20ಕ್ಕೂ ಮಕ್ಕಳ ಜೀವ ಹೊಸಕಿಹಾಕಿದ ಬಸ್-ಲಾರಿ ಅಪಘಾತ
ಗುರುವಾರ ಉತ್ತರಪ್ರದೇಶದಲ್ಲಿ ಹಲವಾರು ಜಿಲ್ಲೆಗಳಲ್ಲಿ ವಿಪರೀತ ಚಳಿಯಿಂದಾಗಿ ಶಾಲೆಗಳಿಗೆ ರಜಾ ಘೋಷಿಸಲಾಗಿದೆ. ಆದರೆ, ಈ ಆದೇಶವನ್ನು ಧಿಕ್ಕರಿಸಿ ಶಾಲೆಯನ್ನು ತೆರೆಯಲಾಗಿತ್ತು. ದುರ್ವಿಧಿ 24ಕ್ಕೂ ಹೆಚ್ಚು ಮಕ್ಕಳನ್ನು ಬಲಿ ತೆಗೆದುಕೊಂಡಿದೆ.
ಅಲಿಗಂಜ್ (ಉ.ಪ್ರ.), ಜನವರಿ 19 : ಉತ್ತರಪ್ರದೇಶದ ಇಟಾಹ್ ಜಿಲ್ಲೆಯ ಅಲಿಗಂಜ್ ನಗರದಲ್ಲಿ ಗುರುವಾರ ಬೆಳಿಗ್ಗೆ ಶಾಲೆ ಬಸ್ಸು ಮತ್ತು ಲಾರಿಯ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 24ಕ್ಕೂ ಹೆಚ್ಚು ಶಾಲಾ ಮಕ್ಕಳು ದುರ್ಮರಣಕ್ಕೀಡಾಗಿದ್ದಾರೆ.
ವಿಪರೀತ ಚಳಿಯಿಂದಾಗಿ ಶಾಲಾಕಾಲೇಜುಗಳನ್ನು ಗುರುವಾರ ಬಂದ್ ಮಾಡಬೇಕೆಂದು ಇಟಾಹ್ ಜಿಲ್ಲಾಡಳಿತ ಆದೇಶ ನೀಡಿದ್ದರೂ ಅಲಿಗಂಜ್ ನಲ್ಲಿರುವ ಈ ಶಾಲೆ ತೆರೆದಿತ್ತು. ಇದು ಸಾಲದೆಂಬಂತೆ ವಿಧಿ ಹೊಸ ಆಟವನ್ನೇ ಹೂಡಿತ್ತು. [ಹುಬ್ಬಳ್ಳಿ : ಖಾಸಗಿ ಬಸ್ಸಿಗೆ ಬೆಂಕಿ, ಮೂವರ ಸಜೀವ ದಹನ]
ಬಸ್ಸಿನಲ್ಲಿ ನರ್ಸರಿಯಿಂದ ಏಳನೇ ತರಗತಿಯವರೆಗಿನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಸ್ತೆಯ ಮೇಲೆ ಪಲ್ಟಿ ಹೊಡೆದು ಬಿದ್ದಿದೆ.
ಈ ಅಪಘಾತದಲ್ಲಿ ಇನ್ನೂ ಹಲವಾರು ಮಕ್ಕಳು ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಶಾಲೆಗಳಿಗೆ ಗುರುವಾರ ರಜಾ ನೀಡಲಾಗಿದ್ದರೂ ಶಾಲೆಯನ್ನು ತೆರೆದ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
Anguished by the tragic accident in UP’s Etah district. I share the pain of the bereaved families & condole passing away of young children.
— Narendra Modi (@narendramodi) January 19, 2017
ಈ ದುರ್ಘಟನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಗಾಯಾಗೊಂಡಿರುವ ಮಕ್ಕಳು ಬೇಗನೆ ಚೇತರಿಸಿಕೊಳ್ಳುವಂತಾಗಲಿ ಮತ್ತು ಅಗಲಿದ ಮಕ್ಕಳ ಪಾಲಕರೊಂದಿಗೆ ದುಃಖ ಭರಿಸುತ್ತೇನೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. [ಪೆನಕೊಂಡ: ಕಂದಕಕ್ಕೆ ಬಸ್ ಉರುಳಿ 20 ಜನರ ಸಾವು]