ಕೇರಳದಿಂದ ನಾಗಲ್ಯಾಂಡ್ ವರೆಗೆ ಪೊಲೀಸ್ ಪೇದೆಯ 400 ಕೋಟಿ ಸಾಮ್ರಾಜ್ಯ
ತಿರುವನಂತಪುರಂ, ಜೂನ್ 10: ಕೇರಳದ ಎಂಕೆಆರ್ ಪಿಳ್ಳೈ ನಾಗಲ್ಯಾಂಡ್ ಪೊಲೀಸ್ ಇಲಾಖೆ ಸೇರಿದ್ದು ಓರ್ವ ಪೇದೆಯಾಗಿ. ಆದರೆ ಅವರ ಇವತ್ತಿನ ಉದ್ಯಮ ಸಾಮ್ರಾಜ್ಯದ ಮೌಲ್ಯ ಬರೋಬ್ಬರಿ 400 ಕೋಟಿ. ಪೊಲೀಸ್ ಪೇದೆಯಾಗಿ ಇವತ್ತು ಇಷ್ಟು ದೊಡ್ಡ ಉದ್ಯಮಿಯಾಗಿ ಬೆಳೆದಿದ್ದೇ ಒಂದು ರೋಚಕ ವಂಚನೆಯ ಕಥೆ.
ಪೊಲೀಸ್ ಪೇದೆಯಾಗಿ ಇಲಾಖೆ ಸೇರಿದ ಪಿಳ್ಳೈ ನಿವೃತ್ತಿಯಾಗುವಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ಏರಿದ್ದರು. ಅದಾದ ನಂತರವೂ ನಾಗಾಲ್ಯಾಂಡ್ ಪೊಲೀಸರ ಸಲಹೆಗಾರರಾಗಿ ಮತ್ತೆ ಸರಕಾರಿ ಹುದ್ದೆ ಅನುಭವಿಸುತ್ತಿದ್ದಾರೆ.
ಅಷ್ಟೇ ಅಲ್ಲ ಶ್ರೀವಿಲಾಸಂ ಗ್ರೂಪ್ ಹೆಸರಿನ ಉದ್ಯಮ ಸಾಮ್ರಾಜ್ಯವನ್ನೂ ಅವರು ಮುನ್ನಡೆಸುತ್ತಿದ್ದಾರೆ. ನಾಗಾಲ್ಯಾಂಡ್ ನಿಂದ ನೋಟುಗಳನ್ನು, ಚಿನ್ನ, ಮತ್ತು ಇತರ ವಸ್ತುಗಳನ್ನು ಕೇರಳಕ್ಕೆ ಸಾಗಣೆ ಮಾಡಿದ ಆರೋಪ ಅವರ ಮೇಲಿದೆ. ಪೊಲೀಸ್ ಟ್ರಕ್ ಗಳ ಭದ್ರತೆಯಲ್ಲಿ ಕಳೆದೊಂದು ದಶಕದಲ್ಲಿ ಅವರು ಈ ರೀತಿ ಸಾಗಣೆ ಮಾಡಿದ್ದಾರೆ ಎನ್ನಲಾಗಿದೆ.
ಅಪನಗದೀಕರಣದ ವೇಳೆ ಪಿಳ್ಳೈ ಸುಮಾರು 50 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಆದರೆ ಅವರ ಆಸ್ತಿಗಳ ಮೂಲವನ್ನು ಬೆನ್ನತ್ತುತ್ತಿದ್ದಂತೆ ಒಂದೊಂದಾಗಿ ಹುಳುಕುಗಳು ಹೊರ ಬರುತ್ತಾ ಸಾಗಿದವು. ಕೊನೆಗೆ ಆದಾಯ ತೆರಿಗೆ ಇಲಾಖೆಯವರ ಕಣ್ಣಿಗೆ ಬಿದ್ದಿದ್ದು ಬರೋಬ್ಬರಿ 400 ಕೋಟಿ ಮೌಲ್ಯದ ಆಸ್ತಿ.
ಆತನ ಬೇನಾಮಿ ವ್ಯವಹಾರ ನಡೆಸುತ್ತಿರಬಹುದು ಮತ್ತು ಹಲವು ರಾಜಕಾರಣಿಗಳು ಮತ್ತು ಅಧಿಕಾರಿಗಳ ಬೇನಾಮಿ ಆಸ್ತಿಗೆ ಸೂತ್ರದಾರನಾಗಿರಬಹುದು ಎಂದು ಐಟಿ ಅಧಿಕಾರಿಗಳು ಶಂಕಿಸಿದ್ದಾರೆ.
ಎಂಕೆಆರ್ ಪಿಳ್ಳೈ ಒಡೆತನದ ಶ್ರೀವಿಲಾಸಂ ಗ್ರೂಪ್ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದು ಅವರ ಉದ್ಯಮಗಳ ಮೇಲೆ ಕರ್ನಾಟಕ, ನಾಗಾಲ್ಯಾಂಡ್, ಕೇರಳ, ದೆಹಲಿಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿತ್ತು. ಇದರಿಂದ ಅವರ ಉದ್ಯಮ ಸಾಮ್ರಾಜ್ಯ ಎಲ್ಲೆಲ್ಲಾ ಹರಡಿಕೊಂಡಿತ್ತು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.
ಟ್ರಕ್ ನಿಂದ ಬಯಲಾಯ್ತು ಸತ್ಯ
ಈತನ ಇಷ್ಟೂ ಕೃತ್ಯಗಳು ಬಯಲಾಗಲು ಕಾರಣವಾಗಿದ್ದು ನಾಗಾಲ್ಯಾಂಡ್ ಪೊಲೀಸರ ಒಂದು ಟ್ರಕ್. ಶುಕ್ರವಾರ ನಾಗಲ್ಯಾಂಡ್ ಪೊಲೀಸರ ಟ್ರಕ್ ಪಂಡಾಲಂ ನಲ್ಲಿರುವ ಪಿಳ್ಳೈ ಮನೆ ಮುಂದೆ ನಿಂತಿತ್ತು. ಅನುಮಾನದಲ್ಲಿ ಪೊಲೀಸರು ಪರಿಶೀಲನೆ ಮಾಡಿದಾಗ ಈ ಎಲ್ಲಾ ವಿಚಾರಗಳೂ ಬಯಲಾಗಿವೆ.
ಇದೀಗ ಪೊಲೀಸರು ಪಿಳ್ಳೈ ಹಾಗೂ ಅವರ ಪುತ್ರರಾದ ಅರುಣ್ ರಾಜ್, ವರುಣ್ ರಾಜ್ರನ್ನು ವಶಕ್ಕೆ ಪಡೆದು ವಿಚಾರಣೆ ನಡರೆಸುತ್ತಿದ್ದಾರೆ.