ಚುನಾವಣಾ ಆಯೋಗದಿಂದ ಎಐಎಡಿಎಂಕೆ ಹೆಸರು, ಚಿಹ್ನೆಗೆ ತಾತ್ಕಾಲಿಕ ತಡೆ
ಮುಂದಿನ ತಿಂಗಳ 12ರಂದು ಕೆ.ಆರ್.ನಗರದ ಉಪಚುನಾವಣೆಯಲ್ಲಿ ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ಅವರ ಬಣಕ್ಕೆ ಎಐಡಿಎಂಕೆ ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ಉಪಯೋಗಿಸದಿರುವಂತೆ ಚುನಾವಣಾ ಆಯೋಗ ತಾಕೀತು.
ನವದೆಹಲಿ, ಮಾರ್ಚ್ 22: ಕೇಂದ್ರ ಚುನಾವಣಾ ಆಯೋಗವು, ಎಐಎಡಿಎಂಕೆ ಹೆಸರು ಹಾಗೂ ಎರಡು ಎಲೆಗಳಿರುವ ಚಿಹ್ನೆಯ ಬಳಕೆಯ ಮೇಲೆ ಮಾರ್ಚ್ 22ರ ಮಧ್ಯರಾತ್ರಿ ತಾತ್ಕಾಲಿಕ ತಡೆ ಹೇರಿದೆ.
ಅಲ್ಲದೆ, ಪಕ್ಷದಲ್ಲಿ ಒಡಕಿಗೆ ಕಾರಣವಾಗಿರುವ ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ - ಈ ಇಬ್ಬರಲ್ಲಿ ಯಾರೊಬ್ಬರಿಗೂ ಸದ್ಯದ ಮಟ್ಟಿಗೆ ಜಯಲಲಿತಾ ಅವರ ಉತ್ತರಾಧಿಕಾರಿಯೆಂದು ಘೋಷಿಸದಿರಲು ನಿರ್ಧರಿಸಿದೆ.
ಜಯಲಲಿತಾ ಅವರ ನಿಧನದ ನಂತರ, ಪಕ್ಷದಲ್ಲಿ ಪನ್ನೀರ್ ಸೆಲ್ವಂ ಬಣ ಹಾಗೂ ಶಶಿಕಲಾ ಅವರ ಬಣಗಳಾಗಿ ಇಬ್ಭಾಗವಾಗಿದೆ. ಏಪ್ರಿಲ್ 12ರಂದು ಜಯಲಲಿತಾ ಅವರ ನಿಧನದಿಂದ ತೆರವಾಗಿರುವ ಚೆನ್ನೈನ ಆರ್ ಕೆ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ.
ಇಲ್ಲಿ, ಶಶಿಕಲಾ ಬಣ ಹಾಗೂ ಪನ್ನೀರ್ ಸೆಲ್ವಂ ಬಣ ಪ್ರತ್ಯೇಕವಾಗಿ ತಂತಮ್ಮ ಕಡೆಯಿಂದ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಚುನಾವಣೆ ವೇಳೆ ಪಕ್ಷದ ಹೆಸರು ಹಾಗೂ ಎರಡು ಎಲೆಗಳಿರುವ ಚಿಹ್ನೆಯನ್ನು ತಮ್ಮ ಅಭ್ಯರ್ಥಿಗೇ ನೀಡಲು ಅನುಮತಿ ನೀಡಬೇಕೆಂದು ಎರಡೂ ಬಣಗಳು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದವು.
ಇದೀಗ ಚುನಾವಣಾ ಆಯೋಗವು, ಚಿಹ್ನೆಯನ್ನು ಎರಡೂ ಬಣದವರು ಉಪಯೋಗಿಸುವಂತಿಲ್ಲ ಎಂದು ಹೇಳಿರುವುದಲ್ಲದೆ, ಈ ಪ್ರಕರಣದ ಬಗ್ಗೆ ತಾತ್ಕಾಲಿಕ ಆದೇಶ ನೀಡಿ, ಎಐಎಡಿಎಂಕೆ ಪಕ್ಷದ ಹೆಸರು ಹಾಗೂ ಚಿಹ್ನೆಯ ಮೇಲೆ ತಾತ್ಕಾಲಿಕ ತಡೆ ಹೇರಿದೆ.
ಹಾಗಾಗಿ, ಉಪಚುನಾವಣೆಯಲ್ಲಿ ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ಬಣವು ಎಐಎಡಿಎಂಕೆ ಪಕ್ಷದ ಚಿಹ್ನೆ ಹಾಗೂ ಹೆಸರನ್ನು ಉಪಯೋಗಿಸುವಂತಿಲ್ಲದಂತಾಗಿದೆ.