ಈದ್ ಸಂಭ್ರಮದ ಮಧ್ಯೆ ಕಾಶ್ಮೀರದಲ್ಲಿ ಭುಗಿಲೆದ್ದ ಸಂಘರ್ಷ
ಜಮ್ಮು ಮತ್ತು ಕಾಶ್ಮೀರ, ಜೂನ್ 26: ಈದ್ ಸಡಗರದ ಮಧ್ಯೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಅನಂತ್ ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದು ಉಳಿದ ಹಲವು ಭಾಗಗಳಲ್ಲಿ ಗಲಾಟೆಗಳು ನಡೆದ ವರದಿಗಳು ಬಂದಿವೆ.
ಕಾಶ್ಮೀರದ ಈದ್ಗಾ ಮೈದಾನದಲ್ಲಿ ಸಂಘರ್ಷ ಆರಂಭವಾಗಿದ್ದು ಜನರನ್ನು ಚದುರಿಸಲು ಭದ್ರತಾ ಪಡೆಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ಅಶ್ರುವಾಯು ಪ್ರಯೋಗಿಸುತ್ತಿವೆ. ಹೀಗಿದ್ದೂ ಪರಿಸ್ಥಿತಿಯನ್ನು ತಹಬದಿಗೆ ತರಲು ಭದ್ರತಾ ಪಡೆಗಳಿಗೆ ಸಾಧ್ಯವಾಗಿಲ್ಲ.
ಕನಿಷ್ಠ ಈದ್ ದಿನವಾದರೂ ಕಾಶ್ಮೀರ ಕಣಿವೆ ಶಾಂತಿಯಿಂದಿರಬಹುದು ಎಂದುಕೊಳ್ಳಲಾಗಿತ್ತು. ಆದರೆ ಪರಿಸ್ಥಿತಿ ಭಿನ್ನವಾಗಿದ್ದು ಈದ್ ದಿನವೂ ಕಣಿವೆ ರಾಜ್ಯ ಉದ್ವಿಘ್ನವಾಗಿದೆ. ಇನ್ನು ಪ್ರತಿಭಟನಾಕಾರರು ಹಫೀಸ್ ಸಯೀದ್ ಮತ್ತು ಸಯೀದ್ ಸಲಾಹುದ್ದೀನ್ ಚಿತ್ರಗಳನ್ನು ಪುಲ್ವಾಮದಲ್ಲಿ ಪ್ರದರ್ಶಿಸಿದ್ದು ಭದ್ರತಾ ಪಡೆಗಳ ವಿರುದ್ಧ ಘೋಷಣೆ ಕೂಗಿದ್ದಾರೆ.
ಏತನ್ಮಧ್ಯೆ ಸೋಮವಾರ ಸಿಆರ್.ಪಿಎಫ್ ಕ್ಯಾಂಪ್ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಅನಂತ್ ನಾಗ್ ಜಿಲ್ಲೆಯಲ್ಲಿ ವರದಿಯಾಗಿದೆ. ಒಟ್ಟಾರೆ ಕಣಿವೆಯ ಹಲವು ಭಾಗಗಳಲ್ಲಿ ಬಿಗುವಿನ ವಾತಾವರಣವಿದೆ.