ನೋಟು ನಿಷೇಧ: ನವೆಂಬರ್ 28ರಂದು ಭಾರತ್ ಬಂದ್!
ಐನೂರು ಮತ್ತು ಸಾವಿರ ರೂಪಾಯಿ ನೋಟು ನಿಷೇಧ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎನ್ನುವ ತಮ್ಮ ಹೋರಾಟದ ಮುಂದಿನ ಭಾಗವಾಗಿ ವಿರೋಧ ಪಕ್ಷಗಳು ಸೋಮವಾರ (ನ 28) ಭಾರತ ಬಂದ್ ಗೆ ಕರೆನೀಡಿವೆ.
ನವದೆಹಲಿ, ನ 23: ಐನೂರು ಮತ್ತು ಸಾವಿರ ರೂಪಾಯಿ ನೋಟು ನಿಷೇಧ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎನ್ನುವ ತಮ್ಮ ಹೋರಾಟದ ಮುಂದಿನ ಭಾಗವಾಗಿ ವಿರೋಧ ಪಕ್ಷಗಳು ಸೋಮವಾರ (ನ 28) ಭಾರತ ಬಂದ್ ಗೆ ಕರೆನೀಡಿವೆ.
ಬುಧವಾರ (ನ 23) ಪಾರ್ಲಿಮೆಂಟಿನ ಹೊರಗೆ ಪ್ರತಿಭಟನೆಯಲ್ಲಿ ನಿರತರಾಗಿರುವ ಸುಮಾರು 13ಕ್ಕೂ ಹೆಚ್ಚು ಪಕ್ಷಗಳು ಜಂಟಿಯಾಗಿ ಬಂದ್ ಗೆ ಕರೆನೀಡಿವೆ. (ಸಭೆಯಲ್ಲಿ ಪ್ರಧಾನಿಯನ್ನು ಹೊಗಳಿದ್ದಕ್ಕೆ ಹೀಗಾ ಮಾಡೋದು)
ಸಂಸತ್ತಿನಲ್ಲಿ ಪ್ರಧಾನಿ ಮೋದಿ ಭಾಗವಹಿಸದೇ ಇರುತ್ತಿರುವುದರಿಂದ ಮತ್ತು ಮೋದಿ ಯಾವುದೇ ಹೇಳಿಕೆ ನೀಡದೇ ಇರುವುದರಿಂದ ಬಂದ್ ಗೆ ಕರೆನೀಡಲಾಗಿದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿರುವ ಮುಖಂಡರು ಹೇಳಿದ್ದಾರೆ.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಬಿಎಸ್ಪಿ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ಸುಮಾರು 160ಕ್ಕೂ ಹೆಚ್ಚು ಸಂಸದರು ಭಾಗಿಯಾಗಿದ್ದಾರೆ.
ಸ್ವಿಸ್ ಬ್ಯಾಂಕಿನಲ್ಲಿರುವ ದುಡ್ಡನ್ನು ವಾಪಸ್ ತರಲಾಗದೇ, ಪ್ರಧಾನಮಂತ್ರಿ ಜನರ ಕಣ್ಣೊರೆಸಲು 500, 1000 ರೂಪಾಯಿ ನೋಟನ್ನು ನಿಷೇಧಿಸಿದ್ದಾರೆ. ಕೇಂದ್ರದ ಈ ನಿರ್ಧಾರದಿಂದ ರೈತರು ಹಣ ಕಳೆದುಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನ ಬಿಜೆಪಿಗೆ ಸರಿಯಾದ ಪಾಠ ಕಲಿಸಲಿದ್ದಾರೆಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪ್ರಧಾನಿ ಮೋದಿ ಇದೇ ರೀತಿ ಸರ್ವಾಧಿಕಾರಿ ರೀತಿಯಲ್ಲಿ ನಡೆದುಕೊಂಡರೆ ಮುಂದೊಂದು ದಿನ ಅವರ ಪಕ್ಷದ ಕಾರ್ಯಕರ್ತರೇ ಅವರನ್ನು ದೂರ ತಳ್ಳಲಿದ್ದಾರೆಂದು ಮಮತಾ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್, ಜೆಡಿಯು ಮುಖಂಡ ಶರದ್ ಯಾದವ್, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಡಿಎಂಕೆ ನಾಯಕಿ ಕನಿಮೋಳಿ ಸೇರಿದಂತೆ ಸಂಸದರು ಮತ್ತು ಮುಖಂಡರು ಭಾಗವಹಿಸಿದ್ದಾರೆ.
ಬಹುತೇಕ ರಾಜ್ಯಗಳಲ್ಲಿ ಆಡಳಿತ ಅಥವಾ ವಿರೋಧ ಪಕ್ಷ ಸ್ಥಾನದಲ್ಲಿರುವ ವಿಪಕ್ಷಗಳು ಸೋಮವಾರ, ನವೆಂಬರ್ 28ರಂದು ಕರೆ ನೀಡಿರುವ ಭಾರತ ಬಂದ್ ಬಹುತೇಕ ಯಶಸ್ವಿಯಾಗುವ ಸಾಧ್ಯತೆಯಿದೆ.