ಯೋಗಿ ಆದೇಶಕ್ಕಿಲ್ಲ ಕಿಮ್ಮತ್ತು, ತಲೆ ಎತ್ತುತ್ತಿವೆ ಅನಧಿಕೃತ ಕಸಾಯಿಖಾನೆ
ಬಫೆಲೋ (ಕೋಣ – ಎಮ್ಮೆ) ಮಾಂಸಕ್ಕೆ ಕೊಲ್ಲಿ ರಾಷ್ಟ್ರಗಳಿಂದ ವಿಪರೀತ ಬೇಡಿಕೆ ಹೆಚ್ಚಾಗಿದ್ದು ಉತ್ತರ ಪ್ರದೇಶದಲ್ಲಿ ಅನಧಿಕೃತ ಕಸಾಯಿಖಾನೆಗಳು ಸದ್ದಿಲ್ಲದೆ ತಲೆ ಎತ್ತುತ್ತಿವೆ.
ಲಕ್ನೊ, ಮಾರ್ಚ್ 28: ಬಫೆಲೋ (ಕೋಣ - ಎಮ್ಮೆ) ಮಾಂಸಕ್ಕೆ ಕೊಲ್ಲಿ ರಾಷ್ಟ್ರಗಳಿಂದ ವಿಪರೀತ ಬೇಡಿಕೆ ಹೆಚ್ಚಾಗಿದ್ದು ಉತ್ತರ ಪ್ರದೇಶದಲ್ಲಿ ಅನಧಿಕೃತ ಕಸಾಯಿಖಾನೆಗಳು ಸದ್ದಿಲ್ಲದೆ ತಲೆ ಎತ್ತುತ್ತಿವೆ.
ಸದ್ಯ ದೇಶದಲ್ಲಿ 72 ಕಸಾಯಿಖಾನೆಗಳಿದ್ದು ಇದರಲ್ಲಿ ಉತ್ತರ ಪ್ರದೇಶವೊಂದರಲ್ಲೇ 32 ಸರಕಾರಿ ಪರವಾನಿಗೆ ಪಡೆದ ಕಸಾಯಿಖಾನೆಗಳಿವೆ. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರ ಅನಧಿಕೃತ ಕಸಾಯಿಖಾನೆಗಳಿಗೆ ಬಾಗಿಲು ಹಾಕುವ ಕೆಲಸಕ್ಕೆ ಚಾಲನೆ ನೀಡಿದ್ದರು. ಆದರೆ ಬೇಡಿಕೆ ವಿಪರೀತ ಹೆಚ್ಚಾದ ಹಿನ್ನಲೆಯಲ್ಲಿ ಅನಧಿಕೃತ ಕಸಾಯಿಖಾನೆಗಳು ಸದ್ದಿಲ್ಲದೆ ತಲೆ ಎತ್ತುತ್ತಿವೆ.[ಮಂಗಳೂರಿಗೆ ಆಗಮಿಸಲಿದ್ದಾರೆ ಯೋಗಿ ಆದಿತ್ಯನಾಥ್]
ಮೂಲಗಳ ಪ್ರಕಾರ ಕೊಲ್ಲಿ ರಾಷ್ಟ್ರಗಳಲ್ಲಿ ಹಲಾಲ್ ಮಾಂಸಕ್ಕೆ ವಿಪರೀತ ಬೇಡಿಕೆ ಇದೆ. ಈಗಾಗಲೇ ಸಿಎಂ ಆದೇಶದಂತೆ ಅನಧಿಕೃತ ಕಸಾಯಿಖಾನೆಗಳಿಗೆ ಬಾಗಿಲು ಬಿದ್ದಿರುವುದರಿಂದ ಮಾಂಸದ ಕೊರತೆಯೂ ಉಂಟಾಗಿದೆ. ಇದರಿಂದ ಮುಖ್ಯಮಂತ್ರಿಯ ನಿರ್ಧಾರದ ವಿರುದ್ಧ ಅಲ್ಲಿನ ಮಾಂಸ ವರ್ತಕರು ತಿರುಗಿ ಬಿದ್ದಿದ್ದು ಪ್ರತಿಭಟನೆಗೂ ಇಳಿದಿದ್ದರು.
ಅಚ್ಚರಿಯ ವಿಚಾರ ಎಂದರೆ ಒಂದು ಕಡೆಯಲ್ಲಿ ಕಸಾಯಿಖಾನೆಗಳನ್ನು ಅಧಿಕಾರಿಗಳು ಮುಚ್ಚುತ್ತಾ ಬರುತ್ತಿದ್ದರೆ ಮತ್ತೊಂದು ಕಡೆಯಲ್ಲಿ ಕಸಾಯಿಖಾನೆಗಳು ಜಾಸ್ತಿಯಾಗುತ್ತಿರುವ ಮಾಹಿತಿಗಳು ಬರುತ್ತಿವೆ.[ಉತ್ತರಪ್ರದೇಶದ ರೈಲ್ವೆ ಹಳಿ ಬಳಿ ಬಾಂಬ್ ಸ್ಫೋಟ]
4 ಮಾತ್ರ ಸರಕಾರಿ
32ರಲ್ಲಿ 4 ಕಸಾಯಿಖಾನೆಗಳನ್ನು ಮಾತ್ರ ಸರಕಾರ ನಡೆಸುತ್ತದೆ. ಇದರಲ್ಲಿ ಎರಡು ಚಾಲ್ತಿಯಲ್ಲಿದ್ದರೆ, ಇನ್ನೆರಡು ನಿರ್ಮಾಣ ಹಂತದಲ್ಲಿವೆ. ಇನ್ನು ರಾಜ್ಯದಲ್ಲಿ ಅನಧಿಕೃತ ಕಸಾಯಿಖಾನೆಗಳ ಬಗ್ಗೆ ಸರಕಾರದ ಬಳಿಯಲ್ಲಿ ಸರಿಯಾದ ಮಾಹಿತಿಗಳಿಲ್ಲ. ಅಂದಾಜಿನ ಪ್ರಕಾರ ಸುಮಾರು 150-200 ವಧೆ ಕೇಂದ್ರಗಳು ಇರಬಹುದು ಎಂದುಕೊಳ್ಳಲಾಗಿದೆ.
ಹಾಗಾಗಿ ದೊಡ್ಡ ಮಟ್ಟಕ್ಕೆ ಮಾಂಸದ ಬೇಡಿಕೆಯನ್ನು ಸರಿದೂಗಿಸುತ್ತಿದ್ದುದು ಇವೇ ಅನಧಿಕೃತ ಕಸಾಯಿಖಾನೆಗಳು. ಹೀಗಾಗಿ ಏಕಾ ಏಕಿ ಅನಧಿಕೃತ ಕಸಾಯಿಖಾನೆಗಳನ್ನು ಬಂದ್ ಮಾಡಿದ ಪರಿಣಾಮ ಬೇಡಿಕೆಯಷ್ಟು ಮಾಂಸ ಪೂರೈಸಲು ಸಾಧ್ಯವಿಲ್ಲ.
ಎಲ್ಲಿ ಬೇಡಿಕೆ ಜಾಸ್ತಿ ಇರುತ್ತದೋ ಅಲ್ಲಿ ಪೂರೈಕೆಗೆ ಬೇಕಾದ ದಾರಿಗಳನ್ನು ಜನರೇ ಕಂಡುಕೊಳ್ಳುತ್ತಾರೆ. ಇದು ನಿಸರ್ಗ ನಿಯಮ. ಬಹುಶಃ ಇಲ್ಲೂ ಜನರೇ ಅನಧಿಕೃತ ಕಸಾಯಿಖಾನೆಗಳನ್ನು ಆರಂಭಿಸಿ ಬೇಡಿಕೆ ನೀಗಿಸುವ ಸಾಧ್ಯತೆಗಳಿವೆ.
ಅಂದಹಾಗೆ ಕಳೆದ ವರ್ಷ 26,685 ಕೋಟಿ ಬೆಲೆಯ 5,65,958.20 ಮೆಟ್ರಿಕ್ ಟನ್ ಮಾಂಸವನ್ನು ಉತ್ತರ ಪ್ರದೇಶ ಉತ್ಪಾದಿಸಿದೆ. ಇದರಲ್ಲಿ ಅರ್ಧಕರ್ಧ ಅನಧಿಕೃತ ಕಸಾಯಿಖಾನೆಗಳಿಂದ ಬರುತ್ತದೆ. ಇದೀಗ ಇವುಗಳನ್ನು ಮುಚ್ಚುವುದರಿಂದ ರಾಜ್ಯದ ಮತ್ತು ರಾಷ್ಟ್ರದ ಬೊಕ್ಕಸಕ್ಕೆ ಸುಮಾರು 11,350ಕೋಟಿ ನಷ್ಟವಾಗುವ ಸಾಧ್ಯತೆ ಇದೆ.