ಉಗ್ರರ ಭೀತಿ: 4 ರಾಜ್ಯಗಳ 22 ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್!
ನವದೆಹಲಿ, ಅಕ್ಟೋಬರ್, 07 : ಪಾಕಿಸ್ತಾನ ಮೇಲೆ ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಿಂದಾಗಿ ಭಯೋತ್ಪಾದಕರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ. ಮಾಹಿತಿ ಮೇರೆಗೆ ದೇಶದ 4 ರಾಜ್ಯಗಳ 22 ವಿಮಾನ ನಿಲ್ದಾಣಗಳಿಗೆ ಬಿಗಿ ಭದ್ರತೆ ಹೆಚ್ಚಿಸಲಾಗಿದೆ.
ಪಾಕ್ ಗಡಿಯ ಪಂಜಾಬ್, ಜಮ್ಮು ಮತ್ತು ಕಾಶ್ಮೀರ್, ಗುಜರಾತ್, ಹಾಗೂ ರಾಜಸ್ಥಾನದ ಎಲ್ಲಾ ವಿಮಾನ ನಿಲ್ದಾಣಗಳು ಉಗ್ರರ ಟಾರ್ಗೆಟ್ ಆಗಿವೆ. ಇದರಿಂದ ಬಿಗಿ ಭದ್ರತೆ ಕೈಗೊಳ್ಳಿ ಎಂದು ಆಯಾ ರಾಜ್ಯಗಳ ಮುಖ್ಯ ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗುಪ್ತಚರ ಇಲಾಖೆ ಪತ್ರ ಬರೆದಿದೆ.
ಗುಪ್ತರಚರ ಇಲಾಖೆ ಮಾಹಿತಿ ನೀಡಿದ ಮೇರೆಗೆ ನಾಲ್ಕು ರಾಜ್ಯಗಳ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು. ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಯಾಣಿಕ ಬ್ಯಾಗ್, ಸರಕು ಸಾಗಣೆ ಸ್ಥಳಗಳ ಮೇಲೆ ಕಣ್ಣಿಡಲಿದೆ.
ಪಾಕ್ ಗಡಿಯಲ್ಲಿ ಭಾರತ ನಡೆಸಿದ ದಾಳಿಯ ನಂತರ ಲಷ್ಕರ್ ಸೇರಿದಂತೆ ಪಾಕ್ ನ ಭಯೋತ್ಪಾದನಾ ಸಂಘಟನೆಗಳು ಭಾರತದಲ್ಲಿ ದಾಳಿ ನಡೆಸಲು ಸಂಚು ರೂಪಿಸುತ್ತಿವೆ ಎಂದು ಗುಪ್ತಚರ ಇಲಾಖೆ ಹೇಳಿದೆ.
ಹಬ್ಬದ ಸೀಸನ್ ನಲ್ಲಿ ಪ್ರಮುಖ ನಗರಗಳ ಜನಸಂದಣಿ ಪ್ರದೇಶಗಳು ಭಯೋತ್ಪಾದಕರ ಗುರಿಯಾಗಿವೆ. ಹಾಗಾಗಿ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಸಿ ಐ ಎಸ್ ಎಫ್ ನಿರ್ದೇಶಕ ಜನರಲ್ ಓ.ಪಿ ಸಿಂಗ್ ತಿಳಿಸಿದ್ದಾರೆ.