ಮಾಲೇಗಾವ್ ಸ್ಫೋಟ ಪ್ರಕರಣ: ಸಾಧ್ವಿ ಪ್ರಜ್ಞಾ ಠಾಕೂರ್ ಗೆ ನಿರಾಳ
ನವದೆಹಲಿ, ಮೇ 12: ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಲೇಗಾವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಾಧ್ವಿ ಪ್ರಗ್ಯಾ ಠಾಕೂರ್ ಅವರು ಸಲ್ಲಿಸಿರುವ ವಿಮುಕ್ತ ಅರ್ಜಿಯ ವಿರುದ್ಧ ತಾನು ಪ್ರತಿ ಅರ್ಜಿ ಸಲ್ಲಿಸುವುದಿಲ್ಲ ಎಂದು ಆ ಪ್ರಕರಣದ ತನಿಖೆ ನಡೆಸುತ್ತಿದ್ದ ರಾಷ್ಟ್ರೀಯ ತನಿಖಾ ಆಯೋಗ (ಎನ್ಐಎ) ಹೇಳಿದೆ.
ಈ ಕುರಿತಂತೆ ಸುಪ್ರೀಂ ಕೋರ್ಟ್ ಗೆ ಎನ್ಐಎ ಸ್ಪಷ್ಟಪಡಿಸಿದೆ. ಇದರಿಂದಾಗಿ, ಸಾಧ್ವಿ ಅವರು ವಿಮುಕ್ತಗೊಳ್ಳುವ ಸಾಧ್ಯತೆಗಳಿದ್ದು, ಅವರು ನಿಟ್ಟುಸಿರು ಬಿಡುವಂತಾಗಿದೆ.
ಎನ್ಐಎ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಸಾದ್ವಿ ಪ್ರಜ್ಞಾ, ತಮ್ಮನ್ನ ಪ್ರಕರಣದಿಂದ ವಿಮುಕ್ತಗೊಳಿಸುವಂತೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ, ನ್ಯಾಯಾಲಯಕ್ಕೆ ತನ್ನ ಅನಿಸಿಕೆ ವ್ಯಕ್ತಪಡಿಸಿರುವ ಎನ್ಐಎ, ಸಾಧ್ವಿ ಅವರಿಗೆ ಮಾಲೆಗಾವ್ ಸ್ಫೋಟ ಪ್ರಕರಣದಿಂದ ವಿಮುಕ್ತಿ ನೀಡಲು ತಮ್ಮ ಅಭ್ಯಂತರವೇನಿಲ್ಲ ಎಂದು ತಿಳಿಸಿದೆ.
ಇದೇ ಪ್ರಕರಣದಲ್ಲಿ ತಮಗೆ ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಸಾಧ್ವಿ ಅವರಿಗೆ ಕಳೆದ ತಿಂಗಳ 25ರಂದು ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು.