ಇಂದು (ಜ.31) ಸಂಸತ್ತಿನಲ್ಲಿ ಮಂಡಿಸಲಿರುವ ಆರ್ಥಿಕ ಸಮೀಕ್ಷೆಯ 5 ಅಂಶಗಳು
2017-18ರ ಕೇಂದ್ರ ಬಜೆಟಿಗೆ ಪೂರ್ವಭಾವಿಯಾಗಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಇಂದು ಸಂಸತ್ತಿನಲ್ಲಿ 2016-17ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ.
ನವದೆಹಲಿ, ಜನವರಿ 31: ಇಂದು ಕೇಂದ್ರ ಸರಕಾರ 2016-17ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಲಿದೆ. ಸಂಸತ್ತಿನಲ್ಲಿ ಅರುಣ್ ಜೇಟ್ಲೀ ಬಜೆಟ್ ಮಂಡಿಸಲಿರುವ ಹಿಂದಿನ ದಿನ ಈ ಸಮೀಕ್ಷೆ ಮಂಡನೆಯಾಗಲಿದೆ.[ಕೇಂದ್ರ ಬಜೆಟ್ 2017: ನಿರೀಕ್ಷೆ ಮಾಡಬಹುದಾದ ಕುತೂಹಲಕಾರಿ ಅಂಶಗಳು ಇಲ್ಲಿವೆ.]
ಈ ಸಮೀಕ್ಷೆಯ ಮೇಲೆ ಬಜೆಟ್ ನಿರ್ಧಾರವಾಗಲಿರುವುದರಿಂದ ಆರ್ಥಿಕ ಸಮೀಕ್ಷೆ ಮಹತ್ವ ಪಡೆದುಕೊಂಡಿದೆ. ಕಳೆದ 12 ತಿಂಗಳಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಅಭಿವೃದ್ಧಿ, ಪ್ರಮುಖ ಕಾರ್ಯಕ್ರಮಗಳ ಅನುಷ್ಠಾನದಲ್ಲಾಗಿರುವ ಪ್ರಗತಿಯನ್ನು ಸಮೀಕ್ಷೆ ಹೊರಹಾಕಲಿದೆ. ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಮತ್ತವರ ತಂಡ ಈ ಸಮೀಕ್ಷೆ ಸಿದ್ದಪಡಿಸಿದೆ.[ಕೇಂದ್ರ ಬಜೆಟ್ 2017: ನಿರೀಕ್ಷೆ ಮಾಡಬಹುದಾದ ಕುತೂಹಲಕಾರಿ ಅಂಶಗಳು ಇಲ್ಲಿವೆ.....]
ಜಿಡಿಪಿ ಗುರಿ
ಈ ವರ್ಷ (2016-17)ದ ಜಿಡಿಪಿ ಎಷ್ಟು ಮತ್ತು ಮುಂದಿನ ವರ್ಷ (2017-18)ದ ಜಿಡಿಪಿ ಗುರಿಯನ್ನು ಸಮೀಕ್ಷೆ ಹೊರಹಾಕಲಿದೆ. ಅಪನಗದೀಕರಣದ ಹಿನ್ನಲೆಯಲ್ಲಿ ಈ ಜಿಡಿಪಿ ಭಾರಿ ಕುತೂಹಲ ಕೆರಳಿಸಿದೆ. ಈಗಾಗಲೇ ಸರಕಾರ ಅಂದುಕೊಂಡಿದ್ದ ಶೇಕಡಾ 7.6 ರಿಂದ ಜಿಡಿಪಿ 6.6ಕ್ಕೆ ಇಳಿಕೆಯಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಇದಕ್ಕೆ ಅಪನಗದೀಕರಣವೇ ಕಾರಣ ಎಂದು ಅದು ಹೇಳಿದೆ. 2017-148ಕ್ಕೆ ವಿಶ್ವ ಬ್ಯಾಂಕ್ ಭಾರತ ಶೇಕಡಾ 7.2ರ ದರದಲ್ಲಿ ಅಭಿವೃದ್ಧಿ ಸಾಧಿಸಲಿದೆ ಎಂದು ಅಂದಾಜು ಮಾಡಿದೆ.
ಅಪನಗದೀಕರಣ
ಅಪನಗದೀಕರಣದ ಬಗ್ಗೆ ಸುಬ್ರಮಣಿಯನ್ ಮತ್ತು ತಂಡ ಯಾವ ಮಾಹಿತಿ ಹೊರ ಹಾಕಲಿದೆ ಎಂಬುದು ಕುತೂಹಲ ಹುಟ್ಟಿಸಿದೆ. ಈಗಾಗಲೇ ಆರ್ಬಿಐ ಮತ್ತು ಮುಖ್ಯಾ ಸಂಖ್ಯಾಶಾಸ್ತ್ರಜ್ಞರು ಅಪನಗದೀಕರಣದ ಪರಿಣಾಮಗಳ ಬಗ್ಗೆ ಮಾಹಿತಿ ಇಲ್ಲ ಎಂದಿರುವುದರಿಂದ ಈ ಸಮೀಕ್ಷೆಯ ಮೇಲೆ ನಿರೀಕ್ಷೆಗಳಿವೆ. ಎಷ್ಟು ಬೇಗ ಭಾರತದ ಆರ್ಥಿಕತೆ ಚೇತರಿಸಿಕೊಳ್ಳಲಿದೆ ಎಂಬುದನ್ನು ನಿರ್ಧರಿಸುವುದು ಹಣಕಾಸು ತಜ್ಞರ ಪಾಲಿಗೆ ಸದ್ಯ ಸವಾಲಿನ ಕೆಲಸವಾಗಿದೆ.
ಜಾಗತಿಕ ಮೂಲ ವೇತನ
ಆರ್ಥಿಕ ಸಮೀಕ್ಷೆಯುಲ್ಲಿ ಜಾಗತಿಕ ಮೂಲ ವೇತನವೂ ಇರುವುದಾಗಿ ಈಗಾಗಲೇ ಸುಬ್ರಮಣಿಯನ್ ಹಲವಾರು ಬಾರಿ ಹೇಳಿದ್ದಾರೆ. ಜಾಗತಿಕ ಮೂಲ ವೇತನದ ಪ್ರಕಾರ ಭಾರತದ ಒಂದು ವರ್ಗದ ನಾಗರಿಕರು ಸರಕಾರದ ಕಡೆಯಿಂದ ಒಂದಷ್ಟು ಹಣವನ್ನು ನಿರಂತರವಾಗಿ ಪಡೆಯಲಿದ್ದಾರೆ. ಸಮಾಜಿಕ ಭದ್ರತೆ ದೃಷ್ಟಿಯಿಂದ ಈ ಯೋಜನೆ ಮುಖ್ಯವಾಗಿದೆ.
ಜಾಗತಿಕ ಅಂಶಗಳ ಮೇಲೆ ಸಮೀಕ್ಷೆಯ ಬೆಳಕು
ಮುಖ್ಯ ಆರ್ಥಿಕ ಸಲಹೆಗಾರರು ಜಾಗತಿಕ ಹಣಕಾಸು ಪರಿಸ್ಥಿತಿಗಳ ಬಗ್ಗೆಯೂ ಸಮೀಕ್ಷೆಯಲ್ಲಿ ಉಲ್ಲೇಖಿಸಲಿದ್ದಾರೆ. ಕಚ್ಚಾ ತೈಲ ದರ ಹೆಚ್ಚಳ ಇದರಲ್ಲಿ ಪ್ರಮುಖವಾಗಿದೆ. ಇತರ ದೇಶಗಳ ಹಣಕಾಸು ಪರಿಸ್ಥಿತಿಗಳು ಭಾರತದ ಮೇಲೆಯೂ ಪರಿಣಾಮ ಬೀರಲಿರುವುದರಿಂದ ಇದು ಮುಖ್ಯವಾಗಿದೆ.
ಕಪ್ಪು ಹಣ
ಕಳೆದ ವರ್ಷದ ಆರ್ಥಿಕ ಸಮೀಕ್ಷೆಯಲ್ಲಿ ಹೆಚ್ಚಿನ ತೆರಿಗೆ ಅಂಗೀಕಾರಕ್ಕೆ ಸುಬ್ರಮಣಿಯನ್ ಒತ್ತಾಯಿಸಿದ್ದರು. ಭಾರತದ ಜಿಡಿಪಿಯಲ್ಲಿ ತೆರಿಗೆಯ ಪಾಲು ಕೇವಲ ಶೇಕಡಾ 5.4 ಆಗಿದ್ದು, ಉಳಿದ ದೇಶಗಳಿಗೆ ಹೋಲಿಸಿದರೆ ತೀರಾ ಕಡಿಮೆಯಾಗಿದೆ. ಅಂದರೆ ಇವತ್ತು ಭಾರತದಲ್ಲಿರುವ ಕೇವಲ ಶೇಕಡಾ 5.5 ಜನರಷ್ಟೇ ನೇರ ತೆರಿಗೆ ಕಟ್ಟುತ್ತಿದ್ದಾರೆ. ಈ ಹಿಂದಿನ ಸಮೀಕ್ಷೆಯಲ್ಲಿ ಸುಬ್ರಮಣಿಯುನ್ ಭಾರತ ಟ್ಯಾಕ್ಸ್ ಕಟ್ಟುವ ಪ್ರಜಾಪ್ರಭುತ್ವವಾಗಬೇಕು ಎಂದು ಪ್ರತಿಪಾದಿಸಿದ್ದರು. ಸರಕಾರ ಕಪ್ಪು ಹಣ ನಿರ್ಮೂಲನೆಗೆ ಸುಬ್ರಮಣಿಯನ್ ಏನು ಹೇಳುತ್ತಾರೆ ಎಂಬುದೂ ಕುತೂಹಲ ಹುಟ್ಟಿಸಿದೆ.
(ಚಿತ್ರ ಕೃಪೆ: ಪಿಟಿಐ, ಶಟರ್ ಸ್ಟಾಕ್)