ಕರ್ನಾಟಕದಲ್ಲೂ ತಲ್ಲಣ ಸೃಷ್ಟಿಸಿದ ಬಿಜೆಪಿಯ ಭರ್ಜರಿ ಗೆಲುವು
ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವಿನತ್ತ ಮುನ್ನಡೆದಿದೆ. ಈ ಸಂದರ್ಭದಲ್ಲಿ ಕರ್ನಾಟಕದ ನಾಯಕರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಬೆಂಗಳೂರು, ಮಾರ್ಚ್ 11: ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವಿನತ್ತ ಮುನ್ನಡೆದಿದೆ. ಇದೇ ರೀತಿ ಉತ್ತರಾಖಂಡ್ ನಲ್ಲಿಯೂ ಬಿಜೆಪಿ ಭಾರೀ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಆದರೆ ಪಂಜಾಬಿನಲ್ಲಿ ಗೆದ್ದು ಕಾಂಗ್ರೆಸ್ ಸ್ವಲ್ಪ ಮಟ್ಟಿಗೆ ಮುಖ ಉಳಿಸಿಕೊಂಡಿದೆ.
ಈ ಸಂದರ್ಭದಲ್ಲಿ ಕರ್ನಾಟಕದ ನಾಯಕರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕರ್ನಾಟಕ ಬಿಜೆಪಿ ನಾಯಕರು ಸಂಭ್ರಮದಲ್ಲಿದ್ದರೆ, ಕಾಂಗ್ರೆಸ್ ನಾಯಕರು ಮಾತ್ರ ರಾಜ್ಯದ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ.[ಉತ್ತರಾಖಂಡ್ : ನೆಲಕಚ್ಚಿದ ಕಾಂಗ್ರೆಸ್, ಬಿಜೆಪಿ ಧೂಳಿಪಟ]
ಸಿದ್ದರಾಮಯ್ಯ
'ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವು ಕರ್ನಾಟಕದಲ್ಲಿ ನಡೆಯಲಿರುವ ಉಪಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮುಂದೆ ನಡೆಯಲಿರುವ ವಿಧಾನಸಭೆ ಚುನಾವಣೆಯ ಮೇಲೂ ಪರಿಣಾಮ ಬೀರುವುದಿಲ್ಲ,' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 'ಸಮಾಜವಾದಿ ಪಕ್ಷದ ಕೌಟುಂಬಿಕ ಕಲಹದಿಂದಾಗಿ ಸೋಲಬೇಕಾಯಿತು. ಜನ ಕೊಟ್ಟ ತೀರ್ಪು ಒಪ್ಪಿಕೊಳ್ಳಬೇಕು. ನಾವು ಪಂಜಾಬ್ ನಲ್ಲಿ ಗೆಲುವು ನಿರೀಕ್ಷಿಸಿದ್ದೆವು. ಗೋವಾದಲ್ಲೂ ನಾವು ಸರಕಾರ ಮಾಡಲಿದ್ದೇವೆ,' ಎಂದು ಹೇಳಿದ್ದಾರೆ.
ಬಿಎಸ್ ಯಡಿಯೂರಪ್ಪ
ಉತ್ತರ ಪ್ರದೇಶ ಮತ್ತು ಉತ್ತರಖಂಡದಲ್ಲಿ ಬಿಜೆಪಿ ಗೆದ್ದಿರುವುದು ನಾಳೆ ಕರ್ನಾಟಕದಲ್ಲಿಯೂ ನಡೆಯಲಿರುವ ಚುನಾವಣೆಗೆ ಹೊಸ ಶಕ್ತಿ ನೀಡಿದೆ. ಕರ್ನಾಟಕದಲ್ಲೂ ಕಾರ್ಯಕರ್ತರಲ್ಲಿ ಇದು ಹೊಸ ಉತ್ಸಾಹ ನೀಡಲಿದೆ. ಕರ್ನಾಟಕದಲ್ಲೂ ಸಿದ್ದರಾಮಯ್ಯನವರ ಭ್ರಷ್ಟ ಸರಕಾರವನ್ನು ಕಿತ್ತೊಗೆಯಬೇಕು. ಬಿಬಿಎಂಪಿಯಲ್ಲಿ ನಡೆದಿರುವ ಹಗರಣ ಮತ್ತು ಡೈರಿಯನ್ನು ತನಿಖೆಗೆ ಒಳಪಡಿಸಬೇಕು. ಕರ್ನಾಟಕ ಕಾಂಗ್ರೆಸಿಗೆ ಇದು ಎಚ್ಚರಿಕೆಯ ಘಂಟೆ,' ಎಂದು ಅವರು ಹೇಳಿದ್ದಾರೆ.[ಗೋವಾ ಬಿಜೆಪಿ ಮುಖ್ಯಮಂತ್ರಿ ಪರ್ಸೇಕರ್ ಗೆ ಭಾರೀ ಮುಖಭಂಗ]
ಶ್ರೀನಿವಾಸ್ ಪ್ರಸಾದ್
ಉತ್ತರ ಪ್ರದೇಶದಲ್ಲಿ ಚುನಾವಣೆ ಫಲಿತಾಂಶ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಬಂದಿದೆ. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದವು. ಆದರೆ ಫಲಿತಾಂಶದಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಪಡೆದಿದೆ ಎಂಬುದನ್ನು ಹುಡುಕಬೇಕಿದೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ತಲೆ ಎತ್ತದಂತಾಗಿದ್ದು, ದುರ್ಬಲವಾಗಿದೆ. ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಥಿ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ. ಉತ್ತರಪ್ರದೇಶ ಮತ್ತು ಉತ್ತರಾಖಂಡ ಫಲಿತಾಂಶ ಕರ್ನಾಟಕದ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.
ಉಪಚುನಾವಣೆಯಲ್ಲಿ ಕಾಂಗ್ರೆಸಿಗೆ ಸೋಲು
ನಂಜನಗೂಡಿನಲ್ಲಿ ಕಾಂಗ್ರೆಸ್ ನೈತಿಕವಾಗಿ ದಿವಾಳಿಯಾಗಿದೆ. ನಂಜನಗೂಡು ಮತ್ತು ಗುಂಡ್ಲುಪೇಟೆ ಕಾಂಗ್ರೆಸ್ ಭದ್ರಕೋಟೆ ಎಂದು ಹೇಳುತ್ತಿದ್ದೀರಿ. ಆದರೆ ನಿಮ್ಮ ಭದ್ರಕೋಟೆಯನ್ನು ನೀವು, ನಿಮ್ಮ ಸಚಿವ ಸಂಪುಟ ಕರೆದುಕೊಂಡು ಬಂದು ಉಳಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದರಾಮಯ್ಯಗೆ ಶ್ರೀನಿವಾಸ್ ಪ್ರಸಾದ್ ಟಾಂಗ್ ನೀಡಿದರು.[ರಾಹುಲ್ ಗಾಂಧಿ ರಕ್ಷಣೆಗೆ ಓಡಿ ಬಂದು ನಿಂತ್ರಪ್ಪೋ ದಿಗ್ವಿಜಯ್ ಸಿಂಗ್]
|
ಗಂಗೆ ಹರಿಯುವಲ್ಲೆಲ್ಲಾ ಬಿಜೆಪಿ
ಉತ್ತರ ಪ್ರದೇಶದಲ್ಲಿನ ಬಿಜೆಪಿ ಯಶಸ್ಸಿಗೆ ಕಾರಣಕರ್ತರಾದ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಸಾವಿರಾರು ಸಮರ್ಪಿತ ಕಾರ್ಯಕರ್ತರ ತಂಡಕ್ಕೆ ಹಾರ್ದಿಕ ಅಭಿನಂದನೆಗಳು ಎಂದು ಹೇಳಿರುವ ಸುರೇಶ್ ಕುಮಾರ್ 'ಗೋಮುಖದಿಂದ ವಾರಣಾಸಿ ತನಕ (ಹ್ರಿಷಿಖೇಶ್, ಹರಿದ್ವಾರ, ಪ್ರಯಾಗ್ ಮಾರ್ಗವಾಗಿ) ಗಂಗಾ ನದಿ ಹರಿಯುವಲ್ಲೆಲ್ಲಾ ಬಿಜೆಪಿ ಅಧಿಕಾರದಲ್ಲಿದೆ. ಇದೇ 'ನಮಾಮಿ ಗಂಗಾ'" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
'ಬಿಜೆಪಿ ಅಲೆ ಇದೆಯೆಂಬುದು ಭ್ರಮೆ’
ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, 'ದೇಶದಲ್ಲಿ ಕಾಂಗ್ರೆಸ್ ಪಕ್ಷ ಈಗಲೂ ಬಲಿಷ್ಠವಾಗಿಯೇ ಇದೆ. ಪಂಜಾಬ್ ಗೋವಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಯಾರಿಂದಲೂ ಸಾಧ್ಯವಿಲ್ಲ.ಉತ್ತರ ಪ್ರದೇಶದ ಜನರು ಬಿಜೆಪಿಗೆ ಅವಕಾಶವೊಂದನ್ನ ಕೊಟ್ಟಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದೆ ಇಡೀ ದೇಶದಲ್ಲೇ ಬಿಜೆಪಿ ಪರ ಅಲೆ ಇದೆ ಎಂಬ ಭ್ರಮೆ ಮೂಡಿಸಲಾಗುತ್ತಿದೆ ' ಎಂದು ಹೇಳಿದ್ದಾರೆ.
|
ಕರ್ನಾಟಕದಲ್ಲೂ ಉತ್ತರ ಪ್ರದೇಶ ಪುನರಾವರ್ತನೆ
"ನಾವು ಕರ್ನಾಟಕ ಬಿಜೆಪಿಯ ಕಾರ್ಯಕರ್ತರೂ ಯಡಿಯೂರಪ್ಪನವರ ನಾಯಕತ್ವದಲ್ಲಿ ಇನ್ನೂ ನಿಷ್ಠೆಯಿಂದ ಕೆಲಸ ಮಾಡಿ 2018ರಲ್ಲಿ ಕರ್ನಾಟಕದಲ್ಲಿಯೂ ಉತ್ತರ ಪ್ರದೇಶದ ಫಲಿತಾಂಶ ಪುನರಾವರ್ತನೆ ಮಾಡುತ್ತೇವೆ," ಎಂದು ಹೇಳಿದ್ದಾರೆ.
ಜಂಗಲ್ ರಾಜ್ಯದಿಂದ ಮುಕ್ತಿಗಾಗಿ ಬಿಜೆಪಿಗೆ ಮತ
"ಉತ್ತರ ಪ್ರದೇಶದ ಭ್ರಷ್ಟಾಚಾರದಿಂದ ಕೂಡಿದ ಗೂಂಡಾಗಿರಿಯ ಆಡಳಿತದಿಂದ ಮುಕ್ತಿ ಬೇಕು ಎಂದು ಜನ ಬಿಜೆಪಿಗೆ ಮತ ನೀಡಿದ್ದಾರೆ. ಆದ್ದರಿಂದ ಅಭೂತ ಪೂರ್ವ ಜಯ ಸಾಧಿಸಲು ಸಾಧ್ಯವಾಗಿದೆ," ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.
ಬಿಜೆಪಿ ಮೇಲೆ ಭರವಸೆ
"ದೇಶದ ಅತೀ ದೊಡ್ಡ ರಾಜ್ಯದಲ್ಲಿ ಬಿಜೆಪಿ 2/3 ಬಹುಮತ ಬಂದಿದೆ ಎಂದರೆ ಜನರ ಭಾವನೆ ಬಿಜೆಪಿಯತ್ತ ಇದೆ ಎಂಬುದನ್ನು ಸೂಚಿಸುತ್ತದೆ. ಇದು ಇಡೀ ದೇಶದ ಜನರ ಭಾವನೆಯ ಪ್ರತಿರೂಪ. ಗೋವಾದಲ್ಲಿಯೂ ಗೆಲುವು ಕಾಣಲಿದ್ದೇವೆ ಎಂದುಕೊಂಡಿದ್ದೆವು. ಆದರೆ ಸೋಲಾಗಿದೆ ಈ ಬಗ್ಗೆ ವಿಮರ್ಶೆ ಮಾಡುತ್ತೇವೆ," ಎಂದು ಹೇಳಿದ್ದಾರೆ.