ತಲೆಕೆಳಗಾದ ಲೆಕ್ಕಾಚಾರ, ಮಣ್ಣುಮುಕ್ಕಿದ ಘಟಾನುಘಟಿಗಳು
ಪಂಚ ರಾಜ್ಯಗಳ ಚುನಾವಣೆ ಅನಿರೀಕ್ಷಿತ ಫಲಿತಾಂಶಗಳಿಗೆ ಸಾಕ್ಷಿಯಾಗಿದೆ. ಒಂದು ಕಡೆ ವಿಜಯೋತ್ಸವಕ್ಕೆ ಕರೆ ನೀಡಿದ್ದ ಎಎಪಿ ಸೋತು ಮುಖಭಂಗ ಅನುಭವಿಸಿದರೆ ಇನ್ನೊಂದು ಕಡೆಯಲ್ಲಿ ಇಬ್ಬರು ಹಾಲಿ ಮುಖ್ಯಮಂತ್ರಿಗಳು ಹೀನಾಯ ಸೋಲು ಕಂಡಿದ್ದಾರೆ.
ಬೆಂಗಳೂರು, ಮಾರ್ಚ್ 11: ಪಂಚ ರಾಜ್ಯಗಳ ಚುನಾವಣೆ ಅನಿರೀಕ್ಷಿತ ಹಾಗೂ ಅಚ್ಚರಿಯ ಫಲಿತಾಂಶಗಳಿಗೆ ಸಾಕ್ಷಿಯಾಗಿದೆ. ಒಂದು ಕಡೆ ವಿಜಯೋತ್ಸವಕ್ಕೆ ಕರೆ ನೀಡಿದ್ದ ಎಎಪಿ ಸೋತು ಮುಖಭಂಗ ಅನುಭವಿಸಿದರೆ ಇನ್ನೊಂದು ಕಡೆಯಲ್ಲಿ ಇಬ್ಬರು ಹಾಲಿ ಮುಖ್ಯಮಂತ್ರಿಗಳು ಹೀನಾಯ ಸೋಲು ಕಂಡಿದ್ದಾರೆ.
ಮುಖ್ಯಮಂತ್ರಿ ರೇಸಿನಲ್ಲಿದ್ದ ಅಭ್ಯರ್ಥಿಗಳು, ಜನಪ್ರಿಯ ಸ್ಪರ್ಧಾಳುಗಳು ಸೋಲು ಈ ಚುನಾವಣೆಯ ವಿಶೇಷ. ಗೆದ್ದ ಅಭ್ಯರ್ಥಿಗಳು ಹಲವಾರು. ಆದರೆ ಪಕ್ಷವನ್ನೇ ಮುನ್ನಡೆಸಿ ಸೋಲು ಕಂಡ ಅಪರೂಪದ ರಾಜಕಾರಣಿಗಳು ಇಲ್ಲಿದ್ದಾರೆ.['ಥ್ಯಾಂಕ್ಯೂ, ಪ್ರಜಾತಂತ್ರ ದೀರ್ಘಕಾಲ ಬಾಳಲಿ!']
ಹರೀಶ್ ರಾವತ್
ಉತ್ತರಾಖಂಡ್ ನಲ್ಲಿ ಕಾಂಗ್ರೆಸನ್ನು ಗೆಲುವಿನ ದಡ ಮುಟ್ಟಿಸುತ್ತಾರೆ ಎಂದೇ ಬಿಂಬಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಹಾಲಿ ಮುಖ್ಯಮಂತ್ರಿ ಹರೀಶ್ ರಾವತ್ ಎರಡೂ ಕ್ಷೇತ್ರಗಳಲ್ಲಿ ಸೋಲು ಕಂಡಿದ್ದಾರೆ. ಕಿಚ್ಚಾ ಮತ್ತು ಹರಿದ್ವಾರ ಗ್ರಾಮೀಣ ಭಾಗದಲ್ಲಿ ಅವರು ಹೀನಾಯವಾಗಿ ಸೋತಿದ್ದಾರೆ. ಹರಿದ್ವಾರ ಗ್ರಾಮೀಣ ಕ್ಷೇತ್ರದಲ್ಲಿ ಬರೋಬ್ಬರಿ 12,278 ಮತಗಳಿಂದ ಬಿಜೆಪಿಯ ಯತೀಶ್ವರಾನಂದ ವಿರುದ್ಧ ಅವರು ಸೋಲು ಕಂಡಿದ್ದಾರೆ. ಇನ್ನು ಕಿಚ್ಚಾದಲ್ಲಿಯೂ ಬಿಜೆಪಿಯ ಯುವ ರಾಜಕಾರಣಿ ರಾಜೇಶ್ ಶುಕ್ಲಾ ವಿರುದ್ದ 2,127 ಮತಗಳಿಂದ ಸೋಲು ಕಂಡಿದ್ದಾರೆ.
ಕಿಶೋರ್ ಉಪಾಧ್ಯಾಯ್
ಉತ್ತರಾಖಂಡ್ ಪ್ರದೇಶ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಿಶೋರ್ ಉಪಾಧ್ಯಾಯ್ ಸ್ವತಃ ಸೋಲು ಕಂಡಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಬೇಕಾಗಿದ್ದ ಅವರೇ ಸೋತಿದ್ದಲ್ಲದೇ ಪಕ್ಷವೂ ಸೋತಿದೆ. ಶಹಾಸ್ಪುರ್ ನಲ್ಲಿ ಬಿಜೆಪಿಯ ಸಹದೇವ್ ಸಿಂಗ್ ಪುಂಡರ್ ವಿರುದ್ಧ 18,863 ಮತಗಳಿಂದ ಅವರು ಸೋಲೊಪ್ಪಿಕೊಂಡಿದ್ದಾರೆ.[ಯುಪಿ ಗೆಲುವಿನೊಂದಿಗೆ ರಾಜ್ಯಸಭೆಯಲ್ಲೂ ಬಿಜೆಪಿಯದ್ದೇ ಕಾರುಬಾರು]
ಅಜಯ್ ಭಟ್
ಉತ್ತರಾಖಂಡ್ ನಲ್ಲಿ ಬಿಜೆಪಿ ಅಭೂತಪೂರ್ವ ಜಯದೊಂದಿಗೆ ಗೆದ್ದು ಬೀಗುತ್ತಿದ್ದರೆ ಪಕ್ಷದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಅಜಯ್ ಭಟ್ ಸೋಲು ಕಂಡಿದ್ದಾರೆ. ಇದು ಕರ್ನಾಟಕದಲ್ಲಿ ಡಾ. ಜಿ ಪರಮೇಶ್ವರ್ ಸೋತ ಪರಿಸ್ಥಿತಿಯನ್ನು ನೆನಪಿಸಿದೆ. ಹಾಲಿ ವಿಪಕ್ಷ ನಾಯಕರಾಗಿದ್ದ ಅಜಯ್ ಭಟ್ ರಾಣಿಕೇಟ್ ನಲ್ಲಿ ಕಾಂಗ್ರೆಸಿನ ಕರಣ್ ಮಹಾರಾ ವಿರುದ್ದ 4981 ಮತಗಳಿಂದ ಸೋತಿದ್ದಾರೆ.
ಅಪರ್ಣಾ ಯಾದವ್
ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ರಾವ್ ಲಕ್ನೋದ ಕನ್ನಟ್ ಕ್ಷೇತ್ರದಿಂದ ಸೋಲು ಕಂಡಿದ್ದಾರೆ. ಬಿಜೆಪಿಯ ರೀತಾ ಬಹುಗುಣ ಜೋಶಿ ವಿರುದ್ಧ ಬರೋಬ್ಬರಿ 33, 796 ಮತಗಳ ಅಂತರದಿಂದ ಅವರು ಸೋಲು ಕಂಡಿದ್ದಾರೆ.[ಗೋವಾ ಬಿಜೆಪಿ ಮುಖ್ಯಮಂತ್ರಿ ಪರ್ಸೇಕರ್ ಗೆ ಭಾರೀ ಮುಖಭಂಗ]
ಭಗ್ವಂತ್ ಮನ್
ಹಾಸ್ಯ ನಟ ಹಾಗೂ ರಾಜ್ಯದಲ್ಲಿ ಎಎಪಿಯ ಪ್ರಮುಖ ತಾರಾ ಪ್ರಚಾರಕರಾಗಿದ್ದ ಭಗ್ವಂತ್ ಮನ್ ಸೋತಿದ್ದು ಮತ್ತೊಂದು ವಿಶೇಷ. ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಪುತ್ರನ ವಿರುದ್ದವೇ ಅವರು ಚುನಾವಣಾ ಕಣಕ್ಕಿಳಿದಿದ್ದರು. ಜಲಾಲಾಬಾದ್ ನಲ್ಲಿ ಶಿರೋಮಣಿ ಅಕಾಲಿದಳದಿಂದ ಕಣಕ್ಕಿಳಿದಿದ್ದ ಸುಖ್ ಬೀರ್ ಸಿಂಗ್ ಬಾದಲ್ ವಿರುದ್ದ 18,500 ಮತಗಳಿಂದ ಭಗ್ವಂತ್ ಸೋಲು ಕಂಡಿದ್ದಾರೆ.
ಕ್ಯಾಪ್ಟನ್ ಅಮರಿಂದರ್ ಸಿಂಗ್
ಪಂಜಾಬಿನಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದುಕೊಂಡು ಅಮರಿಂದರ್ ಸಿಂಗ್ ಪಕ್ಷವನ್ನು ದಡ ಮುಟ್ಟಿದ್ದಾರೆ. ಆದರೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅಮರಿಂದರ್ ಸಿಂಗ್ ಒಂದು ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಲಂಬಿಯಲ್ಲಿ ಶಿರೋಮಣಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ವಿರುದ್ಧವೇ ಅವರು ಕಣಕ್ಕಿಳಿದಿದ್ದರು. ಆದರೆ ಇಲ್ಲಿ 22,270 ಮತಗಳಿಂದ ಸೋಲು ಕಂಡಿದ್ದಾರೆ.
ಲಕ್ಷ್ಮೀಕಾಂತ್ ಪರ್ಸೇಕರ್
ಗೋವಾದಲ್ಲಿ ಬಿಜೆಪಿ ಸೋತಿದ್ದರ ಜತೆಗೆ ಹಾಲಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಕೂಡಾ ಸೋಲೊಪ್ಪಿಕೊಂಡಿದ್ದಾರೆ. ಮ್ಯಾಂಡ್ರೆಮ್ ಕ್ಷೇತ್ರದಲ್ಲಿ ಅವರು ಬರೋಬ್ಬರಿ 7119 ಮತಗಳಿಂದ ಕಾಂಗ್ರೆಸಿನ ದಯಾನಂದ್ ರಘುನಾಥ್ ಸೋಪ್ಟೆ ವಿರುದ್ಧ ಸೋಲು ಕಂಡಿದ್ದಾರೆ.
ಎಲ್ವಿಸ್ ಗೋಮ್ಸ್
ವಿಚಿತ್ರವೆಂದರೆ ಗೋವಾದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದ್ದ ಎಲ್ವಿಸ್ ಗೋಮ್ಸ್ ಹೀನಾಯ ಸೋಲು ಕಂಡಿದ್ದಾರೆ. ಕನ್ಕೋಲಿಂ ಕ್ಷೇತ್ರದಲ್ಲಿ ಅವರು ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟು ಕೇವಲ 3437 ಮತಗಳನ್ನು ಪಡೆಯಲಷ್ಟೇ ಶಕ್ತರಾಗಿದ್ದಾರೆ. ಇಲ್ಲಿ ಕಾಂಗ್ರೆಸಿನ ಕ್ಲಫಾಸಿಯೋ ಡಯಾಸ್ ಗೆಲುವು ಸಾಧಿಸಿದ್ದಾರೆ.
ಇರೋಮ್ ಶರ್ಮಿಳಾ
ಮಣಿಪುರದಲ್ಲಿ ತಮ್ಮದೇ ಪಿಆರ್'ಜೆಎ ಪಕ್ಷ ಸ್ಥಾಪಿಸಿ ಚುನಾವಣೆಗೆ ದುಮುಕ್ಕಿದ್ದ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಚಾನು ಹೀನಾಯ ಸೋಲು ಕಂಡಿದ್ದಾರೆ. ತೌಬಾಲ್ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಸಿಂಗ್ ವಿರುದ್ಧ ಸ್ಪರ್ಧಿಸಿದ್ದ ಅವರು ಕೇವಲ 90 ಮತಗಳನ್ನು ಪಡೆಯಲಷ್ಟೇ ಶಕ್ತರಾಗಿದ್ದಾರೆ. ಇಲ್ಲಿ ಸಿಂಗ್ 18,649 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಇನ್ನೆಂದೂ ಚುನಾವಣೆಗೆ ನಿಲ್ಲುವುದಿಲ್ಲ ಎಂದೂ ಅವರು ಹೇಳಿದ್ದಾರೆ.