಸದ ರವೀಂದ್ರ ಗಾಯಕ್ವಾಡ್ (ಮಹಾರಾಷ್ಟ್ರದ ಒಸ್ಮಾನಾಬಾದ್ ನ ಸಂಸದ) ಅವರು, ಮಾರ್ಚ್ 23ರಂದು ಏರ್ ಇಂಡಿಯಾ ವಿಮಾನದಲ್ಲಿ ತಮ್ಮ ವಿಚಾರದಲ್ಲಿ ಶಿಷ್ಟಾಚಾರ ಪಾಲಿಸಲಿಲ್ಲವೆಂದು ನವದೆಹಲಿಯ ವಿಮಾನ ನಿಲ್ದಾಣದಲ್ಲಿ ವಿಮಾನದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ್ದರು.[ಈ ಅಶಿಕ್ಷ 'ಶಿಕ್ಷಕ'ನನ್ನು ಜನರು ಅದ್ಹೇಗೆ ಆರಿಸಿದರೋ?]
ಇದಲ್ಲದೆ, ಸಿಟ್ಟಿನ ಭರದಲ್ಲಿ ಏರ್ ಇಂಡಿಯಾ ಸಿಬ್ಬಂದಿಯೊಬ್ಬರಿಗೆ ಚಪ್ಪಲಿಯಿಂದ ಬಾರಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ಏರ್ ಇಡಿಯಾ ಹಾಗೂ ಇನ್ನಿತರ ಖಾಸಗಿ ವಿಮಾನ ಸಂಸ್ಥೆಗಳು ರವೀಂದ್ರ ಅವರನ್ನು ನಿಷೇಧಿಸಿವೆ.
ಅಲ್ಲೂ ಪ್ರತಿಧ್ವನಿ
ಈ ವಿಚಾರ ಸೋಮವಾರ ಲೋಕಸಭೆಯಲ್ಲೂ ಪ್ರಸ್ತಾಪವಾಗಿ ಭಾರೀ ಗದ್ದಲಕ್ಕೆ ಕಾರಣವಾಯಿತು. ಆಗ, ಶಿವಸೇನೆಯ ಸಂಸದರು ತಮ್ಮ ಸಹ ಸಂಸದನ ಬೆಂಬಲಕ್ಕೆ ಬಂದರು. ಆಗ ಮಾತನಾಡಿದ ಸೇನೆಯ ಎಂಪಿ ಆನಂದರಾವ್ ಅದ್ಸೂಲ್ ಅವರು, ಕಪಿಲ್ ಶರ್ಮಾ ಅವರ ಪ್ರಕರಣವನ್ನು ಪ್ರಸ್ತಾಪಿಸಿದರು.[ಚಪ್ಪಲಿಯೇಟು ಪ್ರಕರಣ: ಶಿವಸೇನಾ ಸಂಸದ ವಿರುದ್ಧ ಎಫ್ಐಆರ್]
ಎಂಪಿ ನಿಷೇಧ ಸಾಧುವೇ ಎಂಬ ಪ್ರಶ್ನೆ
''ಕುಡಿದು ಬಂದು ವಿಮಾನ ಸಂಸ್ಥೆಯೊಂದರ ಸಿಬ್ಬಂದಿ ಜತೆ ಜಗಳವಾಡಿ ರಂಪಾಟ ಮಾಡಿಕೊಂಡಿದ್ದರೂ, ಕಪಿಲ್ ಶರ್ಮಾ ಅವರನ್ನು ಯಾವುದೇ ವಿಮಾನ ಸಂಸ್ಥೆಯು ನಿರ್ಬಂಧಿಸಲಿಲ್ಲ. ಎರಡು ವಾರಗಳ ಹಿಂದೆ ಕಪಿಲ್ ಅವರು ಸಿಡ್ನಿಗೆ ಪ್ರಯಾಣಿಸುವಾಗ ಈ ಘಟನೆ ನಡೆದಿತ್ತು. ಆದರೆ, ರವೀಂದ್ರ ಗಾಯಕ್ವಾಡ್ ಅವರು ರಂಪಾಟ ಮಾಡಿದ ತಕ್ಷಣವೇ ಅವರನ್ನು ವಿಮಾನ ಸಂಸ್ಥೆಗಳು ನಿಷೇಧಿಸಿವೆ. ಒಬ್ಬ ಸಂಸದನನ್ನು ಹೀಗೆ ನಿಷೇಧಿಸಲು ಸಾಧ್ಯವೇ ?'' ಎಂದು ಅದ್ಸೂಲ್ ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ಸ್ಪಷ್ಟ ನಿರಾಕರಣೆ
ಆದರೆ, ವಿಮಾನ ಸಂಸ್ಥೆಗಳು ರವೀಂದ್ರ ಅವರನ್ನು ನಿರ್ಬಂಧಿಸಿರುವುದನ್ನು ಬೆಂಬಲಿಸಿದ ಕೇಂದ್ರದ ನಾಗರಿಕ ವಿಮಾನ ಯಾನ ಖಾತೆ ಸಚಿವ ಅಶೋಕ್ ಗಜಪತಿ ರಾಜು, ''ವಿಮಾನದೊಳಗೆ ಯಾವುದೇ ಪ್ರಯಾಣಿಕ ರಂಪಾಟ ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವುದು ನ್ಯಾಯ ಸಮ್ಮತ'' ಎಂದರು.[ಚಪ್ಪಲಿಯೇಟು ಪ್ರಕರಣ: ಸಂಸದ ರವೀಂದ್ರ ಬೆಂಬಲಕ್ಕೆ ನಿಂತ ಶಿವಸೇನೆ]
ಅಶೋಕ ಗಜಪತಿ ರಾಜು ಅಭಿಪ್ರಾಯ
''ಸಂಸದನಾಗಿರಲಿ, ಯಾರೇ ಆಗಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳಿಗೆ ಇರುತ್ತವೆ. ಕಪಿಲ್ ಶರ್ಮಾ ವಿರುದ್ಧ ಆಯಾ ಸಂಸ್ಥೆಗಳು ಕ್ರಮಗೊಳ್ಳುವುದು ಸಂಬಂಧಪಟ್ಟ ವಿಮಾನ ಸಂಸ್ಥೆಗೆ ಬಿಟ್ಟ ವಿಚಾರ. ಆದರೆ, ಸಂಸದರಾಗಿ ರವೀಂದ್ರ ಅವರು ಮಾಡಿದ್ದು ಅಕ್ಷಮ್ಯ'' ಎಂದು ವಿವರಿಸಿದರು.
ಕೇಂದ್ರದ ಸ್ಪಷ್ಟನೆ
''ಸಿಟ್ಟಿನಿಂದ ಏರ್ ಇಂಡಿಯಾ ಸಿಬ್ಬಂದಿಯನ್ನು ಚಪ್ಪಲಿಯಲ್ಲಿ ಹೊಡೆಯುವಂಥ ಹೀನಾಯ ಕೆಲಸಕ್ಕೆ ಕೈ ಹಾಕಿದ್ದಲ್ಲದೆ, ಮಾಧ್ಯಮಗಳ ಮುಂದೆ ನಿಂತು ಸಿಬ್ಬಂದಿಯನ್ನು 25 ಬಾರಿ ಚಪ್ಪಲಿಯಿಂದ ಹೊಡೆದಿದ್ದೇನೆ ಎಂದು ಘನ ಸಾಧನೆ ಮಾಡಿದಂತೆ ಬಿಂಬಿಸಿರುವುದು ಮತ್ತೊಂದು ಅಪರಾಧ'' ಎಂದು ಸಚಿವರು ಶಿವಸೇನೆಯ ತರ್ಕವನ್ನು ವಿರೋಧಿಸಿದರು.