ಸಭೆಯಲ್ಲಿ ಪ್ರಧಾನಿ ಮೋದಿಯನ್ನು ಹೊಗಳಿದ್ದಕ್ಕೆ ಹೀಗಾ ಮಾಡೋದು?
ಲಕ್ನೋದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಬಹುಜನ ಸಮಾಜ ಪಕ್ಷದ ಚುನಾವಣಾ ರ್ಯಾಲಿಯ ವೇಳೆ, ವೇದಿಕೆಯಲ್ಲಿದ್ದ ಬಿಎಸ್ಪಿ ಮುಖಂಡರೊಬ್ಬರು ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ದಾರೆ.
ಲಕ್ನೋ, ನ 23 (ಪಿಟಿಐ) : ಉತ್ತರಪ್ರದೇಶದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಬಿಜೆಪಿ, ಕಾಂಗ್ರೆಸ್, ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಸಾರ್ವಜನಿಕರನ್ನು ಓಲೈಸುವ ಕೆಲಸ ಶುರು ಹಚ್ಚಿಕೊಂಡಿವೆ.
ಈ ನಡುವೆ ರಾಜಧಾನಿ ಲಕ್ನೋದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಬಹುಜನ ಸಮಾಜ ಪಕ್ಷದ ಚುನಾವಣಾ ರ್ಯಾಲಿಯ ವೇಳೆ, ವೇದಿಕೆಯಲ್ಲಿದ್ದ ಬಿಎಸ್ಪಿ ಮುಖಂಡರೊಬ್ಬರು ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ದಾರೆ. (ಘಟನೆಯ ವಿಡಿಯೋಗೆ ಇಲ್ಲಿ ಕ್ಲಿಕ್ಕಿಸಿ)
ಕಾಶ್ಮೀರದಲ್ಲಿನ ಸರ್ಜಿಕಲ್ ಸ್ಟ್ರೈಕ್ ಮತ್ತು ದೊಡ್ಡ ನೋಟನ್ನು ನಿಷೇಧಿಸಿ ಮೋದಿ ಉತ್ತಮ ಕೆಲಸ ಮಾಡಿದ್ದಾರೆಂದು ಬಿಎಸ್ಪಿ ಮುಖಂಡ ಭಾಷಣ ಮಾಡುತ್ತಿದ್ದಾಗ, ಪದೇ ಪದೇ ವೇದಿಕೆಯಲ್ಲಿದ್ದ ಪಕ್ಷದ ಕಾರ್ಯಕರ್ತ ಅವರಿಂದ ಮೈಕ್ ಕಿತ್ತು ತೆಗೆದುಕೊಳ್ಳುಲು ಪ್ರಯತ್ನಿಸುತ್ತಿದ್ದರು. (ಮೋದಿ ಬಂಧಿಸಿ, ಕಾಂಗ್ರೆಸ್ ಮುಖಂಡರ ಒತ್ತಾಯ)
ಆದರು ಛಲ ಬಿಡದ ತ್ರಿವಿಕ್ರಮನಂತೆ, ಬಿಎಸ್ಪಿ ಮುಖಂಡ ತಾನು ಏನು ಹೇಳಬೇಕೋ ಅದನ್ನು ಅತ್ಯಂತ ಪ್ರಯಾಸದಿಂದ ಹೇಳಿ ಮುಗಿಸಿ 'ಧನ್ಯವಾದ್' ಎಂದು ಹೇಳಿ ವೇದಿಕೆಯಿಂದ ಕೆಳಗಿಳಿದರು.
ವೇದಿಕೆಯಲ್ಲಿ ನಡೆದ ಘಟನೆಗೆ ಬಿಎಸ್ಪಿ ನಾಯಕಿ ಮಾಯಾವತಿ ಕೂಡಾ ಸಾಕ್ಷಿಯಾದರು. ನೋಟು ಬ್ಯಾನ್ ವಿಚಾರದಲ್ಲಿ ಪ್ರಧಾನಿ ಮೋದಿ ವಿರುದ್ದ ಕೆಂಡಕಾರಿದ್ದ ಕೆಲವೇ ಹೊತ್ತಿನಲ್ಲಿ ಮಾಯಾವತಿ ತಮ್ಮದೇ ಪಕ್ಷದ ಮುಖಂಡರಿಂದ ತೀವ್ರ ಮುಜುಗರ ಎದುರಿಸಬೇಕಾಯಿತು.
ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಮ್ಮ ಸೇನೆ ಸರ್ಜಿಕಲ್ ದಾಳಿ ನಡೆಸಿದೆ. ಐನೂರು ಮತ್ತು ಸಾವಿರ ರೂಪಾಯಿ ನೋಟನ್ನು ಪ್ರಧಾನಿ ಮೋದಿ ನಿಷೇಧಿಸಿ ಅತ್ಯುತ್ತಮ ಕೆಲಸ ಮಾಡಿದ್ದಾರೆಂದು ಬಿಎಸ್ಪಿ ಮುಖಂಡ ವೇದಿಕೆಯಲ್ಲಿ ಮೋದಿಗೆ ಶಹಬ್ಬಾಸ್ ಗಿರಿ ನೀಡುತ್ತಿದ್ದಾಗ, ಮಾಯಾವತಿ ತಬ್ಬಿಬ್ಬಾಗಿ ಆ ಮುಖಂಡರನ್ನೇ ನೋಡುತ್ತಿದ್ದರು.
ಬಿಎಸ್ಪಿ ಮುಖಂಡ ಪ್ರಧಾನಿಯನ್ನು ಹೊಗಳುತ್ತಿದ್ದಾಗ ಸಾರ್ವಜನಿಕರಿಂದ ಭಾರೀ ಕರತಾಡನ ವ್ಯಕ್ತವಾಗುತ್ತಿದ್ದದ್ದು, ಮಾಯಾವತಿಯನ್ನು ಮತ್ತಷ್ಟು ಮುಜುಗರಕ್ಕೀಡಾಗುವಂತೆ ಮಾಡಿತು.