ಅಂಧ ಅಭಿಮಾನಿ ಸೋನಿಯಾ ಗಾಂಧಿಗಾಗಿ ಏನು ಮಾಡಿದ ಗೊತ್ತಾ?
ಬೆಂಗಳೂರು, ಜ 9: ದೇವರಿಗೆ ಮುಡಿ ಹರಕೆ ಕೊಡುವುದು, ಪಾದಯಾತ್ರೆ ನಡೆಸುವುದು, ಗೆಂಡಸೇವೆ ಮಾಡುವುದು ತಮ್ಮ ಮೆಚ್ಚಿನ ಸಿನಿಮಾ ನಾಯಕರ ಕಟೌಟಿಗೆ ಹಾಲಾಭಿಷೇಕ ಮಾಡುವುದನ್ನು ನೋಡಿದ್ದೇವೆ..ಕೇಳಿದ್ದೇವೆ
ಆದರೆ ಇಲ್ಲೊಬ್ಬ ಅಭಿಮಾನಿ ತನ್ನ ನೆಚ್ಚಿನ ನಾಯಕಿಗಾಗಿ ಕೈಬೆರಳೇ ಕತ್ತರಿಸಿಕೊಡುವುದೇ? ಹೌದು, ಮಂಡ್ಯದ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಾಯಕಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗಾಗಿ ತಿರುಪತಿಗೆ ಹೋಗಿ ಬೆರಳು ಅರ್ಪಿಸಿ ಬಂದಿದ್ದಾನೆ.
ಸುರೇಶ್ ಎನ್ನುವ ಈ ವ್ಯಕ್ತಿ ಮಂಡ್ಯ ಮೂಲದವನು, ಈತ ಕಾಂಗ್ರೆಸ್ಸಿನ ಕಾರ್ಯಕರ್ತ ಕೂಡಾ. ಸೋನಿಯಾ ಗಾಂಧಿ ಮತ್ತು ರೆಬೆಲ್ ಸ್ಟಾರ್ ಕಮ್ ಸಚಿವ ಅಂಬರೀಶ್ ಅವರ ಕಟ್ಟಾ ಅಭಿಮಾನಿ.
ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ತನ್ನ ಮೆಚ್ಚಿನ ನಾಯಕಿಗೆ ಜೈಲು ಶಿಕ್ಷೆಯಾಗಬಹುದು. ಮೇಡಂಗೆ ಜೈಲು ಶಿಕ್ಷೆಯಾಗಬಾರದು ಎಂದು ಪ್ರಾರ್ಥಿಸಿ, ತಿರುಪತಿ ತಿಮ್ಮಪ್ಪನ ಬಳಿ ಕೈಬೆರಳು ಕೊಡುವುದಾಗಿ ಹರಕೆ ಹೊತ್ತಿದ್ದಂತೆ ಈ ಅಂಧ ಅಭಿಮಾನಿ. (ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್)
ಪಟಿಯಾಲ ಕೋರ್ಟಿನಲ್ಲಿ ಮೇಡಂಗೆ ಜಾಮೀನು ಸಿಕ್ಕನಂತರ, ತಾನು ಹೊತ್ತ ಹರಕೆ ತೀರಿಸಲು ಸುರೇಶ್ ತಿರುಪತಿಗೆ ಹೋಗಿ, ತಿಮ್ಮಪ್ಪನಿಗೆ ಬೆರಳು ಅರ್ಪಿಸಿ ಬಂದಿದ್ದಾನೆ.
ವಿಷಯ ತಿಳಿದ ವಸತಿ ಸಚಿವ ಅಂಬರೀಶ್, ಆತನನ್ನು ತನ್ನ ಬೆಂಗಳೂರಿನ ಜೆ ಪಿ ನಗರದ ನಿವಾಸಕ್ಕೆ ಕರೆಸಿಕೊಂಡಿದ್ದಾರೆ. ಈ ರೀತಿಯೆಲ್ಲಾ ಹರಕೆ ಹೊರಬಾರದಪ್ಪಾ ಎಂದು ಬುದ್ದಿ ಹೇಳಿ ಕಳುಹಿಸಿದ್ದಾರೆ.
ನಂತರ ಮಾತನಾಡುತ್ತಿದ್ದ ಅಂಬರೀಶ್, ನನಗೂ ಅಭಿಮಾನಿಗಳಿದ್ದಾರೆ. ಆದರೆ ಈ ರೀತಿಯ ಅಭಿಮಾನಿಯನ್ನು ನಾನು ಇದುವರೆಗೆ ನೋಡಿಲ್ಲ. ಈ ರೀತಿಯ ಹಿಂಸಾತ್ಮಕ ಹರಕೆಗೆ ಅಭಿಮಾನಿಗಳು ಹೋಗಬಾರದೆಂದು ಮನವಿ ಮಾಡಿದ್ದಾರೆ.
ಈತನ ಕುಟುಂಬದ ಕಥೆಯೇನು, ಈತನ ಮುಂದಿನ ದುಡಿಮೆ ಹೇಗೆ? ತಿರುಪತಿ ತಿಮ್ಮಪ್ಪನೇ ಬಲ್ಲ.. ಪ್ರಪಂಚದಲ್ಲಿ ಎಂತೆಂಥವರು ಇರ್ತಾರೆ ನೋಡಿ..