ಜಾರಿ ನಿರ್ದೇಶನಾಲಯ ಭರ್ಜರಿ ಬೇಟೆ: 2300 ಬೇನಾಮಿ ಕಂಪನಿಗಳು ಪತ್ತೆ
ಮುಂಬೈ ಹಾಗೂ ದೆಹಲಿಯಲ್ಲೇ ಸುಮಾರು 1000 ಬೇನಾಮಿ ಕಂಪನಿಗಳು ಪತ್ತೆಯಾಗಿದ್ದು, ಇವುಗಳಲ್ಲಿ ಒಬ್ಬನೇ ವ್ಯಕ್ತಿಯ ಹೆಸರಲ್ಲಿ 700 ಕಂಪನಿಗಳು ಅಸ್ತಿತ್ವದಲ್ಲಿರುವುದು ಪತ್ತೆಯಾಗಿದೆ.
ನವದೆಹಲಿ, ಏಪ್ರಿಲ್ 1: ದೇಶದ 16 ರಾಜ್ಯಗಳಲ್ಲಿ ಶನಿವಾರ ಜಾರಿ ನಿರ್ದೇಶನಾಲಯ (ಇಡಿ) ಏಕಕಾಲದಲ್ಲಿ ನಡೆಸಿದ ದಾಳಿಯಲ್ಲಿ 2300ಕ್ಕೂ ಹೆಚ್ಚು ಬೇನಾಮಿ ಕಂಪನಿಗಳು ಪತ್ತೆಯಾಗಿವೆ. ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ಜಾರಿ ನಿರ್ದೇಶನಾಲಯ ಈ ದಾಳಿಗಳನ್ನು ಕೈಗೊಂಡಿದೆ ಎಂದು ಹೇಳಲಾಗಿದೆ.
ಮುಂಬೈ ಹಾಗೂ ದೆಹಲಿಯಲ್ಲೇ ಸುಮಾರು 1000 ಬೇನಾಮಿ ಕಂಪನಿಗಳು ಪತ್ತೆಯಾಗಿದ್ದು, ಇವುಗಳಲ್ಲಿ ಒಬ್ಬನೇ ವ್ಯಕ್ತಿಯ ಹೆಸರಲ್ಲಿ 700 ಕಂಪನಿಗಳು ಅಸ್ತಿತ್ವದಲ್ಲಿರುವುದು ಪತ್ತೆಯಾಗಿದೆ.
ನೋಯ್ಡಾದ ಮಾಜಿ ಇಂಜಿನಿಯರ್ ಯಾದವ್ ಸಿಂಗ್ ಅವರಿಗೆ ಸೇರಿದ ಕೆಲ ಕಂಪನಿಗಳೂ ಇವೆ ಎಂದು ಹೇಳಲಾಗಿದೆ. ಬೆಂಗಳೂರು, ಚೆನ್ನೈಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.
ಈ ಬೇನಾಮಿ ಕಂಪನಿಗಳ ನಡುವೆ ಹಲವಾರು ಬಾರಿ ಲಕ್ಷಗಟ್ಟಲೆ ಹಣವು ಹರಿದಾಡಿದೆ. ಸರ್ಕಾರಿ ತೆರಿಗೆ ಕಟ್ಟದಂತೆ ಯಾಮಾರಿಸಿ ಇಂಥ ವ್ಯವಹಾರಗಳನ್ನು ನಡಸಲಾಗಿದೆ.
ಇಂಥ ಬೇನಾಮಿ ಕಂಪನಿಗಳ ಮೂಲಕವೇ ರಾಜಕಾರಣಿಗಳು, ದೊಡ್ಡ ಕಂಪನಿಗಳು ತಮ್ಮಲ್ಲಿನ ಕಪ್ಪು ಹಣವನ್ನು ತೊಡಗಿಸಿ ಅವು ಭದ್ರವಾಗಿ, ಸರ್ಕಾರದ ಕಣ್ಣಿಗೆ ಬೀಳದಂತೆ ಮರೆ ಮಾಚಿವೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ನಿರ್ದಿಷ್ಟ ಕಂಪನಿಯೊಂದರಲ್ಲಿ ಮಹಾರಾಷ್ಟ್ರದ ಎನ್ ಸಿಪಿ ನಾಯಕ ಛಗನ್ ಭುಜಬಲ್ ಅವರ ಹೆಸರಿನಲ್ಲಿ ಸುಮಾರು 45 ಕೋಟಿ ರು. ಜಮೆಯಾಗಿರುವುದು ಇಂಥ ಹನುಮಾನಗಳಿಗೆ ಪುಷ್ಟಿ ನೀಡಿದೆ. ಇಂಥ ಹಣದಲ್ಲಿ ಆಂಧ್ರ ಪ್ರದೇಶದ ವೈಎಸ್ ಆರ್ ಪಕ್ಷದ ನಾಯಕ ಜಗನ್ ರೆಡ್ಡಿ ಅವರಿಗೆ ಸೇರಿದ ಕಂಪನಿಗಳೂ ಇವೆ ಎಂದು ಹೇಳಲಾಗಿದೆ.